ಆ್ಯಪ್ನಗರ

ಮನೆ ಮನಗಳಲ್ಲಿ ಸಂಬಂಧ ಬೆಸೆದ ಕೊರೊನಾ ಲಾಕ್‌ ಡೌನ್‌

ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹೀಗೆ ಕೆಲಸದ ನಿಮಿತ್ತ ವಿದ್ಯಾಭ್ಯಾಸಕ್ಕೆಂದು ಹೊರರಾಜ್ಯ, ಜಿಲ್ಲೆಗಳಲ್ಲಿ ಇದ್ದವರು ತಮ್ಮ ಹುಟ್ಟೂರಿಗೆ ಹಿಂದಿರುಗಿದ್ದು ದೂರವಾಗಿದ್ದ ಸಂಬಂಧಗಳನ್ನು ಅಲ್ಪಕಾಲಕ್ಕಾದರೂ ಈ ಲಾಕ್‌ಡೌನ್‌ ಬೆಸೆದಿದೆ.

Vijaya Karnataka Web 12 May 2020, 12:27 pm
ಆಲ್ದೂರು: ಕೊರೊನಾ ವೈರಸ್‌ನಿಂದಾಗಿ ದೇಶವೇ ಲಾಕ್‌ ಡೌನ್‌ ಆಗಿದ್ದು, ಗ್ರಾಮೀಣ ಭಾಗದ ಬಹುತೇಕ ಮನೆಗಳಲ್ಲಿ ಜನ ತುಂಬಿ ತುಳುಕುತ್ತಿದ್ದಾರೆ. ಆಲ್ದೂರು ಸುತ್ತಮುತ್ತಲಿನ ಸಾಕಷ್ಟು ಗ್ರಾಮಗಳಲ್ಲಿನ ಬಹುತೇಕ ಯುವಕರು, ಯುವತಿಯರು ಉದ್ಯೊಗಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು, ಮೈಸೂರುಗಳಂತಹ ದೊಡ್ಡ ನಗರಗಳನ್ನು ಸೇರಿದ್ದು, ಹಲವು ಬಾರಿ ಹಬ್ಬ ಸಾವು ನೋವುಗಳು ಸಂಭವಿಸಿದಾಗಲೂ ತಮ್ಮ ಮನೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಕಾರಣ ಕೆಲಸದ ಒತ್ತಡ. ತಾವು ಕೆಲಸ ನಿರ್ವಹಿಸುತ್ತಿರುವ ಕಂಪನಿಗಳಲ್ಲಿ ರಜೆ ನೀಡದ ಕಾರಣ ತಮ್ಮ ಹುಟ್ಟೂರಿಗೆ ಬರಲು ಸಾಧ್ಯವಾಗದೆ ಉಳಿದುಕೊಳ್ಳವ ಅನಿವಾರ್ಯತೆ ಮರುಗುವಂತೆ ಮಾಡಿತ್ತು. ಆದರೆ ಇಂದು ಪಟ್ಟಣ ಗ್ರಾಮೀಣ ಭಾಗದ ಬಹುತೇಕ ಮನೆಗಳಲ್ಲಿ ಹೊಸ ಮುಖಗಳು ಕಾಣುತ್ತಿವೆ. ಸದಾ ಬ್ಯುಸಿ, ಬ್ಯುಸಿ ಎಂದು ಮಂತ್ರ ಪಠಿಸುತ್ತಿದ್ದವರು ಇಂದು ತಮ್ಮ ಹುಟ್ಟೂರಿನಲ್ಲಿ ತಮ್ಮ ಮನೆಗಳಲ್ಲಿಅಪ್ಪ, ಅಮ್ಮ, ಅಕ್ಕ ತಂಗಿಯರು, ಅಣ್ಣ ತಮ್ಮಂದಿರು ಸ್ನೇಹಿತರ ಜೊತೆ ಕಾಲ ಕಳೆಯುತ್ತಿದ್ದಾರೆ.
Vijaya Karnataka Web jpg (3)


ಅಜ್ಜ, ಅಜ್ಜಿಯರಿದ್ದ ಮನೆಗಳಲ್ಲಿ ಮಕ್ಕಳು ಮರಿ ಮಕ್ಕಳು ತುಂಬು ಕುಟುಂಬವಾಗಿವೆ. ಮೂರು, ನಾಲ್ಕು ಜನರಿದ್ದ ಮನೆಗಳಲ್ಲಿ ಹತ್ತಾರು ಜನರು ತುಂಬಿ ತುಳುಕುತ್ತಿದ್ದಾರೆ. ಮನೆ, ಮನೆಗಳಲ್ಲಿ, ಮನರಂಜನೆಯ ಜೊತೆಜೊತೆಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತ ಅಮ್ಮಂದಿರ ಅಡುಗೆ ರುಚಿಯನ್ನು ಸವಿಯುತ್ತಿದ್ದಾರೆ. ಎಷ್ಟೋ ಮನೆಗಳಲ್ಲಿ ವಯಸ್ಸಾದ ಹಿರಿಯ ಜೀವಗಳು ತಮ್ಮ ಮೊಮ್ಮಕ್ಕಳ ಆಟ, ತುಂಟಾಟಗಳನ್ನು ನೋಡುತ್ತ ಜೀವನದ ಕ್ಷಣಗಳನ್ನು ಸಂಭ್ರಮಿಸುತ್ತಿದ್ದಾರೆ.

ಸಂಬಂಧಗಳಿಂದ ದೂರವಾಗಿ ಸದಾ ಕೆಲಸದ ಒತ್ತಡದಲ್ಲೇ ತಮ್ಮ ದಿನಗಳನ್ನು ಕಳೆಯುತ್ತಿದ್ದ ಎಷ್ಟೋ ಮಂದಿಗೆ ಈ ಲಾಕ್‌ಡೌನ್‌ ನಿಜವಾಗಿಯೂ ಮತ್ತೆ ಹೊಸ ಜೀವನ ಕೊಟ್ಟಿದೆ. ಜೀವನದ ಪಾಠವನ್ನು ಕಲಿಸಿದೆ. ಮಾನವೀಯ ಗುಣಗಳನ್ನು ಬೆಳೆಸುತ್ತಿದೆ. ಹಣದ ಮೌಲ್ಯವನ್ನು ತಿಳಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಂಬಂಧಗಳ ಬೆಲೆಯನ್ನು ಅರ್ಥ ಮಾಡಿಸುತ್ತಿದೆ.

ಸಂತಸದ ದಿನಗಳು ಮರುಕಳಿಸಿವೆ
ನಾವು ಕೆಲಸ ಅರಸಿ ಬೆಂಗಳ್ಳೂರಿಗೆ ಹೋಗಿದ್ದು, ತುಂಬಾ ಅನಿವಾರ್ಯ ಕಾರಣಗಳಿದ್ದಾಗಲೂ ಬರಲು ಸಾಧ್ಯವಾಗಿರಲಿಲ್ಲ. ಜೀವನ ಕಟ್ಟಿಕೊಳ್ಳುವುದು ಅನಿವಾರ್ಯವಾಗಿತ್ತು. ಲಾಕ್‌ಡೌನ್‌ ಕರೆ ಕೊಟ್ಟ ಹಿಂದಿನ ದಿನ ನಾವು ನಮ್ಮೂರಿಗೆ ಬಂದಿದ್ದು ಕುಟುಂಬದವರ ಜೊತೆ ಕಾಲ ಕಳೆಯುತ್ತಿದ್ದೇವೆ. ಬಾಲ್ಯದ ದಿಗಳು ಮರುಕಳಿಸುತ್ತಿವೆ. ನಮಗೆ ಹಿಂದಿನ ಸಂತಸದ ದಿಗಳು ಮರುಕಳಿಸಿವೆ ಎನ್ನುತ್ತಾರೆ ಬೆಂಗಳೂರಿನಿಂದ ಇಳೆಕಾನ್‌ ಗ್ರಾಮಕ್ಕೆ ಮರಳಿರುವ ಮಹೇಶ್‌, ಭಾರತಿ ಕುಟುಂಬದವರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ