ಆ್ಯಪ್ನಗರ

ಮತ್ತೆ ಮುಂದುವರಿದ ಮಳೆ

ಶನಿವಾರ ಹಗಲು ಬಿಡುವು ನೀಡಿದ್ದ ಮಳೆ ರಾತ್ರಿಯಿಂದ ಪುನಃ ಮುಂದುವರಿದಿದ್ದು ಅಲ್ಲಲ್ಲಿ ಧರೆ, ಮನೆಗಳು ಕುಸಿದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

Vijaya Karnataka 20 Aug 2018, 5:00 am
ಚಿಕ್ಕಮಗಳೂರು : ಶನಿವಾರ ಹಗಲು ಬಿಡುವು ನೀಡಿದ್ದ ಮಳೆ ರಾತ್ರಿಯಿಂದ ಪುನಃ ಮುಂದುವರಿದಿದ್ದು ಅಲ್ಲಲ್ಲಿ ಧರೆ, ಮನೆಗಳು ಕುಸಿದು ಜನ ಜೀವನ ಅಸ್ತವ್ಯಸ್ತಗೊಂಡಿದೆ.
Vijaya Karnataka Web continuous rain again
ಮತ್ತೆ ಮುಂದುವರಿದ ಮಳೆ


ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಶೃಂಗೇರಿಯಲ್ಲಿ ಮತ್ತೆ ಮಳೆ ಮುಂದುವರಿದಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ ಹಲವೆಡೆ ಭತ್ತದ ಗದ್ದೆ ಜಲಾವೃತವಾಗಿದ್ದು ನೂರಾರು ಎಕರೆ ಪ್ರದೇಶದಲ್ಲಿ ಬೆಳದಿದ್ದ ಬೆಳೆ ನಷ್ಟವಾಗಿದೆ.

ಗುಡ್ಡ ಕುಸಿತ : ರಾಜ್ಯ ಹೆದ್ದಾರಿ 66 ರಲ್ಲಿ ನಾಲ್ಕು ಕಡೆ ಗುಡ್ಡ ಕುಸಿದು ಕಳಸ-ಮಂಗಳೂರು ಸಂಪರ್ಕ ಕಡಿತಗೊಂಡಿತ್ತು. ರಸ್ತೆಯಲ್ಲಿ ಮಣ್ಣು ಬಿದ್ದಿರುವುದರಿಂದ ಈ ಮಾರ್ಗದಲ್ಲಿ ಬೆಳಗ್ಗೆಯಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಜೆಸಿಬಿ ಯಂತ್ರ ಬಳಸಿ ಮಣ್ಣು ತೆರೆಯುವ ಕಾರ್ಯಾಚರಣೆ ನಡೆಯುತ್ತಿದೆಯಾದರೂ ಮಳೆ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದೆ. ಸ್ಥಳಕ್ಕೆ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿ ನೀಡಿದ್ದರು. ಕೊಪ್ಪ ತಾಲೂಕಿನ ಹುಲುಗರಡಿ, ಬೈರೇದೇವರು, ಸಂಪಾನೆ ಗ್ರಾಮದಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿದು ಮನೆಗೆ ಅಪ್ಪಳಿಸಿದ್ದರಿಂದಾಗಿ ರವಿಶಂಕರ್‌, ಶ್ರೀಪಾಲ್‌, ವರ್ಧಮಾನ್‌ ಎಂಬುವರ ಮನೆಗಳಿಗೆ ಹಾನಿಯಾಗಿದೆ. ಕೊಪ್ಪ ತಾಲೂಕಿನ ಗುಡ್ಡೇತೋಟದ ರಸ್ತೆ ಹಾಗೂ ಜಯಪುರ-ಬಸರೀಕಟ್ಟೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಭೂ ಕುಸಿತವುಂಟಾಗಿ ಒಂದು ಅಡಿಗೂ ಹೆಚ್ಚು ಅಗಲ ರಸ್ತೆ ಬಿರುಕು ಬಿಟ್ಟಿದೆ. ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಿರುಕು ಬಿಟ್ಟಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಭಯಪಡುವಂತಾಗಿದೆ. ಸಂಪರ್ಕ ರಸ್ತೆಯಿಲ್ಲದೆ ಪರದಾಡುವಂತಾಗಿದೆ.

ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತಶ್ರೇಣಿ ಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿದೆ. ಮಳೆಯಿಂದ ಆ ಭಾಗದ ಹೊನ್ನಮ್ಮನಹಳ್ಳ ಮೈದುಂಬಿ ಹರಿಯುತ್ತಿದೆ. ಮಳೆಯಿಂದ ಜಿಲ್ಲೆಯಲ್ಲಿ ಅನೇಕ ಮನೆಗಳು ಕುಸಿದು ಬಿದ್ದಿವೆ. ತರೀಕೆರೆ ಅಜ್ಜಂಪುರ ಹೋಬಳಿ ವೀರಾಪುರದ ಚಂದ್ರಮ್ಮ,ಎನ್‌.ಆರ್‌.ಪುರ ತಾಲೂಕಿನ ಕಸಬ ಹೋಬಳಿ ವಾರ್ಡ್‌ ನಂ.3 ರಲ್ಲಿ ಗಣೇಶ್‌ ಅವರ ಮನೆ ಬಿದ್ದಿದೆ. ನ.ರಾ.ಪುರದ ತ್ರೀಶಿಲಮ್ಮ ಅವರ ಮನೆ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಬಾಳೆಹೊನ್ನೂರು ಕೋನ್ನಡಿ ಗ್ರಾಮದ ಉಮೇಶ್‌,ಕಾನೂರು ಗ್ರಾಮದ ಚಂದ್ರಶೇಖರ್‌,ವಸಂತ್‌ ಅವರ ಮನೆ ಗೋಡೆ ಕುಸಿದು ನಷ್ಟ ಉಂಟಾಗಿದೆ. ಕೊಪ್ಪ ತಾಲೂಕಿನ ಹರಿಹರಪುರ ಹೋಬಳಿ ಬಿಲ್‌ಗದ್ದೆ ಚಿದಾನಂದ ಅವರ ಮನೆಗೆ ಹಾನಿಯಾಗಿದೆ. ಮೇಗುಂದ ಹೋಬಳಿಯ ಹೊನ್ನೆಗುಂಡಿ ಗ್ರಾಮದ ಅಮೂಸಾಲಿಯನ್‌ ಮನೆ ಜಖಂಗೊಂಡಿದೆ.

-------------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ