ಆ್ಯಪ್ನಗರ

ಅತಿರುದ್ರ ಮಹಾಯಾಗದ ಪೂರ್ಣಾಹುತಿ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದವರು ಶ್ರೀ ಶಾರದಾ ಪೀಠದಲ್ಲಿ ಕಳೆದ ಹನ್ನೆರಡು ದಿನಗಳಿಂದ ಕೈಗೊಂಡಿದ್ದ ಅತಿರುದ್ರ ಮಹಾಯಾಗವು ಭಾನುವಾರ ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪೂರ್ಣಾಹುತಿಯಾಯಿತು.

Vijaya Karnataka 16 Jan 2018, 5:00 am

ಶೃಂಗೇರಿ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದವರು ಶ್ರೀ ಶಾರದಾ ಪೀಠದಲ್ಲಿ ಕಳೆದ ಹನ್ನೆರಡು ದಿನಗಳಿಂದ ಕೈಗೊಂಡಿದ್ದ ಅತಿರುದ್ರ ಮಹಾಯಾಗವು ಭಾನುವಾರ ಉಭಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪೂರ್ಣಾಹುತಿಯಾಯಿತು.

ಯಾಗವು ಶ್ರೀಮಠದ ಎದುರಿನ ಶ್ರೀ ಚಂದ್ರಶೇಖರ ಭಾರತಿ ಸಭಾಂಗಣದ ಯಾಗ ಶಾಲೆಯಲ್ಲಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ಸುಸಂಪನ್ನಗೊಂಡಿತು. ಜ.3ರಿಂದ ಆರಂಭಗೊಂಡಿದ್ದ ಯಾಗದ ಸಂಕಲ್ಪವನ್ನು ಎಚ್‌.ಡಿ.ದೇವೇಗೌಡ ದಂಪತಿ ಕೈಗೊಂಡಿದ್ದರು. 150ಕ್ಕೂ ಹೆಚ್ಚು ಋುತ್ವಿಜರು ಮಹಾಯಾಗದಲ್ಲಿ ಭಾಗವಹಿಸಿದ್ದರು. ಪೂರ್ಣಾಹುತಿಯಲ್ಲಿ ದೇವೇಗೌಡ, ಪತ್ನಿ ಚನ್ನಮ್ಮ, ಮಕ್ಕಳಾದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ, ಎಚ್‌.ಡಿ.ಬಾಲಕೃಷ್ಣೇಗೌಡ, ಅನಿತಾ, ಭವಾನಿ, ಪ್ರಜ್ವಲ್‌ಗೌಡ ಸಹಿತ ಕುಟುಂಬದ ಎಲ್ಲ ಸದಸ್ಯರು ಪಾಲ್ಗೊಂಡು, ಜಗದ್ಗುರುಗಳ ಆಶೀರ್ವಾದ ಪಡೆದರು. ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿದ್ದ ಮಾಜಿ ಪ್ರಧಾನಿ, ಪಟ್ಟಣ ಸಮೀಪದ ಎಲ್ಲ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದರು.

1952ರಲ್ಲಿ ಹೊಳೆಮರಸೀಪುರ ಶಾಸಕರಾಗಿದ್ದ ಎ.ಜಿ.ರಾಮಚಂದ್ರರಾಯರು ದೇವೇಗೌಡರ ರಾಜಕೀಯ ಗುರುವಾಗಿದ್ದರು. ಅವರೇ ಗೌಡರನ್ನು ಶ್ರೀ ಶಾರದಾ ಪೀಠಕ್ಕೆ ಕರೆತಂದು ರಾಜಕೀಯಕ್ಕೆ ಮುನ್ನುಡಿ ಬರೆದಿದ್ದರು. ಅಂದಿನಿಂದಲೂ ಮಠದ ಪರಮ ಭಕ್ತರಾಗಿರುವ ಗೌಡರು, ವರ್ಷದಲ್ಲಿ ಹಲವಾರು ಬಾರಿ ಭೇಟಿ ನೀಡಿ ಶ್ರೀ ಶಾರದೆಗೆ ಪೂಜೆ ಸಲ್ಲಿಸುತ್ತಾರೆ. ಮುಂಬರುವ ವಿಧಾನಸಭೆ ಚುನಾವಣೆಗೆ ಪೂರ್ವವಾಗಿ ಕೈಗೊಂಡಿರುವ ಈ ಯಾಗ ಮಹತ್ವ ಪಡೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ