ಆ್ಯಪ್ನಗರ

ಜ್ಞಾನಕ್ಕಾಗಿ ಶ್ರಮಿಸಿದರೆ ಜೀವನ ಸಾರ್ಥಕ

ಶ್ರೀ ಶಾರದಾ ಪೀಠದಲ್ಲಿ ದೀಪಾವಳಿ ಅಂಗವಾಗಿ ಬಲಿ ಪಾಡ್ಯಮಿಯನ್ನು ಗುರುವಾರ ಆಚರಿಸಲಾಯಿತು.

Vijaya Karnataka 9 Nov 2018, 5:00 am
ಶೃಂಗೇರಿ : ಶ್ರೀ ಶಾರದಾ ಪೀಠದಲ್ಲಿ ದೀಪಾವಳಿ ಅಂಗವಾಗಿ ಬಲಿ ಪಾಡ್ಯಮಿಯನ್ನು ಗುರುವಾರ ಆಚರಿಸಲಾಯಿತು.
Vijaya Karnataka Web CKM-8SRI1


ನರಸಿಂಹವನದ ಗುರುಭವನದ ಗೋಶಾಲೆಯಲ್ಲಿ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಗೋವುಗಳಿಗೆ ಪೂಜೆ ಸಲ್ಲಿಸಿದರು. ಗೋಶಾಲೆಯ ಎಲ್ಲ ಹಸು, ಕರುಗಳಿಗೆ ಮೈತೊಳೆಸಿ, ಬಣ್ಣದ ಚಿತ್ತಾರ ಮೂಡಿಸಿ, ರೇಷ್ಮೆ ಹೊದಿಕೆ ಹಾಕಲಾಗಿತ್ತು. ಗೋಶಾಲೆಗೆ ವಾದ್ಯ ಮೇಳ, ಛತ್ರಿ ಚಾಮರ, ವೇದಘೋಷದೊಂದಿಗೆ ಆಗಮಿಸಿದ ಶ್ರೀಗಳು ಗೋವುಗಳಿಗೆ ಆರತಿ ಬೆಳಗಿ ಸಿಹಿ ತಿನಿಸುಗಳನ್ನು ನೀಡಿದರು. ನಂತರ ಜಗದ್ಗುರುಗಳು ಶ್ರೀಮಠದ ಆನೆಗಳಿಗೆ ಪೂಜೆ ನೆರವೇರಿಸಿ, ತಿಂಡಿ ನೀಡಿದರು.

ಇದಕ್ಕೂ ಮೊದಲು ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಶ್ರೀ ಶಾರದಾ ಸನ್ನಿಧಿಯಲ್ಲಿ ಚಂದ್ರಮೌಳೇಶ್ವರ ಹಾಗೂ ಶ್ರೀಚಕ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ನಾವು ಪ್ರತಿ ವರ್ಷ ಆಚರಣೆ ಮಾಡುವ ಉತ್ಸವಗಳಲ್ಲಿ ದೀಪಾವಳಿಯು ಪ್ರಮುಖವಾದ ಉತ್ಸವವಾಗಿದೆ. ದೀಪಾವಳಿ ಎಂದರೆ ದೀಪಗಳ ಸರಮಾಲೆ. ದೀಪ ಜ್ಞಾನದ ಸಂಕೇತವಾಗಿದೆ. ಕತ್ತಲೆಯನ್ನು ಹೋಗಲಾಡಿಸಿ, ಬೆಳಕಿನೆಡೆಗೆ ಹೋಗಬೇಕೆಂಬುದು ದೀಪಾವಳಿಯ ಸಂದೇಶವಾಗಿದೆ. ಕತ್ತಲೆಯೆಂದರೆ ಅಜ್ಞಾನ. ಅಜ್ಞಾನ ನಿವೃತ್ತಿಯಾಗಿ ಜ್ಞಾನ ಪ್ರಾಪ್ತಿಯಾಗಬೇಕೆಂಬುದಾಗಿದೆ. ಜ್ಞಾನವೆಂಬುದು ಮನುಷ್ಯನಿಗೆ ಅತ್ಯವಶ್ಯಕವಾಗಿದೆ. ಜ್ಞಾನಕ್ಕಿರುವ ಪ್ರಾಧಾನ್ಯ ಬೇರೆ ಯಾವುದಕ್ಕೂ ಇಲ್ಲ. ಅಂತಹ ಜ್ಞಾನವನ್ನು ಪಡೆಯಬೇಕು. ಅಜ್ಞಾನ ಹೋಗಲಾಡಿಸಬೇಕಾದರೆ ಸದ್ಗುರುವಿನಿಂದಲೇ ಆಗಬೇಕು. ಜ್ಞಾನ ಪ್ರಾಪ್ತಿಗಾಗಿ ಪ್ರಯತ್ನಪಟ್ಟರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ದೀಪಾವಳಿ ಹಬ್ಬವು ಎಲ್ಲರಿಗೂ ಒಳ್ಳೆಯದಾಗಲಿ ಎಂಬುದು ನಮ್ಮ ಆಶಯವಾಗಿದೆ. ಮನುಷ್ಯನ ಮನಸ್ಸಿನ ಯಾವುದೇ ಕಲ್ಮಶಗಳಿಗೆ ಅವಕಾಶ ಕೊಡದೆ, ಪ್ರತಿಯೊಬ್ಬರೂ, ಪ್ರತಿಯೊಬ್ಬರ ಜತೆಗೂ ಸಂತೋಷ, ಸೌಜನ್ಯದಿಂದ ವರ್ತಿಸಬೇಕು. ನಿನ್ನಲ್ಲೂ, ನನ್ನಲ್ಲೂ ಒಂದೇ ಚೈತನ್ಯ ಪ್ರಕಾಶಮಾನವಾಗಿರುವಾಗ ಯಾರೂ ಮತ್ತೊಬ್ಬರ ಮೇಲೆ ದ್ವೇಷ ಮಾಡುವುದಲ್ಲ. ಕೋಪ, ಸಿಟ್ಟು ಮಾಡಿಕೊಳ್ಳದೇ ಪ್ರೀತಿಯಿಂದ ಎಲ್ಲರೊಂದಿಗೆ ವರ್ತಿಸಬೇಕು ಎಂದು ಆದಿಶಂಕರರರು ನಮಗೆ ಆದೇಶಿಸಿದ್ದಾರೆ. ದೀಪಾವಳಿ ಹಬ್ಬ ಎಲ್ಲರಿಗೂ ಕ್ಷೇಮ, ಸುಖ, ಶಾಂತಿ ನೀಡುವಂತಾಗಲಿ. ಎಲ್ಲರೂ ಭಗವಂತನ ಕೃಪೆಗೆ ಪಾತ್ರರಾಗಲಿ ಎಂದು ಹಾರೈಸಿದ್ದಾರೆ.

ಶ್ರೀಮಠದ ಅಧಿಕಾರಿಗಳಾದ ಶಿವಶಂಕರಭಟ್‌, ಗೋಪಾಲಕೃಷ್ಣ, ಶ್ರೀಪಾದರಾವ್‌, ಪುರೋಹಿತರಾದ ಕೃಷ್ಣಭಟ್‌ ಮತ್ತಿತರರು ಇದ್ದರು. ತಾಲೂಕಿನ ಗ್ರಾಮೀಣ ಹಾಗೂ ಪಟ್ಟಣದಲ್ಲಿ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಪ್ರತಿ ಮನೆಯಲ್ಲೂ ಗೋಪೂಜೆ, ಬಲೀಂದ್ರ ಪೂಜೆ, ಸಂಜೆ ತುಳಸಿಪೂಜೆ ಮತ್ತಿತರ ಪೂಜಾದಿಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ