ಆ್ಯಪ್ನಗರ

ಕೊಪ್ಪ ತಾಲೂಕಿನಲ್ಲಿ ಹಲವರಿಗೆ ದೋಖಾ

ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಂದ ಸಾವಿರಾರು ರೂ. ವಸೂಲಿ ಮಾಡಿದ್ದ ವ್ಯಕ್ತಿಯೊಬ್ಬ ಮಂಗಳವಾರ ಸಿಕ್ಕಿಬಿದ್ದಿದ್ದಾನೆ.

Vijaya Karnataka 7 Aug 2019, 5:00 am
ಚಿಕ್ಕಮಗಳೂರು : ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಂದ ಸಾವಿರಾರು ರೂ. ವಸೂಲಿ ಮಾಡಿದ್ದ ವ್ಯಕ್ತಿಯೊಬ್ಬ ಮಂಗಳವಾರ ಸಿಕ್ಕಿಬಿದ್ದಿದ್ದಾನೆ.
Vijaya Karnataka Web CKM-6SHIVUP12


ಕೊಪ್ಪ ತಾಲೂಕು ಕಟ್ಟಿಮನೆಯ ಚಂದ್ರು ಸಿಕ್ಕಿಬಿದ್ದ ಆರೋಪಿ. ಈತ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಸಾಲ ಕೊಡಿಸುವುದಾಗಿ ನಂಬಿಸಿ ಹಲವರಿಂದ 2 ಸಾವಿರದಿಂದ 10 ಸಾವಿರ ರೂ.ಗಳವರೆಗೂ ವಸೂಲು ಮಾಡಿದ್ದ. ತಾನು ಯಾರಿಂದ, ಎಷ್ಟು ಹಣ ಪಡೆದಿದ್ದೇನೆ ಎಂಬುದನ್ನು ಅವರ ವಿಳಾಸ ಸಮೇತ ಡೈರಿಯಲ್ಲೂ ನಮೂದಿಸಿಕೊಂಡಿದ್ದ.ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಸಾಲ ಬಯಸಿದ್ದ ಯುವತಿಯೊಬ್ಬರ ಬಳಿಯೂ ಈತ ಹಣ ಕೇಳಿದ್ದ. ತನಗೆ ಹಣ ಕೊಟ್ಟರೆ ನಿಮಗೆ ಅಗತ್ಯವಿರುವಷ್ಟು ಪ್ರಮಾಣದ ಸಾಲ ಮಂಜೂರು ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದ.ಈ ಬಗ್ಗೆ ಅನುಮಾನಗೊಂಡ ಯುವತಿ ಜಿ.ಪಂ. ಅಧ್ಯಕ್ಷೆ ಸುಜಾತಕೃಷ್ಣಪ್ಪ ಅವರಿಗೆ ಮಾಹಿತಿ ನೀಡಿದ್ದರು. ಸುಜಾತಕೃಷ್ಣಪ್ಪ ಜಯಪುರ ಪಿಎಸೈಗೆ ಮಾಹಿತಿ ನೀಡಿದ್ದು, ಆರೋಪಿ ಚಂದ್ರು ಅವರನ್ನು ಕರೆಸಿ ಎಲ್ಲರಿಗೂ ಹಣ ವಾಪಸ್‌ ನೀಡುವಂತೆ ಸೂಚಿಸಿದ್ದರು. ಇದಕ್ಕೆ ಚಂದ್ರು ಒಪ್ಪಿಕೊಂಡಿದ್ದ.ಆದರೆ, ಮಂಗಳವಾರ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ನೀಡುವ ಸಾಲಸೌಲಭ್ಯಕ್ಕೆ ಫಲಾನುಭವಿಗಳ ಆಯ್ಕೆ ನಡೆಯುವ ಸಂದರ್ಭ ಆರೋಪಿ ಚಂದ್ರು ಕೂಡ ಅಲ್ಲಿ ಕಾಣಿಸಿಕೊಂಡಿದ್ದ. ಈ ಬಗ್ಗೆ ಕೆಲವರು ಜಿ.ಪಂ. ಅಧ್ಯಕ್ಷರಿಗೆ ಮಾಹಿತಿ ನೀಡಿದ್ದು, ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಿಸಲಾಯಿತು.

ತಾನು ಹಣ ಪಡೆದಿರುವುದನ್ನು ಚಂದ್ರು ಒಪ್ಪಿಕೊಂಡಿದ್ದು, ಹಣ ಕೊಟ್ಟವರಿಗೆ ನಾನು ದಾಖಲೆಗಳನ್ನು ತಯಾರಿಸಿ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಕೊಡುವ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾನೆ. ಈತ ಹಣ ವಸೂಲು ಮಾಡಿದ್ದ ಬಹಳಷ್ಟು ಜನರಿಗೆ ಸಾಲ ಸಿಕ್ಕದ ಕಾರಣ ಸಾಲದ ಆಕಾಂಕ್ಷಿಗಳು ಚಂದ್ರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಹಸ್ರಾರು ರೂ ವಸೂಲಿ : ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಸಾಲ ಕೊಡಿಸುವುದಾಗಿ ಆರೋಪಿ ಚಂದ್ರು ಬಡವರಿಂದ ಸಾವಿರಾರು ರೂ. ವಸೂಲು ಮಾಡಿದ್ದಾನೆ. ಕೆಲವರು ತಾಳಿ ಅಡವಿಟ್ಟು ಆತನಿಗೆ ಹಣ ಕೊಟ್ಟಿರುವುದಾಗಿ ಹೇಳಿದ್ದಾರೆ. ಎಷ್ಟು ಹಣ ವಸೂಲು ಮಾಡಿದ್ದಾನೆ ಎಂಬುದು ವಿಚಾರಣೆಯಿಂದ ಹೊರಬರಬೇಕಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದ್ದು, ಯಾರಿಗೂ ಹಣ ಕೊಡಬೇಕಾದ ಅಗತ್ಯವಿಲ್ಲ.
-ಸುಜಾತಕೃಷ್ಣಪ್ಪ, ಅಧ್ಯಕ್ಷರು, ಜಿಲ್ಲಾ ಪಂಚಾಯಿತಿ

ಮಧ್ಯವರ್ತಿಗಳಿಗೆ ಅವಕಾಶವಿಲ್ಲ : ಸರಕಾರದ ಎಲ್ಲ ಸೌಲಭ್ಯಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಕರೆಯಲಾಗಿದೆ. ಯಾವುದೇ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇಲ್ಲ ಎಂದು ನಾಮಫಲಕ ಹಾಕಲಾಗಿದೆ. ಆದರೂ ಸಾಲ ಕೊಡಿಸುವುದಾಗಿ ಸಾರ್ವಜನಿಕರಿಗೆ ವಂಚಿಸುತ್ತಿರುವ ಜಾಲ ಇರುವ ಬಗ್ಗೆ ಅನುಮಾನ ಇದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. -ಕೆ.ಎಚ್‌.ಮಹೇಂದ್ರ, ಅಧ್ಯಕ್ಷರು, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ, ಜಿಲ್ಲಾ ಪಂಚಾಯಿತಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ