ಆ್ಯಪ್ನಗರ

ಹಸಿರು ಗಿರಿಶ್ರೇಣಿಯಲ್ಲಿ ನೀಲಿ ವೈಭವ

ರಾಜ್ಯದ ಅತಿಎತ್ತರದ ಪರ್ವತ ಮುಳ್ಳಯ್ಯನಗಿರಿ ಹಾಗೂ ಭಾವೈಕ್ಯ ತಾಣ ಬಾಬಾಬುಡನ್‌ಗಿರಿಯ ಹಸಿರು ಶ್ರೇಣಿ ನೀಲಿ ಹೊದಿಕೆ ಹೊದ್ದು ಕಂಗೊಳಿಸಲು ಸಜ್ಜಾಗುತ್ತಿದೆ. 12 ವರ್ಷಕ್ಕೊಮ್ಮೆ ಅರಳುವ ನೀಲಿಕುರಂಜಿ (ಹಾರ್ಲೆ) ಹೂವುಗಳು ಈ ಬಾರಿ ಗಿರಿಶ್ರೇಣಿಯನ್ನು ಅಲಂಕರಿಸಲಿವೆ.

Vijaya Karnataka 3 Oct 2018, 5:00 am
ಆರಗ ರವಿ
Vijaya Karnataka Web BNG-SMG-0210-2-15-2ARAGAP2

ಚಿಕ್ಕಮಗಳೂರು :
ರಾಜ್ಯದ ಅತಿಎತ್ತರದ ಪರ್ವತ ಮುಳ್ಳಯ್ಯನಗಿರಿ ಹಾಗೂ ಭಾವೈಕ್ಯ ತಾಣ ಬಾಬಾಬುಡನ್‌ಗಿರಿಯ ಹಸಿರು ಶ್ರೇಣಿ ನೀಲಿ ಹೊದಿಕೆ ಹೊದ್ದು ಕಂಗೊಳಿಸಲು ಸಜ್ಜಾಗುತ್ತಿದೆ. 12 ವರ್ಷಕ್ಕೊಮ್ಮೆ ಅರಳುವ ನೀಲಿಕುರಂಜಿ (ಹಾರ್ಲೆ) ಹೂವುಗಳು ಈ ಬಾರಿ ಗಿರಿಶ್ರೇಣಿಯನ್ನು ಅಲಂಕರಿಸಲಿವೆ.

ಕುರಂಜಿ ಗಿಡಗಳಲ್ಲಿ ಈಗಾಗಲೇ ಅಲ್ಲಲ್ಲಿ ಹೂವುಗಳು ಅರಳುತ್ತಿದ್ದು, ಇನ್ನೊಂದು ತಿಂಗಳಲ್ಲಿ ಇಡೀ ಗಿರಿಶ್ರೇಣಿಯನ್ನು ನೀಲಿ ಕುರಂಜಿ ಹೂವುಗಳು ಆವರಿಸಲಿವೆ. ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ 6 ವರ್ಷಗಳಿಗೊಮ್ಮೆ ನೀಲಿಬಣ್ಣದ ಹಾರ್ಲೆ ಹೂವುಗಳು (ಸ್ಟ್ರಾಬಿಲೆಂತಸ್‌ ಕುಂಥಿಯಾನಾ)ಅರಳುವುದು ಸಾಮಾನ್ಯ. ಆದರೆ, ರಾಜ್ಯದ ಕೆಲವೇ ಗಿರಿಶ್ರೇಣಿಗಳಲ್ಲಿ 12 ವರ್ಷಕ್ಕೊಮ್ಮೆ ಹಾರ್ಲೆ ಹೂವುಗಳು ಅರಳುತ್ತವೆ. ಇದರಲ್ಲಿ ಬಾಬಾಬುಡನ್‌ಗಿರಿ ಶ್ರೇಣಿ ಪ್ರಮುಖವಾಗಿದೆ.

2006ರಲ್ಲಿ ಬಾಬಾಬುಡನ್‌ಗಿರಿ ಶ್ರೇಣಿಯಲ್ಲಿ ಕುರಂಜಿ ಹೂವುಗಳು ಅರಳಿದ್ದವು. ಈ ಅಪರೂಪದ ದೃಶ್ಯಾವಳಿ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಕಡೆಗಳಿಂದ ಸಾವಿರಾರು ಜನ ಆಗಮಿಸಿದ್ದರು. ಈ ಬಾರಿ ಬೆಟ್ಟಶ್ರೇಣಿಯಲ್ಲಿ ನೀಲಿಕುರಂಜಿ ಅರಳುತ್ತಿದ್ದು, ಇನ್ನೊಂದು ತಿಂಗಳಲ್ಲಿ ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿಯ ಬೆಟ್ಟಗುಡ್ಡಗಳು ನೀಲಿಯಾಗಲಿವೆ.

ಹೇಗಿರುತ್ತವೆ ಕುರಂಜಿ?


6 ಅಥವಾ 8 ವರ್ಷಗಳಿಗೊಮ್ಮೆ ನೀಲಿ ಹೂವುಗಳು ಅರಳಿ ಕಂಗೊಳಿಸುವ ಹಾರ್ಲೆ ಗಿಡಗಳು ಆಳೆತ್ತರ ಅಥವಾ ಮೊಣಕಾಲೆತ್ತರಕ್ಕೆ ಬೆಳೆಯುತ್ತವೆ. ಆದರೆ, 12 ವರ್ಷಗಳಿಗೊಮ್ಮೆ ನೀಲಿ ಹೂವರಳಿ ಕಣ್ಮನ ತಣಿಸುವ ಕುರಂಜಿ ಗಿಡಗಳು ಒಂದರಿಂದ ಒಂದೂವರೆ ಅಡಿಯಷ್ಟು ಎತ್ತರಕ್ಕೆ ಗುಪ್ಪೆ ಗುಪ್ಪೆಯಾಗಿ ಇಡೀ ಗಿರಿಶ್ರೇಣಿಯನ್ನು ವ್ಯಾಪಿಸಿರುತ್ತವೆ.

ಗಿರಿಶ್ರೇಣಿಯಲ್ಲಿ ಮಳೆ ಬಿದ್ದಾಗ ಪ್ರತಿವರ್ಷ ಕುರಂಜಿ ಗಿಡಗಳು ಚಿಗುರಿದರೂ ನೀಲಿ ಹೂವು ಅರಳುವುದು 12 ವರ್ಷಕ್ಕೆ ಒಮ್ಮೆ ಮಾತ್ರ. ಸದಾಕಾಲ ಹಸಿರು ಚಾದರ ಹೊದ್ದಂತೆ ಕಂಡುಬರುವ ಗಿರಿಶ್ರೇಣಿ, ಕುರಂಜಿ ಹೂವುಗಳು ಏಕಕಾಲಕ್ಕೆ ಅರಳುತ್ತಿದ್ದಂತೆ ನೀಲಿ ಬಣ್ಣದ ಹೂವುಗಳಿಂದ ಅಲಂಕರಿಸಿದ ತೊಟ್ಟಿಲಿನಂತೆ ಭಾಸವಾಗುತ್ತದೆ. ಸುಮಾರು ಎರಡು ತಿಂಗಳವರೆಗೆ ಇರುವ ಈ ನೀಲಿ ಹೂವುಗಳು ಕ್ರಮೇಣ ಬಾಡುತ್ತ ಕಣ್ಮರೆಯಾಗುತ್ತವೆ.

ಕುರಂಜಿ ಕುಬ್ಜವಾದ ದಟ್ಟ ಹಸುರಿನಿಂದ ಕೂಡಿದ ದಪ್ಪ ಎಲೆಗಳಿರುವ ಗಿಡ. ಎಲೆಗಳ ಮೇಲೆ ಗೀರುಗಳು ಎದ್ದು ಕಾಣುತ್ತವೆ. ಎಲೆಗಳ ಅಂಚಿನಲ್ಲಿ ಗರಗಸದಂತಹ ಕಚ್ಚುಗಳಿದ್ದರೂ ಮುಳ್ಳುಗಳಿಲ್ಲ. ಹುಲ್ಲಿನ ಜತೆ ಬೆರೆತು ಬೆಳೆಯುವ ಈ ಗಿಡಗಳು ಹೂವು ಇಲ್ಲದ ದಿನಗಳಲ್ಲಿ ಬರೀ ಹಸಿರನ್ನಷ್ಟೇ ಹೊರಸೂಸುತ್ತವೆ. ಗೊರಟೆ ಹೂವಿನಂತೆ ಕಾಣುವು ಕುರಂಜಿ ಹೂವುಗಳು ಹೆಚ್ಚೇನು ಸುಂದರವಲ್ಲದಿದ್ದರೂ ಅಷ್ಟೂ ವಿಸ್ತಾರದಲ್ಲಿ ನೀಲಿ ಹರಡಿಕೊಳ್ಳುವುದರಿಂದ ಒಂದು ಸುಂದರ ಲೋಕ ಸೃಷ್ಟಿಯಾಗುತ್ತದೆ.

----------------------

ಅಪರೂಪದ ಕ್ಷಣ


12 ವರ್ಷಕ್ಕೊಮ್ಮೆ ಅರಳುವ ಕುರಂಜಿ ಹೂವುಗಳು ಗಿರಿಶ್ರೇಣಿಯಲ್ಲಿ ಸೃಷ್ಟಿಸುವ ಸೊಬಗು ವರ್ಣಿಸಲಸದಳ. ಅಪರೂಪದ ಈ ದೃಶ್ಯ ಈ ಬಾರಿ ಮರುಕಳಿಸಿದೆ. ಇನ್ನೊಂದು ತಿಂಗಳಲ್ಲಿ ನೀಲಿಯ ಚೆಲುವಿನ ಲೋಕ ತೆರೆದುಕೊಳ್ಳಲಿದ್ದು, ಪ್ರವಾಸಿಗರು ಈ ಸೊಬಗನ್ನು ಆಸ್ವಾದಿಸಬಹುದು. ಆದರೆ, ಪರಿಸರದ ನೈರ್ಮಲ್ಯ ಕಾಪಾಡುವ ಹೊಣೆಗಾರಿಕೆಯನ್ನೂ ಪ್ರವಾಸಿಗರು ಮರೆಯಬಾರದು.

-ಡಿ.ನಾಗೇಶ್‌, ಚಿಕ್ಕಮಗಳೂರು

----------------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ