ಆ್ಯಪ್ನಗರ

ಬಸ್‌ ಪಲ್ಟಿ , 5 ಮಂದಿಗೆ ಗಾಯ

ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಪಟ್ಟಣಕ್ಕೆ ಸಮೀಪದ ಚಿಕ್ಕಮಗಳೂರು ರಸ್ತೆಯ ಪೆಟ್ರೊಲ್‌ಬಂಕ್‌ ಬಳಿ ಮಗುಚಿ ಬಿದ್ದು, 5 ಮಂದಿ ಗಾಯಗೊಂಡಿದ್ದಾರೆ.

Vijaya Karnataka 8 Aug 2019, 5:00 am
ಕಡೂರು: ಮಂಗಳೂರಿನಿಂದ ದಾವಣಗೆರೆಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಪಟ್ಟಣಕ್ಕೆ ಸಮೀಪದ ಚಿಕ್ಕಮಗಳೂರು ರಸ್ತೆಯ ಪೆಟ್ರೊಲ್‌ಬಂಕ್‌ ಬಳಿ ಮಗುಚಿ ಬಿದ್ದು, 5 ಮಂದಿ ಗಾಯಗೊಂಡಿದ್ದಾರೆ.
Vijaya Karnataka Web CKM-7KDR1


ಪೊಲೀಸ್‌ ಇಲಾಖೆಯಲ್ಲಿ ಕರ್ತವ್ಯದಲ್ಲಿರುವ ರಾಮಪ್ಪ(33) ಹಾಗೂ ರುದ್ರಮ್ಮ(55) ತೀವ್ರ ಗಾಯಗೊಂಡು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿದ್ದರು. ಇವರಲ್ಲಿ ರುದ್ರಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ.

ಚಂದ್ರಮ್ಮ(48), ಶಿವಪ್ಪ(60), ಜಮೀಲ್‌(18) ಅವರುಗಳಿಗೆ ಸಣ್ಣಪುಟ್ಟ ಪೆಟಾಗಿದ್ದು, ಹೊರರೋಗಿಗಳಾಗಿ ಚಿಕಿತ್ಸೆ ಪಡೆದರು. ಬಸ್ಸಿನಲ್ಲಿ ಒಟ್ಟು 24 ಪ್ರಯಾಣಿಕರಿದ್ದರು ಎಂದು ಕಡೂರು ಡಿಪೋ ವ್ಯವಸ್ಥಾಪಕ ಚನ್ನಬಸಪ್ಪ ತಿಳಿಸಿದ್ದಾರೆ.

ಚಿಕ್ಕಮಗಳೂರಿನಿಂದ ಕಡೂರಿನತ್ತ ಬರುತ್ತಿದ್ದ ಬಸ್‌ ಎಚ್‌ಪಿ ಪೆಟ್ರೋಲ್‌ ಬಂಕ್‌ ಬರುವ ವೇಳೆಗೆ ಟಾರ್‌ ರಸ್ತೆ ಮುಗಿದು ಕಚ್ಚಾ ರಸ್ತೆಗೆ ಇಳಿಯುತ್ತಿದ್ದಂತೇ ಏಕಾಏಕಿ ಹತೋಟಿ ಕಳೆದು ನಿಧಾನವಾಗಿ ಜಾರುತ್ತಾ ಸ್ವಲ್ಪ ದೂರದವರೆಗೆ ಸಾಗಿ ಬಲ ಭಾಗಕ್ಕೆ ಮಗುಚಿ ಬಿತ್ತು ಎಂದು ಚಾಲಕ ನಾಗೇಶ್‌ ತಿಳಿಸಿದರು.

ಸ್ಥಳಕ್ಕೆ ಪಿಎಸ್‌ಐ ವಿಶ್ವನಾಥ್‌, ಸಿಬ್ಬಂದಿ ಭೇಟಿ ನೀಡಿದ್ದಲ್ಲದೆ ಕ್ರೇನ್‌ ಸಹಾಯದಿಂದ ಬಸ್ಸನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಇದರಿಂದ ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಪಟ್ಟಣದಿಂದ ಚಿಕ್ಕಮಗಳೂರಿನ ಕಡೆ ಮೂಗ್ತಿಹಳ್ಳಿವರೆಗೆ ಚತುಸ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಳೆದ ಮೂರ್ನಾಲ್ಕು ದಿನದಿಂದ ಬೀಳುತ್ತಿರುವ ಮಳೆಯಿಂದಾಗಿ ಈ ರಸ್ತೆಯಲ್ಲಿ ಕೆಸರು ಆವೃತವಾಗಿ ಬಹಳಷ್ಟು ವಾಹನಗಳು ಸಣ್ಣಪುಟ್ಟ ಅಪಘಾತಕ್ಕೀಡಾಗುತ್ತಿವೆ. ಗುತ್ತಿಗೆದಾರರು ಅಪಾಯಕಾರಿ ಸ್ಥಳಗಳಲ್ಲಿ ಬ್ಯಾರಿಕೇಡ್‌, ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಕೂಡಲೇ ಇಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸರಸ್ವತೀಪುರದ ಲಕ್ಷ್ಮೇಗೌಡ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ