ಆ್ಯಪ್ನಗರ

ಪುಟಾಣಿಗಳಿಗೆ ಹಾವಿನೊಂದಿಗೆ ನೀತಿಪಾಠ

ಹಾವು ಎಂದರೆ ಮಾರುದ್ದ ಹೋಗಿ ಬೆಚ್ಚಿ ನಿಲ್ಲುವವರೇ ಹೆಚ್ಚು. ಆದರೆ, ದೊಡ್ಡವರಿಂದ ಹಿಡಿದು ಪುಟಾಣಿಗಳ ವರೆಗೆ ಹಾವನ್ನು ಕೈಯಲ್ಲಿ ಹಿಡಿದು ಕೊರಳಿಗೆ ಸುತ್ತಿಕೊಂಡು ಖುಷಿ ಅನುಭವಿಸಿದ ಘಟನೆ ನಗರದ ರಾಘವೇಂದ್ರಸ್ವಾಮಿ ಮಠದ ರಸ್ತೆಯಲ್ಲಿ ಬುಧವಾರ ನಡೆದಿದೆ.

Vijaya Karnataka 25 Oct 2018, 5:00 am
ಚಿಕ್ಕಮಗಳೂರು : ಹಾವು ಎಂದರೆ ಮಾರುದ್ದ ಹೋಗಿ ಬೆಚ್ಚಿ ನಿಲ್ಲುವವರೇ ಹೆಚ್ಚು. ಆದರೆ, ದೊಡ್ಡವರಿಂದ ಹಿಡಿದು ಪುಟಾಣಿಗಳ ವರೆಗೆ ಹಾವನ್ನು ಕೈಯಲ್ಲಿ ಹಿಡಿದು ಕೊರಳಿಗೆ ಸುತ್ತಿಕೊಂಡು ಖುಷಿ ಅನುಭವಿಸಿದ ಘಟನೆ ನಗರದ ರಾಘವೇಂದ್ರಸ್ವಾಮಿ ಮಠದ ರಸ್ತೆಯಲ್ಲಿ ಬುಧವಾರ ನಡೆದಿದೆ.
Vijaya Karnataka Web CKM-24rudrap4


ಶಾಸಕ ಸಿ.ಟಿ.ರವಿ ಅವರ ಮನೆಯ ಹಿಂಭಾಗದ ರಾಘವೇಂದ್ರಸ್ವಾಮಿ ಮಠದ ರಸ್ತೆಯಲ್ಲಿ ವಾಸವಿರುವ ವಿನಯ್‌ ಎಂಬುವರ ಮನೆಗೆ ಅದ್ಹೇಗೋ ಹಾವು ಸೇರಿಕೊಂಡಿತ್ತು. ಹಾವು ಒಳಹೊಕ್ಕಿರುವುದನ್ನು ಕಂಡ ಪಕ್ಕದ ಮನೆಯವರು ಲಕ್ಷ್ಮಿ ಪುರುಷೋತ್ತಮ್‌ ಅವರಿಗೆ ತಿಳಿಸಿದ್ದಾರೆ. ಇದರಿಂದ ಗಾಬರಿಯಾದ ಲಕ್ಷ್ಮಿ ಪುರುಷೋತ್ತಮ್‌ ಮನೆಯಲ್ಲಿದ್ದವರನ್ನು ಹೊರ ಕರೆದು ಹಾವು ಹಿಡಿಯುವವರ ದೂರವಾಣಿ ಸಂಖ್ಯೆಗೆ ತಡಕಾಡಿದ್ದಾರೆ. ಕೂಡಲೇ ಸ್ನೇಕ್‌ ನರೇಶ್‌ ಅವರಿಗೆ ಪೋನಾಯಿಸಿ ಬೇಗ ಬರುವಂತೆ ಮನವಿ ಮಾಡಿದ್ದಾರೆ. ಹಾವು ಹಿಡಿಯುವುದರಲ್ಲಿ ನಿಪುಣನಾಗಿರುವ ಸ್ನೇಕ್‌ ನರೇಶ್‌ ಸ್ಥಳಕ್ಕೆ ಬಂದು ಹಾವಿಗಾಗಿ ಮನೆಯ ಒಳಗಡೆ ಹುಡುಕಾಡಿದರು ಅದು ಪತ್ತೆಯಾಗಲಿಲ್ಲ. ಸತತ ಒಂದೂವರೆ ಗಂಟೆಯ ನಂತರ ಹಾವು ಪತ್ತೆಯಾಯಿತು. ಬಹಳ ಜಾಗರೂಕತೆಯಿಂದ ಹಾವನ್ನು ಹಿಡಿದು ಹೊರತಂದಾಗ ಅದು ನಾಗರ ಆಗಿರದೆ ಕೇರೆ ಹಾವಾಗಿತ್ತು. ನಾಗರ ಎಂದು ಭಯಭೀತರಾಗಿದ್ದ ಮನೆಯವರು ಇದರಿಂದ ನಿರಾಳರಾದರು.

ಹಾವು ಹಿಡಿಯುತ್ತಿದ್ದಾರೆ ಎಂಬ ಸುದ್ದಿ ಹರಡಿದ್ದೆ ತಡ ಮಕ್ಕಳು, ಮಹಿಳೆಯರಾದಿಯಾಗಿ ಜಮಾಯಿಸಿದರು. ವಾಲ್ಮೀಕಿ ಜಯಂತಿ ರಜೆ ಇದ್ದ ಕಾರಣ ಶಾಲಾ ಮಕ್ಕಳೇ ಒಂದು ಪಟ್ಟು ಹೆಚ್ಚು ಸೇರಿದರು.ನೆರೆದವರಿಗೆಲ್ಲ ಸ್ನೇಕ್‌ ನರೇಶ್‌ ಹಾವಿನ ಬಗ್ಗೆ ಪಾಠ ಮಾಡಲು ಶುರುಮಾಡಿದರು. ಹಾವುಗಳು ಮನುಷ್ಯನ ದ್ವೇಷಿಯಲ್ಲ. ಆಕಸ್ಮಿಕವಾಗಿ ನಾವು ಅದನ್ನು ತುಳಿದರೆ ಅಥವಾ ತೊಂದರೆ ನೀಡಿದರೆ ಮಾತ್ರ ಕಚ್ಚುತ್ತದೆ. ಮನುಷ್ಯನಿಗಿಂತ ಹತ್ತು ಪಟ್ಟು ಭಯ ಹಾವಿಗಿರುತ್ತದೆ. ಅದರಲ್ಲೂ ಕೇರೆ ಹಾವು ನಾಚಿಕೆ ಸ್ವಭಾವದ್ದು, ಜನರನ್ನು ಕಂಡರೆ ಅದು ಓಟ ಕೀಳುತ್ತದೆ. ಆದರೆ, ಹಾವಿನ ಬಗ್ಗೆ ಭಯವಿರುವವರು ಹಾವನ್ನು ಕಂಡಾಗ ಹೊಡೆದು ಕೊಲ್ಲುತ್ತಾರೆ. ಅದು ತಪ್ಪು. ಇಂತಹ ಮನೋಭಾವ ಬದಲಾಗಬೇಕು. ಹಾವು ಕಂಡಲ್ಲಿ ಹಿಡಿಯುವವರಿಗೆ ಮಾಹಿತಿ ನೀಡಬೇಕು ಎಂದು ನೀತಿ ಪಾಠ ಹೇಳಿದರು. ಅಲ್ಲದೆ ಕೇರೆ ಹಾವಾದ ಕಾರಣ ಎಲ್ಲ ಮಕ್ಕಳ ಹೆಗಲ ಮೇಲೆ ಸುತ್ತಿ, ಕೈಯಲ್ಲಿ ಮುಟ್ಟಿಸಿ ಅವರಲ್ಲಿ ಹಾವಿನ ಮೇಲೆ ಇದ್ದ ಭಯವನ್ನು ದೂರಮಾಡುವ ಪ್ರಯತ್ನ ಮಾಡಿದರು. ನಂತರ ಹಾವನ್ನು ಕಾಡಿಗೆ ಬಿಡುವುದಾಗಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ