ಆ್ಯಪ್ನಗರ

ಅಣ್ಣಾಮಲೈ, ಸೆಂಥಿಲ್‌ ರಾಜೀನಾಮೆ ಒಳಮರ್ಮ

ತಮಿಳುನಾಡು ಮೂಲದ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಮತ್ತು ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ರಾಜೀನಾಮೆ ಹಿಂದೆ ತಮಿಳುನಾಡಿನ ಭವಿಷ್ಯದ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

Vijaya Karnataka 7 Sep 2019, 5:00 am
ಆರಗ ರವಿ
Vijaya Karnataka Web annamalai senthils resignation pulp
ಅಣ್ಣಾಮಲೈ, ಸೆಂಥಿಲ್‌ ರಾಜೀನಾಮೆ ಒಳಮರ್ಮ

ಚಿಕ್ಕಮಗಳೂರು :
ತಮಿಳುನಾಡು ಮೂಲದ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಮತ್ತು ಐಎಎಸ್‌ ಅಧಿಕಾರಿ ಸಸಿಕಾಂತ್‌ ಸೆಂಥಿಲ್‌ ರಾಜೀನಾಮೆ ಹಿಂದೆ ತಮಿಳುನಾಡಿನ ಭವಿಷ್ಯದ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ತಮಿಳುನಾಡಿನಲ್ಲಿ ಕರುಣಾನಿಧಿ ಮತ್ತು ಜಯಲಲಿತ ಯುಗಾಂತ್ಯಗೊಂಡಿದ್ದು, ಬಿಜೆಪಿ ಅಲ್ಲಿ ತನ್ನ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳುವ ಉಮೇದಿನಲ್ಲಿದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಕೈಗೂಡದ ಕಾರಣ ಹೊಸಮುಖಗಳನ್ನೇ ಬೆಳೆಸುವುದು ಬಿಜೆಪಿಯ ಉದ್ದೇಶ ಎನ್ನಲಾಗಿದೆ.

ಐಪಿಎಸ್‌ ಅಧಿಕಾರಿಯಾಗಿ ಕರ್ನಾಟಕದಲ್ಲಿ ಉತ್ತಮ ಹೆಸರು ಗಳಿಸಿದ್ದ ಕೆ.ಅಣ್ಣಾಮಲೈ ರಾಜೀನಾಮೆ ಹಿಂದೆ ಇಂತಹ ರಾಜಕೀಯ ಲೆಕ್ಕಾಚಾರ ಇರುವುದು ಪಕ್ಕಾ. ಆದರೆ, ಕೇಂದ್ರ ಸರಕಾರದ ವಿರುದ್ಧವೇ ಅಸಮಾಧಾನ ಹೊರಹಾಕಿರುವ ಸಸಿಕಾಂತ್‌ ಸೆಂಥಿಲ್‌ ರಾಜಕೀಯ ಹಾದಿ ಹಿಡಿಯುತ್ತಾರೋ ಅಥವಾ ಬೇರೆಯದ್ದೇ ಉದ್ದೇಶದೊಂದಿಗೆ ರಾಜೀನಾಮೆ ಸಲ್ಲಿಸಿದ್ದಾರೋ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.

ಹಾಗೆ ನೋಡಿದರೆ ಅಣ್ಣಾಮಲೈ, ಸಸಿಕಾಂತ್‌ ಸೆಂಥಿಲ್‌ ರಾಜೀನಾಮೆ ನಿರ್ಧಾರವನ್ನು ದಿಢೀರ್‌ ಕೈಗೊಂಡಿಲ್ಲ. ಐಪಿಎಸ್‌ ಹುದ್ದೆಗೆ ಬರುವಾಗಲೇ ಅಣ್ಣಾಮಲೈ 10 ವರ್ಷ ಸೇವೆಯ ಗುರಿಯನ್ನು ಮಾತ್ರ ಇಟ್ಟುಕೊಂಡಿದ್ದರು. ತಮ್ಮ ಗುರಿಯನ್ನು ಮೊದಲೇ ನಿಶ್ಚಯಿಸಿಕೊಂಡಿದ್ದ ಅಣ್ಣಾಮಲೈ ತಮಿಳುನಾಡು ರಾಜಕೀಯದಲ್ಲಿ ಸಕ್ರಿಯವಾಗುವ ಉದ್ದೇಶದಿಂದಲೇ ರಾಜೀನಾಮೆ ಸಲ್ಲಿಸಿರುವುದರಲ್ಲಿ ಅನುಮಾನವಿಲ್ಲ.

ಬಿಜೆಪಿಯಲ್ಲಿ ರಾಜಕೀಯ ಭವಿಷ್ಯ ಕಟ್ಟಿಕೊಳ್ಳಬೇಕೊ, ಸ್ವಂತ ಪಕ್ಷ ಕಟ್ಟಬೇಕೋ ಅಥವಾ ಈಗಾಗಲೇ ತಮಿಳುನಾಡಿನಲ್ಲಿರುವ ಮುಂಚೂಣಿ ಪಕ್ಷಗಳಲ್ಲಿ ಗುರುತಿಸಿಕೊಳ್ಳಬೇಕೋ ಎಂಬ ಜಿಜ್ಞಾಸೆ ಇದ್ದರೂ ಬಿಜೆಪಿಯಲ್ಲೇ ಅಣ್ಣಾಮಲೈ ಗುರುತಿಸಿಕೊಳ್ಳುತ್ತಾರೆ ಎಂಬ ಮಾತು ಜನಜನಿತವಾಗಿದೆ.

ಸಸಿಕಾಂತ್‌ ಸೆಂಥಿಲ್‌ ಕೂಡ ರಾಜೀನಾಮೆ ನಿರ್ಧಾರವನ್ನು ದಿಢೀರ್‌ ಕೈಗೊಂಡಿಲ್ಲ. 6 ತಿಂಗಳ ಹಿಂದೆಯೇ ರಾಜೀನಾಮೆ ಬಗ್ಗೆ ಸೆಂಥಿಲ್‌ ನಿರ್ಧಾರ ಕೈಗೊಂಡಿದ್ದರು ಎಂಬುದನ್ನು ಅವರ ಆಪ್ತವಲಯ ಖಚಿತ ಪಡಿಸಿದೆ. ಉತ್ತಮ ಹೆಸರು ಇರುವಾಗಲೇ ಭವಿಷ್ಯದ ಅವಕಾಶಗಳನ್ನು ಬಾಚಿಕೊಳ್ಳುವ ಉದ್ದೇಶ ರಾಜೀನಾಮೆಯ ಹಿಂದಿದೆ ಎಂಬ ಮಾತುಗಳನ್ನು ಅಲ್ಲಗಳೆಯುವಂತಿಲ್ಲ.
---------

ಹೊಸ ಕನಸಿಗೆ ದಾರಿ
ಐಎಎಸ್‌, ಐಪಿಎಸ್‌ ಸೇರಿದಂತೆ ಉನ್ನತ ಹುದ್ದೆಯ ಅಧಿಕಾರಿಗಳು ಭಾರತದಲ್ಲಿ ಮಾತ್ರ 30-35 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುತ್ತಾರೆ. ಆದರೆ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು 10-15 ವರ್ಷ ಸೇವೆ ಸಲ್ಲಿಸಿ ನಂತರ ತಮ್ಮಿಷ್ಟದ ಉದ್ದಿಮೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತಿತರ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಭಾರತದಲ್ಲೂ ಇತ್ತೀಚಿನ ದಿನಗಳಲ್ಲಿ ಯುವ ಅಧಿಕಾರಿಗಳಲ್ಲಿ ಈ ಮನೋಭಾವ ಬೆಳೆಯುತ್ತಿದೆ. ಈ ರಾಜೀನಾಮೆಗಳಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ.

- ಹೆಸರು ಹೇಳಲು ಇಚ್ಛಿಸದ ಐಪಿಎಸ್‌ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ