ಆ್ಯಪ್ನಗರ

ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಗೌಡರ ಕುಟುಂಬ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದವರು ಶ್ರೀ ಶಾರದಾ ಪೀಠದಲ್ಲಿ ಗುರುವಾರ ಆಯೋಜಿಸಿದ್ದ ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.

Vijaya Karnataka 8 Mar 2019, 5:00 am
ಶೃಂಗೇರಿ : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದವರು ಶ್ರೀ ಶಾರದಾ ಪೀಠದಲ್ಲಿ ಗುರುವಾರ ಆಯೋಜಿಸಿದ್ದ ಚಂಡಿಕಾಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.
Vijaya Karnataka Web deve gowdas family is in sri sharada peetha
ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡ ಗೌಡರ ಕುಟುಂಬ


ಶ್ರೀಪೀಠಕ್ಕೆ ಬುಧವಾರ ಸಂಜೆ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಚನ್ನಮ್ಮ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ನಿಖಿಲ್‌ಗೌಡ ವಾಸ್ತವ್ಯ ಮಾಡಿದ್ದರು. ಬೆಳಗ್ಗೆ ಶ್ರೀ ಶಾರದಾ ಪೀಠಕ್ಕೆ ಆಗಮಿಸಿದ ಗೌಡರ ಕುಟುಂಬ, ಎಲ್ಲ ದೇಗುಲಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿತು.

ನಂತರ ಶ್ರೀಮಠದ ಯಾಗಶಾಲೆಯಲ್ಲಿ ಆಯೋಜಿಸಿದ್ದ ಚಂಡಿಕಾಯಾಗ, ಸುಹಾಸಿನಿ ಪೂಜೆಯಲ್ಲಿ ಭಾಗವಹಿಸಿದ್ದರು. ಯಾಗ ನಡೆಯುವ ಸ್ಥಳಕ್ಕೆ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದ್ದು, ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. ಪೂರ್ಣಾಹುತಿ ನಂತರ ಶ್ರೀಮಠದ ನರಸಿಂಹವನಕ್ಕೆ ತೆರಳಿ, ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಪೀಠದ ಶಕ್ತಿ ದೇವತೆಯಾದ ಶ್ರೀ ಕಾಳಿಕಾಂಬಾ ಹಾಗೂ ಬೆಟ್ಟದ ಶ್ರೀ ಭವಾನಿ ಮಲಹಾನಿಕರೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಾಡಿನ ಜನತೆಗೆ ಒಳಿತಾಗಲಿ, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ದೇವರ ದರ್ಶನ ಪಡೆದು, ಜಗದ್ಗುರುಗಳ ಆಶೀರ್ವಾದ ಪಡೆದರೆ ನಮಗೆ ನೆಮ್ಮದಿ ದೊರಕುತ್ತದೆ. ಜಗದ್ಗುರುಗಳ ಆದೇಶದಂತೆ ಪೂಜೆ ಮಾಡಿಸಿದ್ದೇನೆ ಎಂದರು.

ಮಂಡ್ಯ ಜನರ ಬಯಕೆಯಂತೆ ನಿಖಿಲ್‌ ಕಣಕ್ಕೆ

ಮಂಡ್ಯ ಜನರು ನಿಖಿಲ್‌ಗೌಡ ಅಭ್ಯರ್ಥಿಯಾಗಬೇಕು ಎಂದು ಬಯಸಿದ್ದಾರೆ. ಮೇ ತಿಂಗಳಿನಲ್ಲಿ ನಡೆದ ಮಂಡ್ಯ ಚುನಾವಣೆಯಲ್ಲಿ ಸಕ್ರಿಯವಾಗಿ ನಿಖಿಲ್‌ ಪಾಲ್ಗೊಂಡಿದ್ದ. ಮಂಡ್ಯ ಜನರು ಇವನ ಬಗ್ಗೆ ವಿಶ್ವಾಸವಿಟ್ಟಿದ್ದಾರೆ. ಪಕ್ಷ ದ ಕಾರ್ಯಕರ್ತರು ಮಾಜಿ ಪ್ರಧಾನಿ ಗೌಡರ ಬಳಿ ನಿಖಿಲ್‌ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಗೋಬ್ಯಾಕ್‌ ನಿಖಿಲ್‌ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಿಖಿಲ್‌ ಬೆಂಬಲಿಸುವವರ ಸಂಖ್ಯೆ ಸಾಕಷ್ಟು ಇದೆ. ಪೂರ್ವ ಸಿದ್ಧತೆ ಮಾಡಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಅಪಪ್ರಚಾರ ಮಾಡುವ ತಂಡ ಸಕ್ರಿಯವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಹೆಚ್ಚು ಸ್ಥಾನವನ್ನು ಗಳಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಿತಾ ಕುಮಾರಸ್ವಾಮಿ ಮಾತನಾಡಿ, ಮಂಡ್ಯದ ಜನರು ಬಯಸಿದರೆ ಸ್ಪರ್ಧೆ ಮಾಡುವಂತೆ ಪಕ್ಷ ದ ವರಿಷ್ಠರಾದ ದೇವೇಗೌಡರು ತಿಳಿಸಿದ್ದಾರೆ. ರಾಜಕಿಯದಲ್ಲಿ ಎಲ್ಲರೂ ನಮ್ಮ ಪರವಾಗಿ ಇರಬೇಕು ಎಂಬುದಿಲ್ಲ. ಜನರ ಅಭಿಪ್ರಾಯ ಮುಖ್ಯ ಎಂದರು.

ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ನಾವು ನಂಬಿಕೊಂಡಿರುವಂತಹ ದೇವಸ್ಥಾನ ಶೃಂಗೇರಿ. ತಾಯಿ ಶಾರದಾಂಬೆ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇವೆ. ತಾಯಿ ಆಶೀರ್ವಾದದಿಂದ ತಂದೆಯವರು ಮುಖ್ಯಮಂತ್ರಿಯಾಗಿದ್ದಾರೆ. ಮಂಡ್ಯ ಜನತೆಯ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಪಕ್ಷ ಟಿಕೆಟ್‌ ನೀಡುತ್ತಿದೆ. ಮಂಡ್ಯ ಜನತೆಯ ಸೇವೆ ಮಾಡಲು ಸಿದ್ಧನಾಗಿದ್ದೇನೆ ಎಂದರು.

ಗೌಡರ ಕುಟುಂಬದೊಂದಿಗೆ ವಿಧಾನ ಪರಿಷತ್‌ ಉಪ ಸಭಾಪತಿ ಎಸ್‌.ಎಲ್‌.ಧರ್ಮೇಗೌಡ, ಶಾಸಕರಾದ ಟಿ.ಡಿ.ರಾಜೇಗೌಡ, ಎಸ್‌.ಎಲ್‌.ಬೋಜೇಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ಪಾಂಡೆ ಉಪಸ್ಥಿತರಿದ್ದರು.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ