ಆ್ಯಪ್ನಗರ

ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗಿರಿ

ಮುಂಗಾರು ಹಂಗಾಮಿನಲ್ಲಿ ಎದುರಾಗುವ ಪ್ರಕೃತಿ ವಿಕೋಪದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿರುವಂತೆ ಬಂದರು ಮತ್ತು ಒಳನಾಡು, ಜಲಸಾರಿಗೆ ಇಲಾಖೆ ಅಪರ ಮುಖ್ಯ ಕಾರ‍್ಯದರ್ಶಿ ರಜನೀಶ್‌ ಗೋಯಲ್‌ ಅಧಿಕಾರಿಗಳಿಗೆ ಸೂಚಿಸಿದರು.

Vijaya Karnataka 11 May 2019, 5:00 am
ಚಿಕ್ಕಮಗಳೂರು : ಮುಂಗಾರು ಹಂಗಾಮಿನಲ್ಲಿ ಎದುರಾಗುವ ಪ್ರಕೃತಿ ವಿಕೋಪದ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿರುವಂತೆ ಬಂದರು ಮತ್ತು ಒಳನಾಡು, ಜಲಸಾರಿಗೆ ಇಲಾಖೆ ಅಪರ ಮುಖ್ಯ ಕಾರ‍್ಯದರ್ಶಿ ರಜನೀಶ್‌ ಗೋಯಲ್‌ ಅಧಿಕಾರಿಗಳಿಗೆ ಸೂಚಿಸಿದರು.
Vijaya Karnataka Web CKM-10ARAGAP4


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮುಂಗಾರು ಮಳೆಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಈ ಹಿಂದೆ ಅತಿವೃಷ್ಟಿಯಿಂದ ಉಂಟಾದ ಸಮಸ್ಯೆಗಳ ಆಧಾರದ ಮೇಲೆ ಈ ಭಾರಿ ಮುಂಗಾರಿನಲ್ಲಿ ಎದುರಾಗಬಹುದಾದ ಸಂಭವನೀಯ ಅಪಾಯಗಳನ್ನು ಅಂದಾಜು ಮಾಡಿ ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿ, ಅಗ್ನಿಶಾಮಕ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್‌, ಗೃಹರಕ್ಷಕ ದಳ, ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು ಎಂದು ಹೇಳಿದರು.

ದೂರವಾಣಿ, ಸಾರಿಗೆ ಇಲಾಖೆಗಳ ಪಾತ್ರವೂ ಮುಖ್ಯ. ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಸಂವಹನ ಸಂಪರ್ಕಕ್ಕೆ ಕಾಳಜಿ ವಹಿಸಬೇಕು. ಪ್ರವಾಹ ತಲೆದೋರಬಹುದಾದ ಪ್ರದೇಶಗಳಲ್ಲಿ ತಾತ್ಕಾಲಿಕ ಆಶ್ರಯ ತಾಣಗಳಿಗೆ ಜಾಗ ಗುರುತಿಸಬೇಕು. ಊಟೋಪಚಾರ ಸೌಲಭ್ಯ ನೀಡಲು ಸಮರ್ಥ ಸ್ಥಿತಿಯಲ್ಲಿರಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಮಾಹಿತಿ ನೀಡಿ, ವಿಪತ್ತು ನಿರ್ವಹಣೆ ಬಗ್ಗೆ ಸಂಬಂಧಿಸಿದ ತಾಲೂಕುಗಳಿಂದ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್‌ ರೂಂ ತೆರೆದು ಕರ್ತವ್ಯ ನಿರ್ವಹಿಸಲಾಗುತ್ತಿದೆ. ಈ ಕೇಂದ್ರಕ್ಕೆ 3 ಸಿಬ್ಬಂದಿ ನೇಮಿಸಿದ್ದು, ಪಾಳಿಯಲ್ಲಿ ತಲಾ 8 ಗಂಟೆಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಸ್ವಯಂ ಸೇವಾ ಸಂಸ್ಥೆಗಳು, ಆಸ್ಪತ್ರೆಗಳು, ಆಂಬುಲೆನ್ಸ್‌ಗಳು, ಬ್ಲಡ್‌ಬ್ಯಾಂಕ್‌ ದೂರವಾಣಿ ಸಂಖ್ಯೆ ಸಂಗ್ರಹಿಸಿ ಕಾಲೋಚಿತಗೊಳಿಸಿ ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಎಲ್ಲ ತಾಲೂಕುಗಳಲ್ಲಿ ಟಿಇಒಸಿಗಳನ್ನು ನಿರ್ಮಿಸಿದ್ದು, ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತಿವೆ. ಮೆಸ್ಕಾಂ ಟೋಲ್‌ಫ್ರೀ ಸಂಖ್ಯೆ 1912 ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಲಕರಣೆಗಳೊಂದಿಗೆ ಸದಾ ಸಿದ್ಧವಾಗಿರುವಂತೆ ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ತರಬೇತಿ ಹೊಂದಿದ 649 ಗೃಹರಕ್ಷಕ ಸಿಬ್ಬಂದಿ ಇದ್ದು, 22 ನುರಿತ ಈಜುಗಾರರು, ಸ್ವಂಯ ಸೇವಕರನ್ನು ಗುರುತಿಸಲಾಗಿದೆ. ಸಂದರ್ಭಕ್ಕೆ ಅನುಗುಣವಾಗಿ ತುರ್ತು ಕ್ರಮಕ್ಕಾಗಿ ತಂಡ ರಚಿಸಲಾಗಿದೆ. ದುರ್ಘಟನೆ ಸಂಭವಿಸಿದರೆ 24 ಗಂಟೆಯೊಳಗೆ ಆರ್ಥಿಕ ಸಹಾಯ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು. ಕಂದಾಯ ಇಲಾಖೆ ಕಾರ‍್ಯದರ್ಶಿ ರಾಜ್‌ಕುಮಾರ್‌ ಖತ್ರಿ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಮೈಸೂರು ವಿಭಾಗದ ವಿಭಾಗಾಧಿಕಾರಿ ಟಿ.ಕೆ.ಅನಿಲ್‌ಕುಮಾರ್‌, ಜಿ.ಪಂ. ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ ಎಸ್‌.ಅಶ್ವತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ, ಅಪರ ಜಿಲ್ಲಾಧಿಕಾರಿ ಡಾ.ಕುಮಾರ್‌ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮ

ಕಳೆದ ವರ್ಷ ಬಿದ್ದ ಮಳೆಯಿಂದ ಹಾನಿಯಾದ ಚರಂಡಿ, ಕಾಲುವೆಗಳ ಮಣ್ಣು ತೆಗೆದು ಸ್ವಚ್ಛಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಲೋಕೋಪಯೋಗಿ, ಪಂಚಾಯತ್‌ರಾಜ್‌, ನಗರ ಸ್ಥಳೀಯ ಸಂಸ್ಥೆಗಳು ಜೂನ್‌ ಒಳಗೆ ಈ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಹಾನಿಯಾಗಿರುವ 47 ಕಲ್ವರ್ಟ್‌ಗಳನ್ನು ದುರಸ್ತಿ ಮಾಡಲಾಗುತ್ತಿದೆ. ಹಾನಿಯಾದ ಕೆರೆಗಳ ದುರಸ್ತಿ ಕಾರ‍್ಯವನ್ನು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗ ಮತ್ತು ಸಣ್ಣ ನೀರಾವರಿ ಇಲಾಖೆಯಿಂದ ಕೈಗೊಳ್ಳಲಾಗಿದೆ. ಶೃಂಗೇರಿ, ಮೂಡಿಗೆರೆ ತಾಲೂಕಿನ ಗುಡ್ಡಗಾಡು ಪ್ರದೇಶದ ರಸ್ತೆಗಳ ಮೇಲೆ ಮಣ್ಣು, ಬಂಡೆಗಳು ಬೀಳುವ ಸಂಭವ ಇದ್ದು, ಇವುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲು ಸೂಚಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ರಸ್ತೆಗೆ ಬೀಳಬಹುದಾದ 82 ಮರಗಳನ್ನು ತೆರವುಗೊಳಿಸಿದ್ದು, ಒಣಗಿದ 69 ಮರಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಟಾವು ಮಾಡಲಾಗಿದೆ. ವಿದ್ಯುತ್‌ ಲೈನ್‌ ಹಾದು ಹೋಗಿರುವ ಕಡೆಗಳಲ್ಲಿ ಮರದ ರೆಂಬೆಗಳನ್ನು ತೆರವುಗೊಳಿಸಲಾಗಿದೆ. ವಿದ್ಯುತ್‌ ಪೂರೈಕೆಯಲ್ಲಿ ಇರುವ ನ್ಯೂನತೆ ಸರಿಪಡಿಸಲು ಸೂಚಿಸಿದ್ದು, ದುರ್ಬಲ ಲೈನ್‌ಗಳನ್ನು ಸಬಲಗೊಳಿಸಲಾಗುತ್ತಿದೆ. ಟ್ರಾನ್ಸ್‌ಫಾರ್ಮರ್‌ಗಳ ತಪಾಸಣೆ ಮಾಡಿ ಅಗತ್ಯ ಉಪಕರಣ, ಮಾನವ ಸಂಪನ್ಮೂಲ ಒದಗಿಸಲು ಕ್ರಮ ವಹಿಸಲಾಗಿದೆ. ವಿಪತ್ತು ನಿರ್ವಹಣೆಗೆ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಸೌಲಭ್ಯದ ಜತೆಗೆ 14 ಆಂಬುಲೆನ್ಸ್‌ ಸೇವೆ ಸಜ್ಜುಗೊಳಿಸಲಾಗಿದೆ.

----------
ವಿಕೋಪ ಎದುರಿಸಲು ಸನ್ನದ್ಧ

ಪ್ರಕೃತಿ ವಿಕೋಪ ಸಂದರ್ಭ ತುರ್ತು ಪರಿಸ್ಥಿತಿ ಎದುರಿಸಲು ತೆರೆದಿರುವ ಕಂಟ್ರೋಲ್‌ ರೂಂನಲ್ಲಿ ದೂರವಾಣಿ, ಕಂಪ್ಯೂಟರ್‌, ಪ್ರಿಂಟರ್‌ ಒದಗಿಸಲಾಗಿದೆ. 08262 238950 ದೂರವಾಣಿ ಸಂಖ್ಯೆ ಜತೆಗೆ ಟೋಲ್‌ ಫ್ರೀ ಸಂಖ್ಯೆ 1077 ಅಳವಡಿಸಲಾಗಿದೆ. 9480778229 ನಂಬರ್‌ನಲ್ಲಿ ಸಿಕೆಎಂ ಕೆಲಮಿಟಿ ಹೆಸರಿನಲ್ಲಿ ವಾಟ್ಸಾಪ್‌ ಗ್ರೂಪ್‌ ರಚಿಸಲಾಗಿದೆ. ಕೇಂದ್ರದಲ್ಲಿ ಲಾಗ್‌ಬುಕ್‌ ಇದ್ದು, ಬರುವ ದೂರುಗಳನ್ನು ನಮೂದಿಸಿ ಕ್ರಮ ವಹಿಸಲಾಗುವುದು. ಕೆಎಸ್‌ಎನ್‌ಎಂಡಿಸಿ ಮತ್ತು ಎಸ್‌ಇಒಸಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಚಂಡಮಾರುತ, ಅತಿವೃಷ್ಟಿ ಬಗ್ಗೆ ಮಾಹಿತಿಯನ್ನು ಇತರೆ ಇಲಾಖೆಗಳ ಸಹಯೋಗದಲ್ಲಿ ಇ-ಮೇಲ್‌, ದೂರವಾಣಿ, ವಾಟ್ಸಾಪ್‌, ಎಸ್‌ಎಂಎಸ್‌ ಮೂಲಕ ಪಡೆದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ.

-ಡಾ.ಬಗಾದಿ ಗೌತಮ್‌, ಜಿಲ್ಲಾಧಿಕಾರಿ

----

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ