ಆ್ಯಪ್ನಗರ

ನದಿ ತಟದ ಗ್ರಾಮಸ್ಥರ ಸ್ಥಳಾಂತರಕ್ಕೆ ಡಿಸಿ ಸೂಚನೆ

ಮಲೆನಾಡು ಭಾಗದ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಭದ್ರಾ ಮತ್ತು ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ನದಿ ದಂಡೆಯಲ್ಲಿರುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.

Vijaya Karnataka 15 Jun 2018, 5:00 am
ಚಿಕ್ಕಮಗಳೂರು: ಮಲೆನಾಡು ಭಾಗದ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಭದ್ರಾ ಮತ್ತು ತುಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ನದಿ ದಂಡೆಯಲ್ಲಿರುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.
Vijaya Karnataka Web dc notice to the displacement of villagers
ನದಿ ತಟದ ಗ್ರಾಮಸ್ಥರ ಸ್ಥಳಾಂತರಕ್ಕೆ ಡಿಸಿ ಸೂಚನೆ


ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳಸ, ಹೊರನಾಡು ಮಧ್ಯದ ಬಾಳೆಹೊಳೆ ಸೇತುವೆ ಮುಳುಗಿದೆ. ಆ ಮಾರ್ಗದಲ್ಲಿ ಜನ ಅಥವಾ ವಾಹನ ಸಂಚರಿಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ. ಭದ್ರಾ ಮತ್ತು ತುಂಗಾ ನದಿಗಳ ಆಜುಬಾಜಿನಲ್ಲಿ ವಾಸವಿರುವ ಗ್ರಾಮಗಳ ಜನರಿಗೆ ತಮ್ಮ ಸಂಬಂಧಿಕರ ಮನೆಗೆ ಹೋಗಿ ಸುರಕ್ಷಿತವಾಗಿರಲು ಕಂದಾಯ ಅಧಿಕಾರಿಗಳ ಮೂಲಕ ಸೂಚಿಸಿದ್ದೇನೆ. ಈವರೆಗೆ ಯಾವ ಗ್ರಾಮಕ್ಕೂ ನೀರು ನುಗ್ಗಿಲ್ಲ. ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಲು ಸೂಚಿಸಿದ್ದು, ಶುಕ್ರವಾರ ತಾನೇ ಖುದ್ದು ಭೇಟಿ ನೀಡಲಿದ್ದೇನೆ ಎಂದರು.

ಜಿಲ್ಲೆಯಲ್ಲಿ ಈವರೆಗೆ ವಾಡಿಕೆಗಿಂತ ಶೇ.228ರಷ್ಟು ಹೆಚ್ಚು ಮಳೆಯಾಗಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕಿನಲ್ಲೇ ಭಾರಿ ಮಳೆಯಾಗುತ್ತಿದೆ. ಕಡೂರು ಮತ್ತು ತರೀಕೆರೆ ತಾಲೂಕಿನಲ್ಲಿ ವಾಡಿಕೆಗಿಂತ ಶೇ.150ರಷ್ಟು ಹೆಚ್ಚು ಮಳೆಯಾಗಿದೆ. ಯಾವುದೇ ಮಾನವ ಪ್ರಾಣಹಾನಿಯಾಗಿಲ್ಲ. 9 ಜಾನುವಾರುಗಳು ಜೀವ ಕಳೆದುಕೊಂಡಿವೆ. ಅದರಲ್ಲಿ 7 ಜಾನುವಾರುಗಳ ರೈತರಿಗೆ ಈಗಾಗಲೇ ತಲಾ 10 ಸಾವಿರ ರೂ.ನಂತೆ ಪರಿಹಾರ ನೀಡಲಾಗಿದೆ ಎಂದರು.

ಸಾರ್ವಜನಿಕ ರಸ್ತೆ, ಮೋರಿ ಸೇತುವೆ ಹಾನಿಯಿಂದ 4.56 ಕೋಟಿ ನಷ್ಟ ಉಂಟಾಗಿದೆ. ಸತತವಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಮಲೆನಾಡಿನ 4 ತಾಲೂಕುಗಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಿದೆ. ಮಳೆ ನಿಂತ ಕೂಡಲೇ ತುರ್ತಾಗಿ ಮೆಸ್ಕಾಂ ಸಂಪರ್ಕ ಕಲ್ಪಿಸಲಿದೆ ಎಂದರು. ಮಳೆಯಿಂದ ಕೆಲವು ಕಡೆ ಗದ್ದೆಗೆ ನೀರು ನುಗ್ಗಿದೆ. ಅಡಕೆ, ಬಾಳೆ ತೋಟಕ್ಕೆ ನೀರು ನುಗ್ಗಿ 5 ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸಮೀಕ್ಷೆ ಮಾಡಿದಾಗ ನಿಖರವಾದ ಅಂದಾಜು ದೊರೆಯಲಿದೆ ಎಂದರು.

ಚಾರ್ಮಾಡಿ ಮಣ್ಣು ಕುಸಿತ: ಚಾರ್ಮಾಡಿ ಘಾಟಿ ರಸ್ತೆಯ ನಮ್ಮ ಜಿಲ್ಲೆ ವ್ಯಾಪ್ತಿಯಲ್ಲಿ 9 ಮರಗಳು ಬಿದ್ದಿದ್ದವು. ದ.ಕ.ಜಿಲ್ಲೆ ವ್ಯಾಪ್ತಿಯಲ್ಲಿ ಗುಡ್ಡ ಕುಸಿದಿತ್ತು. ಎರಡೂ ಜಿಲ್ಲೆಯ ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರು ಸಂಘಸಂಸ್ಥೆಗಳ ಸಹಕಾರದಿಂದ ಮಣ್ಣು ತೆರವು ಮಾಡಲಾಗಿದೆ. ಈಗ ಚಾರ್ಮಾಡಿಯಲ್ಲಿ ಒಮ್ಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಇನ್ನೆರೆಡು ದಿನದಲ್ಲಿ ಮಳೆ ಸಹಜ ಸ್ಥಿತಿಗೆ ಬರಬಹುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ