ಆ್ಯಪ್ನಗರ

ಏಲಕ್ಕಿ, ಕಾಳುಮೆಣಸು ಸೊರಗು ರೋಗಕ್ಕೆ ಬಲಿ

ಅತಿವೃಷ್ಟಿಯಿಂದಾಗಿ ತಾಲೂಕಾದ್ಯಂತ ಕಾಳುಮೆಣಸು, ಏಲಕ್ಕಿ ಬೆಳೆ ಸೊರಗು ರೋಗಕ್ಕೆ ಬಲಿಯಾಗಿದ್ದು, ಬೆಳೆಗಾರರಿಗೆ ಕೊಟ್ಯಂತರ ರೂ. ನಷ್ಟ ಉಂಟಾಗಿದೆ.

Vijaya Karnataka 25 Sep 2018, 5:00 am
ಎಸ್‌.ಜಲಂಧರ್‌
Vijaya Karnataka Web CKM-24kph1

ಕೊಪ್ಪ : ಅತಿವೃಷ್ಟಿಯಿಂದಾಗಿ ತಾಲೂಕಾದ್ಯಂತ ಕಾಳುಮೆಣಸು, ಏಲಕ್ಕಿ ಬೆಳೆ ಸೊರಗು ರೋಗಕ್ಕೆ ಬಲಿಯಾಗಿದ್ದು, ಬೆಳೆಗಾರರಿಗೆ ಕೊಟ್ಯಂತರ ರೂ. ನಷ್ಟ ಉಂಟಾಗಿದೆ.

ತಾಲೂಕಿನ ಸುಮಾರು 1400 ಹೆಕ್ಟೇರ್‌ ಪ್ರದೇಶದಲ್ಲಿ ಕಾಳುಮೆಣಸನ್ನು ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಈ ಸಾಲಿನಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಸುಮಾರು 900 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಅಡಕೆ ತೋಟದಲ್ಲಿ ಮರಕ್ಕೆ ಆಸರೆಯಾಗಿಸಿಕೊಂಡು ಕಾಳುಮೆಣಸು ಬಳ್ಳಿ ಹಬ್ಬಿಸಲಾಗುತ್ತದೆ. ಆದರೆ, ತೀವ್ರ ಮಳೆಯ ಪರಿಣಾಮ ಈಗ ಪ್ರತಿ ತೋಟದಲ್ಲಿ ಒಣಗಿದ ಬಳ್ಳಿಯ ರಾಶಿಯನ್ನೇ ಕಾಣಬಹುದಾಗಿದೆ.

ತಾಲೂಕಿನಲ್ಲಿ ಸಾಮಾನ್ಯವಾಗಿ 80ರಿಂದ 90 ಇಂಚು ಮಳೆ ಬೀಳುವುದು ವಾಡಿಕೆ. ಆದರೆ, ಈ ಬಾರಿ ಬರೋಬ್ಬರಿ 171 ಇಂಚು ಮಳೆಯಾಗಿದೆ. ಇದರ ಪರಿಣಾಮವಾಗಿ ಅಡಕೆ, ಕಾಳುಮೆಣಸು, ಏಲಕ್ಕಿ ಮತ್ತಿತರ ತೋಟದ ಬೆಳೆಗಳಿಗೆ ಹಲವು ಬಗೆಯ ರೋಗ ಬಾಧೆ ಉಂಟಾಗಿದೆ. ಮಳೆ ನಿಂತ ಮೇಲೂ ರೋಗ ಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಏಲಕ್ಕಿ ಬೆಳೆ ಮಾನ್ಸೂನ್‌ ಮಳೆ ನಂತರದ ದಿನಗಳಲ್ಲಿ ಸೊರಗತೊಡಗಿದೆ.

ತಾಲೂಕಿನ ಬೆಳಗೊಳದ ಸಂಬಾರು ಮಂಡಳಿಯ ಸಸ್ಯಕ್ಷೇತ್ರದಲ್ಲಿ ಈ ಸಾಲಿನಲ್ಲಿ 1.2 ಲಕ್ಷ ಕಾಳುಮೆಣಸು ಕಡ್ಡಿ ಬೆಳೆಯಲು ಗುರಿಯಿರಿಸಲಾಗಿತ್ತು. ಇಲ್ಲಿ ಈಗಾಗಲೆ 1.8 ಲಕ್ಷ ಕಡ್ಡಿ ಬೆಳೆದಿದ್ದು, ಅದರಲ್ಲಿ 87.5 ಸಾವಿರ ಕಡ್ಡಿ ನಾಶವಾಗಿದೆ. ರೈತರಿಗೆ 38 ಸಾವಿರ ಕಡ್ಡಿ ಮಾತ್ರ ಪೂರೈಸಲಾಗಿದೆ.

ಕಾಳುಮೆಣಸು ಬೆಳೆ ಹಾನಿ ಬಗ್ಗೆ ಸರಕಾರಕ್ಕೆ ವರದಿ ಕಳುಹಿಸಲಾಗಿದೆ. ಬೆಳೆ ಪುನಶ್ಚೇತನ ಯೋಜನೆಯಡಿ ರೈತರಿಗೆ 100 ಗಿಡ ನೀಡಲಾಗುತ್ತಿದೆ. ಸರಕಾರದ ವತಿಯಿಂದ ಪರಿಹಾರ ಬಂದಾಕ್ಷ ಣ ರೈತರಿಗೆ ವಿತರಿಸಲಾಗುವುದು.
-ರಾಧಿಕಾ, ಸಹಾಯಕ ನಿರ್ದೇಶಕಿ, ತೋಟಗಾರಿಕಾ ಇಲಾಖೆ, ಕೊಪ್ಪ.

ಏಲಕ್ಕಿ ಮರುನಾಟಿ ಯೋಜನೆಯಲ್ಲಿ ರೈತರಿಗೆ ಶೇ.50ರ ಸಹಾಯಧನದಲ್ಲಿ ಏಲಕ್ಕಿ ಗಿಡ ನೀಡಲಾಗುತ್ತದೆ. ನಾಟಿ ನಂತರ ಕಂತಿನ ಮೇಲೆ 20 ಸಾವಿರ ರೂ. ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಬಾರ ಮಂಡಳಿ ಕಚೇರಿ ಸಂಪರ್ಕಿಸಬೇಕು.
-ಕುಮಾರ್‌, ಫೀಲ್ಡ್‌ ಆಫೀಸರ್‌, ಸಂಬಾರ ಮಂಡಳಿ, ಕೊಪ್ಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ