ಆ್ಯಪ್ನಗರ

ನುಡಿದಂತೆ ನಡೆದವರು ಸ್ವಾಮಿ ವಿವೇಕಾನಂದ

ಜೀವನದಲ್ಲಿ ನುಡಿದಂತೆ ನಡೆದವರು ಹಾಗೂ ದೀನದಲಿತರು, ನಿರ್ಗತಿಕರ ಸೇವೆಯಲ್ಲಿ ದೇವರನ್ನು ಕಾಣಬಹುದು ಎಂದು ನಂಬಿದ್ದವರು ಸ್ವಾಮಿ ವಿವೇಕಾನಂದರು ಎಂದು ಸಾಹಿತಿ ರಮೇಶ್‌ ಬೊಂಗಾಳೆ ಹೇಳಿದರು.

Vijaya Karnataka 13 Jan 2019, 5:00 am
ಚಿಕ್ಕಮಗಳೂರು : ಜೀವನದಲ್ಲಿ ನುಡಿದಂತೆ ನಡೆದವರು ಹಾಗೂ ದೀನದಲಿತರು, ನಿರ್ಗತಿಕರ ಸೇವೆಯಲ್ಲಿ ದೇವರನ್ನು ಕಾಣಬಹುದು ಎಂದು ನಂಬಿದ್ದವರು ಸ್ವಾಮಿ ವಿವೇಕಾನಂದರು ಎಂದು ಸಾಹಿತಿ ರಮೇಶ್‌ ಬೊಂಗಾಳೆ ಹೇಳಿದರು.
Vijaya Karnataka Web CKM-12ARAGAP6


ನಗರದ ಐಡಿಎಸ್‌ಜಿ ಸರಕಾರಿ ಕಾಲೇಜಿನಲ್ಲಿ ಶನಿವಾರ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದಿಂದ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನೋತ್ಸವ ರಾಷ್ಟ್ರೀಯ ಯುವದಿನ ಸಮಾರಂಭದಲ್ಲಿ ವಿವೇಕಾನಂದ ಮತ್ತು ಸೇವೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಜೀವನ ಕ್ಷಣಿಕ, ಸೇವೆ ಶಾಶ್ವತ. ಸೇವೆಯ ಮೂಲಕ ದೇವರನ್ನು ಕಾಣಬೇಕು ಎಂದು ವಿವೇಕಾನಂದರು ಹೇಳಿದ್ದರು. ದೇಶವನ್ನು ಪ್ಲೇಗ್‌ ರೋಗ ಆವರಿಸಿದಾಗ, ಕ್ಷಾಮಕ್ಕೆ ತುತ್ತಾದಾಗ ಅವರು ಸಂತ್ರಸ್ತರ ಸೇವೆಗೆ ಮುಂದಾಗುವ ಮೂಲಕ ಸೇವೆಯ ಮಹತ್ವವನ್ನು ವಿಶ್ವಕ್ಕೆ ಸಾರಿದರು. ನುಡಿದಂತೆಯೇ ಜೀವನದಲ್ಲಿ ನಡೆದುಕೊಂಡರು ಎಂದರು.

ದೈಹಿಕ ಶ್ರಮವಷ್ಟೇ ಸೇವೆಯಲ್ಲ ಎಂದಿದ್ದ ಅವರು, ಒಂಬತ್ತು ವಿಧದ ಸೇವೆಯನ್ನು ಉಲ್ಲೇಖಿಸಿದ್ದಾರೆ. ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮದ ಜತೆಗೆ ಮನಸ್ಸು, ಬುದ್ಧಿ, ವಿವೇಕ, ವಿವೇಚನೆ ಬಳಸಿ ಸೇವೆ ಮಾಡಬಹುದು. ಒಂಬತ್ತನ್ನೂ ಒಗ್ಗೂಡಿಸಿಕೊಂಡು ಅದರಿಂದ ಬರುವ ಶಕ್ತಿಧಾರೆಯನ್ನು ಸಮಾಜಕ್ಕೆ ಹರಿಸಬೇಕು. ಸೇವೆಗೆ ಬದಲಾಗಿ ಏನನ್ನೂ ನಿರೀಕ್ಷಿಸಬಾರದು ಎಂದಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಟಿ.ಸಿ.ಬಸವರಾಜಪ್ಪ ಮಾತನಾಡಿ, ಜಗತ್ತಿಗೆ ಕವಿದಿದ್ದ ಕತ್ತಲನ್ನು ಓಡಿಸುವ ಪ್ರಯತ್ನ ಮಾಡಿದವರು ವಿವೇಕಾನಂದರು. ಭಾರತದ ಹಿರಿಮೆಯನ್ನು ವಿಶ್ವಕ್ಕೆ ಪರಿಚಯಿಸುವ ಜತೆಗೆ ಭಾರತೀಯರಲ್ಲೂ ಅರಿವು ಮೂಡಿಸಿದರು ಎಂದು ಹೇಳಿದರು. ಸಮಾರಂಭ ಉದ್ಘಾಟಿಸಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ನಾರಾಯಣ ಮಾತನಾಡಿದರು. ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರಾರ‍ಯಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಪ್ರಾಧ್ಯಾಪಾಕ ಡಾ.ಎಚ್‌.ಎಂ.ಮಹೇಶ್‌, ಪುಟ್ಟಸ್ವಾಮಿ ಹಾಜರಿದ್ದರು. ಪುನೀತ್‌ ಪ್ರಾರ್ಥಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಬಿ.ಯೋಗೀಶ್‌ ಸ್ವಾಗತಿಸಿ, ಉಪನ್ಯಾಸಕ ಸುಧನ್ವ ವಂದಿಸಿದರು.
---
ಭಯ, ಕೀಳರಿಮೆ, ಅಂಜಿಕೆಯೇ ಪ್ರಪಂಚದ ಎಲ್ಲ ದುರವಸ್ಥೆಗಳಿಗೆ ಕಾರಣ ಎಂದು ನಂಬಿದ್ದ ವಿವೇಕಾನಂದರು, ನಿರ್ಭೀತ ಮನೋಭಾವದೊಂದಿಗೆ ಮುನ್ನುಗ್ಗಿದರೆ ಎಲ್ಲ ಕಷ್ಟಗಳಿಂದ ಪಾರಾಗಬಹುದು ಎಂದಿದ್ದರು. ಸೇವೆಯ ಮಹತ್ವವನ್ನು ಪ್ರಖರವಾಗಿ ಪ್ರತಿಪಾದಿಸುತ್ತ ರಾಮಕೃಷ್ಣ ಮಿಷನ್‌ ಮೂಲಕ ಮಠಗಳನ್ನು ಸ್ಥಾಪಿಸಿ ಶಿಕ್ಷಣ ಮತ್ತು ಸೇವೆಗೆ ಆದ್ಯತೆ ನೀಡಿದರು.

-ರಮೇಶ್‌ ಬೊಂಗಾಳೆ,ಸಾಹಿತಿ

-----------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ