ಆ್ಯಪ್ನಗರ

'ದತ್ತಪೀಠ ವಿವಾದ ಪರಿಹಾರಕ್ಕೆ ಸಂಧಾನಕ್ಕೂ ಸಿದ್ಧ, ಹೋರಾಟಕ್ಕೂ ಬದ್ಧ'! ಸಿದ್ದುಗೆ ಗುದ್ದು ಕೊಟ್ಟ ಸಿಟಿ ರವಿ

'​ವಿವಾದಕ್ಕೆ ಪರಿಹಾರ ಕಲ್ಪಿಸಲು ಹಿಂದೆ ಸುಪ್ರೀಂ ಕೋರ್ಟ್‌ ರಾಜ್ಯ ಸರಕಾರಕ್ಕೆ ಅವಕಾಶ ಕೊಟ್ಟಿತ್ತು. ಆದರೆ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯ ಕೊಡುವ ಅವಕಾಶ ಕೈಚೆಲ್ಲಿ ರಾಜಕಾರಣಕ್ಕೆ ಬಳಸಿಕೊಂಡರು' - ಸಿ.ಟಿ. ರವಿ

Vijaya Karnataka Web 12 Dec 2019, 8:10 pm
ಚಿಕ್ಕಮಗಳೂರು: ದತ್ತಪೀಠ ವಿವಾದ ಪರಿಹರಿಸಲು ಸಂಧಾನಕ್ಕೂ ಸಿದ್ಧ, ಕಾನೂನು ಹೋರಾಟಕ್ಕೂ ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ರಣಕಹಳೆ ಊದಿದ್ದರೆ. ಚಿಕ್ಕಮಗಳೂರಿನಲ್ಲಿ ದತ್ತ ಜಯಂತಿಯಲ್ಲಿ ಪಾಲ್ಗೊಂಡಿದ್ದ ಅವರು, ದತ್ತ ಪಾದುಕೆ ದರ್ಶನ ಪಡೆದ ನಂತರ ಈ ವಿಷಯ ತಿಳಿಸಿದರು.
Vijaya Karnataka Web ದತ್ತಪೀಠ ವಿವಾದ ಪರಿಹಾರಕ್ಕೆ ಸಂಧಾನಕ್ಕೂ ಸಿದ್ಧ, ಹೋರಾಟಕ್ಕೂ ಬದ್ಧ! ಸಿದ್ದುಗೆ ಗುದ್ದು ಕೊಟ್ಟ ಸಿಟಿ ರವಿ


ದತ್ತ ಪೀಠ ವಿವಾದ ಪರಿಹರಿಸಲು ಸಾಧ್ಯವೇ ಇಲ್ಲವೆಂದಲ್ಲ. ಆದರೆ, ಕಷ್ಟಪಟ್ಟು ಪರಿಹರಿಸಬೇಕಿದೆ. ನ್ಯಾಯಾಲಯಕ್ಕೆ ವಾಸ್ತವಾಂಶದ ವರದಿ ಕೊಡುವ ಜತೆಗೆ ಶಾಖಾದ್ರಿಯನ್ನೂ ಕರೆದು ಮಾತನಾಡುತ್ತೇವೆ. ಬಾಬಾ ಬುಡನ್‌ ದರ್ಗಾ ಎಲ್ಲಿದೆ ಎಂಬುದನ್ನು ದಾಖಲೆ ಮೂಲಕ ನಿರೂಪಿಸಿ, ದರ್ಗಾ ಮತ್ತು ದತ್ತ ಪೀಠ ಬೇರೆ ಎಂಬ ದಾಖಲೆ ಕೊಡುತ್ತೇವೆ ಎಂದು ಸಿಟಿ ರವಿ ಹೇಳಿದರು.

'ನ್ಯಾಯ ಕೊಡಲಿಲ್ಲ'

ವಿವಾದಕ್ಕೆ ಪರಿಹಾರ ಕಲ್ಪಿಸಲು ಹಿಂದೆ ಸುಪ್ರೀಂ ಕೋರ್ಟ್‌ ರಾಜ್ಯ ಸರಕಾರಕ್ಕೆ ಅವಕಾಶ ಕೊಟ್ಟಿತ್ತು. ಆದರೆ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯ ಕೊಡುವ ಅವಕಾಶ ಕೈಚೆಲ್ಲಿ ರಾಜಕಾರಣಕ್ಕೆ ಬಳಸಿಕೊಂಡರು. ಇದರಿಂದ ಅವರು ವೈಯಕ್ತಿಕ ನಷ್ಟ ಅನುಭವಿಸುವ ಜತೆಗೆ ಅವರ ಪಕ್ಷಕ್ಕೂ ನಷ್ಟ ಉಂಟು ಮಾಡಿದರು. ತವರಿನಲ್ಲೇ ಹೀನಾಯ ಸೋಲು ಕಂಡರು ಎಂದು ಸಿಟಿ ರವಿ ಹೇಳಿದರು.

ವಿಡಿಯೋ: ಸಿಎಂ ಜೊತೆ ಆಸ್ಪತ್ರೆಗೆ ಹೋದಾಗಲೂ ಸಿದ್ದು ಕಾಲೆಳೆದ ಈಶ್ವರಪ್ಪ..!

ಏಕಪಕ್ಷೀಯ ತೀರ್ಮಾನವನ್ನು ಸಹಮತದ ತೀರ್ಮಾನ ಎಂದು ಆಗಿನ ಸರಕಾರ ಕೋರ್ಟ್‌ಗೆ ವರದಿ ಕೊಟ್ಟಿದೆ. ನಾನು ಸಚಿವನಾಗಿದ್ದರೂ ಒಂದು ಸಂಘಟನೆ ಲೀಡ್‌ ಮಾಡಿದ್ದರಿಂದ ನಾನು ಕೊಡುವ ತೀರ್ಪು ಎಲ್ಲರೂ ಒಪ್ಪಲು ಆಗುವುದಿಲ್ಲ. ಇದೇ ರೀತಿ ಜಸ್ಟಿಸ್‌ ನಾಗಮೋಹನ್‌ದಾಸ್‌ ಸಮಿತಿಯಲ್ಲಿದ್ದ ರಹಮತ್‌ ತರೀಕೆರೆ ಕೂಡಾ, ದರ್ಗಾ ಪರ ಕೋರ್ಟ್‌ ಮೆಟ್ಟಿಲೇರಿದ್ದವರು ಎಂದರು.

ರಹಮತ್‌ ತರೀಕೆರೆ ಸಮಿತಿಯಲ್ಲಿದ್ದ ಕಾರಣಕ್ಕೆ ಕೋರ್ಟ್‌ ಸರಕಾರದ ವರದಿಗೆ ತಡೆಯಾಜ್ಞೆ ಕೊಟ್ಟಿದೆ. ಶೀಘ್ರದಲ್ಲೇ ತೀರ್ಪು ಹೊರಬರಲಿದ್ದು, ವಿವಾದದ ಚೆಂಡು ಪುನಃ ಸರಕಾರದ ಅಂಗಳಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.

ಅಯೋಧ್ಯಾ ವಿವಾದ ಈಗ ಅಂತ್ಯ! ಸುಪ್ರೀಂಗೆ ಸಲ್ಲಿಕೆಯಾಗಿದ್ದ ಎಲ್ಲಾ ಮರು ಪರಿಶೀಲನಾ ಅರ್ಜಿಗಳೂ ವಜಾ!

ಪ್ರತಿಪಕ್ಷಗಳೂ ಸಹಕರಿಸಲಿ

ಕಾನೂನು ಪರಿಮಿತಿಯೊಳಗೆ ಸಂಧಾನ ಅಥವಾ ಕೋರ್ಟ್‌ ಎರಡೂ ಮಾರ್ಗ ಮುಕ್ತವಾಗಿಟ್ಟುಕೊಂಡು ದತ್ತಪೀಠ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಲಾಗುವುದು. ಉಳಿದ ರಾಜಕೀಯ ಪಕ್ಷಗಳ ಮಿತ್ರರೂ ಕೂಡ ಇಂತಹ ವಿಷಯದಲ್ಲಿ ಭಿನ್ನಧ್ವನಿ ಎತ್ತುವುದು ಬೇಡ ಎಂದು ಸಿ.ಟಿ. ರವಿ ಮನವಿ ಮಾಡಿಕೊಂಡರು. ಬಾಬಾಬುಡನ್‌ ದರ್ಗಾದ ಮೇಲೆ ಅತಿಕ್ರಮಣ ಆಗಿದ್ದರೆ ಹಿಂದೂ ಸಂಘಟನೆಗಳನ್ನು ನಾನು ಮನವೊಲಿಸುತ್ತೇನೆ. ದತ್ತಾತ್ರೇಯ ಪೀಠದ ಮೇಲೆ ಅತಿಕ್ರಮ ಆಗಿದ್ದರೆ ಶಾಖಾದ್ರಿ ಮತ್ತು ಅವರನ್ನು ಬೆಂಬಲಿಸುತ್ತಿರುವ ಸಂಘಟನೆಗಳು ಹಿಂದೆ ಸರಿಯುವಂತೆ ಮಾಡುವ ಹೊಣೆಯನ್ನು ಬಿಜೆಪಿಯೇತರ ಪಕ್ಷಗಳು ಮಾಡಬೇಕು ಎಂದು ಸಿ.ಟಿ. ರವಿ ಆಗ್ರಹಿಸಿದರು.

ಅಯೋಧ್ಯಾ ತೀರ್ಪಿನ ಮೇಲ್ಮನವಿ ವಜಾ: ಸುಪ್ರೀಂ ನಿಲುವಿಗೆ ಮುಸ್ಲಿಂ ಸಂಘಟನೆಗಳ ಬೇಸರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ