ಆ್ಯಪ್ನಗರ

ಹತ್ಯೆ ಆರೋಪಿಗಳನ್ನು ಬಂಧಿಸದಿದ್ದಲ್ಲಿ ನಿರಂತರ ಉಪವಾಸ

ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನ್ವರ್‌ ಕೊಲೆ ಆರೋಪಿಗಳನ್ನು ಇನ್ನು 15 ದಿನದಲ್ಲಿ ಬಂಧಿಸದಿದ್ದಲ್ಲಿ ಕುಟುಂಬ ಸದಸ್ಯರೊಂದಿಗೆ ನಿರಂತರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮೃತ ಅನ್ವರ್‌ ಸಹೋದರ ಅಬ್ದುಲ್‌ ಕಬೀರ್‌ ಹೇಳಿದರು.

Vijaya Karnataka 11 Jan 2019, 5:00 am
ಚಿಕ್ಕಮಗಳೂರು : ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನ್ವರ್‌ ಕೊಲೆ ಆರೋಪಿಗಳನ್ನು ಇನ್ನು 15 ದಿನದಲ್ಲಿ ಬಂಧಿಸದಿದ್ದಲ್ಲಿ ಕುಟುಂಬ ಸದಸ್ಯರೊಂದಿಗೆ ನಿರಂತರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಮೃತ ಅನ್ವರ್‌ ಸಹೋದರ ಅಬ್ದುಲ್‌ ಕಬೀರ್‌ ಹೇಳಿದರು.
Vijaya Karnataka Web CKM-10RUDRAP1


ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ನನ್ನ ಸಹೋದರ ಅನ್ವರ್‌ ಹತ್ಯೆಯಾಗಿ ಇಲ್ಲಿಗೆ 7 ತಿಂಗಳು ಕಳೆಯುತ್ತಾ ಬಂದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿರುವುದು ನಮ್ಮ ಕುಟುಂಬವನ್ನು ಕಂಗಾಲಾಗುವಂತೆ ಮಾಡಿದೆ. ಹತ್ಯೆ ನಡೆದ ಸಂದರ್ಭ ಎಸ್ಪಿ ಅಣ್ಣಾಮಲೈ ಅವರು 40 ದಿನದಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅವರನ್ನು ಸರಕಾರ ಮಾನಸ ಸರೋವರ ಕರ್ತವ್ಯಕ್ಕೆ ನಿಯೋಜನೆ ಮಾಡಿತು. ನಂತರ ಅವರನ್ನು ಇಲ್ಲಿಂದಲೇ ವರ್ಗಾವಣೆ ಮಾಡಿದೆ. ಇದು ತನಿಖೆಯ ದಿಕ್ಕು ತಪ್ಪಿಸುವ ತಂತ್ರದಂತೆ ನಮಗೆ ಕಂಡುಬಂದಿದೆ. ಕೊಲೆ ನಡೆದ ನಂತರ 5 ತಂಡಗಳನ್ನು ರಚಿಸಿದ್ದು ಈಗ ತಂಡದ ಎಲ್ಲ ಪ್ರಮುಖ ಠಾಣಾಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಕೊಲೆ ನಡೆದು ಇಲ್ಲಿಯವರೆಗೆ ನಾವು ಪ್ರತಿ 15 ದಿನಕ್ಕೊಮ್ಮೆ ಎಸ್ಪಿ ಅವರನ್ನು ಭೇಟಿ ಮಾಡುತ್ತಲೇ ಇದ್ದೇವೆ. ಈವರೆಗೂ ನಮಗೆ ಯಾವೊಂದು ಸುಳಿವನ್ನೂ ನೀಡಿಲ್ಲ. ಕೊಲೆ ಬಗ್ಗೆ ನಮಗೆ ಅನುಮಾನವಿರುವ ಐವರ ಮೇಲೆ ಠಾಣೆಯಲ್ಲಿ ಕೇಸು ದಾಖಲಾಗಿದೆ. ಈ ಕುಟುಂಬಕ್ಕೂ ನಮಗೂ 10 ವರ್ಷದಿಂದ ವೈಷಮ್ಯ ಇದ್ದು ಇವರೇ ಸುಪಾರಿ ಕೊಟ್ಟು ನನ್ನ ಅಣ್ಣನನ್ನು ಕೊಲೆ ಮಾಡಿಸಿರುವ ಶಂಕೆ ಇದೆ. ಆದರೆ, ದೂರು ದಾಖಲಾಗಿದ್ದರೂ ಇವರನ್ನು ಬಂಧಿಸಿಲ್ಲ ಎಂದು ದೂರಿದರು.

ಹತ್ಯೆಗೆ ಏನು ಕಾರಣ, ಏತಕ್ಕೆ ಕೊಲೆ ಮಾಡಿದ್ದಾರೆ. ಯಾರು ಮಾಡಿಸಿದ್ದು ಎಂಬ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ನಿರ್ಲಕ್ಷ್ಯ, ರಾಜಕೀಯ ಒತ್ತಡ ಅಥವಾ ಪ್ರಭಾವಿಗಳ ಕೈವಾಡವಿರುವ ಅನುಮಾನ ನಮ್ಮನ್ನು ಕಾಡುತ್ತಿದೆ. ಅನೇಕ ಕ್ಲಿಷ್ಟಕರ ಪ್ರಕರಣಗಳನ್ನು ಭೇದಿಸಿರುವ ಪೊಲೀಸರಿಗೆ ಈ ಪ್ರಕರಣ ಏಕೆ ಕಬ್ಬಿಣದ ಕಡಲೆಯಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಈ ಬಗ್ಗೆ ಡಿಜಿಪಿ ಅವರಗೂ ಪತ್ರ ಬರೆದಿದ್ದೇನೆ. ಈ ಹಿಂದೆ ಎರಡು ಬಾರಿ ನಗರದಲ್ಲಿ ಪ್ರತಿಭಟಿಸಿದ್ದೇವೆ. ಮುಂದಿನ 15 ದಿನದಲ್ಲಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ನಗರದ ಆಜಾದ್‌ ಪಾರ್ಕ್‌ ಬಳಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸೇರಿ ನಿರಂತರ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಎಚ್ಚರಿಸಿದರು. ದಾವೂದ್‌, ಸಯದ್‌, ಬಷೀರ್‌, ಅಕ್ರಂ, ಅಮ್ಜದ್‌, ಅಬ್ದುಲ್‌ ಲತೀಫ್‌, ಮುನೀರ್‌, ಸಿರಾಜ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ