ಆ್ಯಪ್ನಗರ

ಹಳ್ಳಿ ಮಂದಿಗೀಗ ಚಿರತೆ ಭಯ

ಪಟ್ಟಣದ ಹೊರವಲಯದಲ್ಲಿರುವ ಬಿಳಗುಳ ಗ್ರಾಮದಲ್ಲಿ ಕಳೆದ 2 ದಿನ ಹಿಂದೆ ಸಂಜೆ ಕೆ.ಎಂ.ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ರಸ್ತೆ ದಾಟಿ ಹೋಗಿದ್ದು, ಪಟ್ಟಣ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಭಯದ ವಾತಾವರಣ ಮೂಡಿದೆ.

Vijaya Karnataka 14 Jun 2019, 5:00 am
ಉದಯಶಂಕರ್‌ ಮೂಡಿಗೆರೆ : ಪಟ್ಟಣದ ಹೊರವಲಯದಲ್ಲಿರುವ ಬಿಳಗುಳ ಗ್ರಾಮದಲ್ಲಿ ಕಳೆದ 2 ದಿನ ಹಿಂದೆ ಸಂಜೆ ಕೆ.ಎಂ.ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ರಸ್ತೆ ದಾಟಿ ಹೋಗಿದ್ದು, ಪಟ್ಟಣ ಸೇರಿದಂತೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಭಯದ ವಾತಾವರಣ ಮೂಡಿದೆ.
Vijaya Karnataka Web cheetas fear to villagers
ಹಳ್ಳಿ ಮಂದಿಗೀಗ ಚಿರತೆ ಭಯ


ಜೂ.11ರಂದು ಸಂಜೆ 6.24 ಗಂಟೆಗೆ ಬಿಳಗುಳ ಗ್ರಾಮದ ಕೆ.ಎಂ.ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆಯೊಂದು ಕೃಷಿ ಇಲಾಖೆ ಕಡೆಯಿಂದ ರಸ್ತೆ ದಾಟಿ, ಹೆಸಗಲ್‌ ಗ್ರಾ.ಪಂ. ಕಡೆಗೆ ಸಾಗಿದೆ. ಆ ವೇಳೆ ಮಳೆ ಬಂದು ತುಂತುರು ಹನಿಗಳು ಬೀಳುತ್ತಿತ್ತು. ರಸ್ತೆಯಲ್ಲಿ ಎಂದಿನಂತೆ ವಾಹನಗಳು ಸಂಚರಿಸುತ್ತಿದ್ದವು. ದ್ವಿಚಕ್ರ ವಾಹನವೊಂದು ಪಾಸಾಗುತ್ತಿರುವಾಗಲೇ ಎದುರಿನಲ್ಲಿಯೇ ಚಿರತೆ ರಸ್ತೆ ದಾಟಿರುವುದು ಅಲ್ಲಿನ ವಿಜಯಬ್ಯಾಂಕ್‌ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಆ ವೀಡಿಯೊ ಸಾಮಾಜಿಕ ಜಾಲಾ ತಾಣದಲ್ಲಿ ಹರಿದಾಡುತ್ತಿದೆ.

ಕಳೆದ 5 ವರ್ಷದ ಹಿಂದೆ ಕಾಡಾನೆಗಳು ಪಟ್ಟಣದ ಸಮೀಪ ಪ್ರವೇಶಿಸಿದ್ದವು. ಅಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆ ಓಡಿಸುವಲ್ಲಿ ಯಶಸ್ವಿಯಾಗಿದ್ದರು. ಕಾಡಂದಿ ಕೂಡ ಮೂಡಿಗೆರೆ ಪಟ್ಟಣಕ್ಕೆ ಆಗಮಿಸಿ ಎಲ್ಲೆಂದರಲ್ಲಿ ಓಡಾಡಿತ್ತು. ಖಾಸಗಿಯಲ್ಲಿ ಕೆಲಸ ಮಾಡುತ್ತಿದ್ದ ಕರ್ಣ ಎಂಬಾತನನ್ನು ಎತ್ತಿ ಮೇಲಕ್ಕೆ ಎಸೆದಿದ್ದರಿಂದ ಆತನ ಹಲ್ಲುಗಳು ಮುರಿದು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದ. ಕಾಡಾನೆಗಳ ಹಾವಳಿ ಹೊಸದೇನಲ್ಲ. ಆದರೆ ಚಿರತೆ ಆಗಮನದಿಂದ ಜನರು ಭಯಭೀತರಾಗಿದ್ದಾರೆ. ಕಾಡಾನೆ ಗಾತ್ರ ದೊಡ್ಡದಾಗಿರುವುದರಿಂದ ದೂರದಿಂದಲೇ ಗೋಚರವಾಗುತ್ತದೆ. ಆದರೆ ಚಿರತೆ ಯಾವ ಮೋಲೆಯಲ್ಲಿರುತ್ತದೆಯೋ ಗೊತ್ತಾಗುವುದಿಲ್ಲ. ಅಪಾಯ ಯಾವಾಗ ಬೇಕಾದರೂ ಸಂಭವಿಸಬಹುದೆಂಬುದು ಜನರ ಆತಂಕವಾಗಿದೆ.

ಪಟ್ಟಣದೊಳಗೆ ಬೀದಿ ನಾಯಿಗಳ ಹೆಚ್ಚಳದಿಂದ ಚಿರತೆ ಪಟ್ಟಣದೊಳಗೆ ಆಗಮಿಸುತ್ತಿದೆ ಎಂಬ ಮಾತುಗಳು ಸಾರ್ವಜನಿಕರಿಂದ ದಟ್ಟವಾಗಿ ಕೇಳಿ ಬರುತ್ತಿದೆ. ನಾಯಿಗಳ ಸಂಖ್ಯೆ ಹೆಚ್ಚುತ್ತಿದ್ದರೂ ಪ.ಪಂ. ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಪಟ್ಟಣದೊಳಗಿರುವ ಬೀದಿ ನಾಯಿಗಳನ್ನು ಹಿಡಿಯಬೇಕೆಂಬ ಒತ್ತಾಯ ಸಾರ್ವಜನಿಕರದ್ದಾಗಿದೆ. ಬಿಳಗುಳದಲ್ಲಿ ಚಿರತೆ ರಸ್ತೆ ದಾಟುವ ಮುನ್ನ ಇಲ್ಲಿನ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಎಂ.ಎಸ್‌.ಶಶಿಕಲಾ ವಾಯುವಿಹಾರಕ್ಕೆ ತೆರಳಿದ್ದರು. ಅವರು ಬಿಳಗುಳ ಹತ್ತಿರ ತೆರಳುವ ಮುನ್ನ ಚಿರತೆ ತುಸು ವೇಳೆಯಲ್ಲಿ ರಸ್ತೆ ದಾಟಿತ್ತು. ವಿಷಯ ತಿಳಿದ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ ಪ.ಪಂ. ಮುಖ್ಯಾಧಿಕಾರಿಗೆ ಬೀದಿ ನಾಯಿಗಳನ್ನು 5 ದಿನದಲ್ಲಿ ಹಿಡಿದು ಹೊರ ಸಾಗಿಸಬೇಕೆಂದು ಸೂಚಿಸಿದ್ದರು. ಆದರೆ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಕ್ಕೆ ಇಂದಿಗೂ ಪ.ಪಂ. ಮುಂದಾಗಿಲ್ಲ.

ಈ ಭಾಗದಲ್ಲಿ ತೋಟದ ಮಾಲೀಕರು ಮಂಗಗಳನ್ನು ಓಡಿಸಲು ಪಟಾಕಿ ಸಿಡಿಸುವುದು ಸಾಮಾನ್ಯವಾಗಿದೆ. ಚಿರತೆ ಪಟ್ಟಣಕ್ಕೆ ಕಾಲಿಟ್ಟ ಮೇಲೆ ಅರಣ್ಯ ಇಲಾಖೆಯಿಂದ ತೋಟದ ಮಾಲೀಕರಿಗೆ ಪಟಾಕಿ ನೀಡಿದ್ದಾರೆ. ತೋಟದಲ್ಲಿ ಕಾಡು ಪ್ರಾಣಿಗಳು ಬರಬಹುದು. ಗೊಬ್ಬರ ಹಾಕುವಾಗ ಕಾರ್ಮಿಕರಿಗೆ ತೊಂದರೆಯಾಗಬಾರದೆಂದು ಪಟಾಕಿ ಸಿಡಿಸಿ ನಂತರ ಗೊಬ್ಬರ ಹಾಕುವಂತೆ ಸೂಚಿಸಲಾಗಿದೆ. ಇದೀಗ ತೋಟದಲ್ಲಿ ಪಟಾಕಿ ಸದ್ದಾದರೆ ಸಾಕು. ಚಿರತೆ ಬಂತೇನೋ ಎಂದು ಜನರು ಬಾಗಿಲು ಮುಚ್ಚಿ ಕಿಟಕಿಯಲ್ಲಿ ಕದ್ದು ನೋಡುವ ಪರಿಸ್ಥಿತಿ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ