ಆ್ಯಪ್ನಗರ

ಅಪಾಯದಂಚಿನ ಮರಗಳ ತೆರವಿಗೆ ಆಗ್ರಹ

ಅಪಾಯದ ಅಂಚಿನಲ್ಲಿರುವ ರಸ್ತೆ ಬದಿಯ ಮರ ತೆರವುಗೊಳಿಸಬೇಕು ಹಾಗೂ ಅವೈಜ್ಞಾನಿಕವಾಗಿ ರಸ್ತೆ ಬದಿಯಲ್ಲಿ ಗಿಡ ನೆಡಬಾರದು ಎಂದು ಆಲ್ದೂರು ಬ್ಲಾಕ್‌ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಜಿ.ಬಿ.ಭೋಜೇಗೌಡ ಆಗ್ರಹಿಸಿದರು.

Vijaya Karnataka 30 Jun 2018, 5:00 am
ಚಿಕ್ಕಮಗಳೂರು : ಅಪಾಯದ ಅಂಚಿನಲ್ಲಿರುವ ರಸ್ತೆ ಬದಿಯ ಮರ ತೆರವುಗೊಳಿಸಬೇಕು ಹಾಗೂ ಅವೈಜ್ಞಾನಿಕವಾಗಿ ರಸ್ತೆ ಬದಿಯಲ್ಲಿ ಗಿಡ ನೆಡಬಾರದು ಎಂದು ಆಲ್ದೂರು ಬ್ಲಾಕ್‌ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಜಿ.ಬಿ.ಭೋಜೇಗೌಡ ಆಗ್ರಹಿಸಿದರು.
Vijaya Karnataka Web demand for the removal of hazardous trees
ಅಪಾಯದಂಚಿನ ಮರಗಳ ತೆರವಿಗೆ ಆಗ್ರಹ


ಜಿಲ್ಲೆಯ ಮಲೆನಾಡು ಭಾಗದ ರಸ್ತೆ ಬದಿಯಲ್ಲಿ ಸಂಚಾರ ಮಾಡುವಾಗ ಯಾವ ಮರ ಮೈಮೇಲೆ ಬೀಳಲಿದೆಯೋ ಎಂಬ ಆತಂಕದಲ್ಲೇ ಪ್ರಯಾಣಿಸಬೇಕಿದೆ. ರಸ್ತೆಗೆ ಬಾಗಿ ಅಪಾಯದಲ್ಲಿರುವ ಮರಗಳನ್ನು ತೆರವು ಮಾಡಲು ಡಿಸಿಎಫ್‌ ಆದೇಶಿಸಿದ್ದರೂ ಸಂಬಂಧಿಸಿದ ಆರ್‌ಎಫ್‌ಓ ಗಳು ಮರ ತೆರವು ಮಾಡಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಹಳೆ ಮೈಸೂರು ಭಾಗವಾದ ಬೆಂಗಳೂರು, ಮೈಸೂರು, ಹಾಸನ, ಕೊಡಗು , ಶಿವಮೊಗ್ಗ, ಚಿಕ್ಕಮಗಳೂರು ,ಮಂಗಳೂರು, ಕಾರವಾರ ಅದರಲ್ಲೂ ಮಲೆನಾಡು ಪ್ರದೇಶದ ರಸ್ತೆ ಬದಿಯಲ್ಲಿ, ಚರಂಡಿ, ಪಾದಚಾರಿ ಮಾರ್ಗ ಮತ್ತಿತರೆ ಕಡೆ ಅವೈಜ್ಞಾನಿಕವಾಗಿ ಮರ ಬೆಳೆಸಿರುವುದರಿಂದ ಮಳೆಗಾಲದಲ್ಲಿ ಅನಾಹುತ ಸಂಭವಿಸುತ್ತಿವೆ ಎಂದು ಹೇಳಿದರು.

ಗಿಡ ನೆಡುವುದಕ್ಕೆ ನಮ್ಮದೇನೂ ವಿರೋಧವಿಲ್ಲ. ನಾವೂ ಪರಿಸರ ಪ್ರೇಮಿಗಳೆ. ಆದರೆ, ಗಿಡ ನೆಡುವುದಾದರೆ ಗೋಮಾಳ, ಕೆರೆಯಂಗಳ ಮತ್ತಿತರೆ ಬೋಳು ಪ್ರದೇಶದಲ್ಲಿ ನೆಡಲಿ. ಒಂದು ಮರ ಬೆಳೆಯಬೇಕಾದರೆ ಇನ್ನೊಂದು ಮರದಿಂದ ಕನಿಷ್ಠ 20 ಅಡಿ ಅಂತರವಿರಬೇಕು. ಅರಣ್ಯ ಇಲಾಖೆಯವರು ರಸ್ತೆ ಬದಿ 6 ಅಡಿಗೆ ಒಂದು ಗಿಡ ನೆಡುತ್ತಿದ್ದಾರೆ. ಇವರಿಗೆ ಗಿಡ ನೆಟ್ಟ ಲೆಕ್ಕ ಸಿಗಬೇಕೆ ವಿನಃ ವೈಜ್ಞಾನಿಕ ನಾಟಿ ಮಾಡಬೇಕು ಎಂಬುದು ಬೇಕಿಲ್ಲ ಎಂದರು.

ಕಾಫಿ, ಮೆಣಸು ಬೆಲೆ ಕುಸಿತ
ಆಲ್ದೂರು ಬ್ಲಾಕ್‌ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್‌ ಮಾತನಾಡಿ ಕಾಫಿ ಮತ್ತು ಕಾಳು ಮೆಣಸಿನ ಬೆಲೆ ದಿನೇ ದಿನೆ ಕುಸಿಯುತ್ತಿದೆ. ಕೇಂದ್ರ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ಕಾಫಿ ಮಂಡಳಿ ಕೂಡ ಇತ್ತ ಗಮನ ಹರಿಸಿಲ್ಲ. ಅದರ ಅಧ್ಯಕ್ಷರು ಆ ಹುದ್ದೆ ಕೆಲಸಕ್ಕೆ ಬಾರದ ಹುದ್ದೆ ಎಂದು ಹೇಳಿದ್ದಾರೆ. ಸಹಸ್ರಾರು ಕೋಟಿ ರೂ. ವಿದೇಶಿ ವಿನಿಮಯ ತಂದು ಕೊಡುತ್ತಿದ್ದ ಕಾಫಿ ಉದ್ಯಮ ಇಂದು ವಿನಾಶದ ಅಂಚಿಗೆ ಹೋಗುತ್ತಿದ್ದರೂ ಕೇಂದ್ರ ವಾಣಿಜ್ಯ ಸಚಿವಾಲಯ ಈ ಬಗ್ಗೆ ಗಮನಹರಿಸದೆ ಇರುವುದು ಶೋಚನೀಯ ಸಂಗತಿ. ಕಾಫಿ ಉದ್ಯಮ ನಶಿಸಿ ಹೋದರೆ ಬರಿ ಬೆಳೆಗಾರ ಮಾತ್ರವಲ್ಲ ಉದ್ಯಮ ಅವಲಂಬಿಸಿರುವ ಲಕ್ಷಾಂತರ ಮಂದಿ ಕಾರ್ಮಿಕರ ಬದುಕು ಬೀದಿಗೆ ಬೀಳಲಿದೆ ಎಂಬುದನ್ನು ಸರಕಾರ ಅರ್ಥ ಮಾಡಿಕೊಳ್ಳಬೇಕು. ಕಾಫಿ ಉದ್ಯಮದ ಪುನಶ್ಚೇತನಕ್ಕೆ ಕಾರ್ಯೋನ್ಮುಖವಾಗಬೇಕು ಎಂದು ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ