ಆ್ಯಪ್ನಗರ

ಡಾ.ವಿಶ್ವನಾಥ್‌ ಪಾರ್ಥಿವ ಶರೀರ ಅಂತ್ಯಕ್ರಿಯೆ

ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ನಿಧನರಾದ ಮಾಜಿ ಶಾಸಕ ಡಾ.ವೈ.ಸಿ. ವಿಶ್ವನಾಥ್‌(67) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಹುಟ್ಟೂರಾದ ಯಳ್ಳಂಬಳಸೆಯಲ್ಲಿ ಸೋಮವಾರ ನಡೆಯಿತು.

Vijaya Karnataka 22 May 2018, 5:00 am
ಕಡೂರು : ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯಾಹ್ನ ನಿಧನರಾದ ಮಾಜಿ ಶಾಸಕ ಡಾ.ವೈ.ಸಿ. ವಿಶ್ವನಾಥ್‌(67) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಹುಟ್ಟೂರಾದ ಯಳ್ಳಂಬಳಸೆಯಲ್ಲಿ ಸೋಮವಾರ ನಡೆಯಿತು.
Vijaya Karnataka Web dr vishwanath cremated body cremation
ಡಾ.ವಿಶ್ವನಾಥ್‌ ಪಾರ್ಥಿವ ಶರೀರ ಅಂತ್ಯಕ್ರಿಯೆ


ಡಾ.ವಿಶ್ವನಾಥ್‌ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಭಾನುವಾರ ಸಂಜೆ ಪಟ್ಟಣಕ್ಕೆ ತಂದು ಸರಕಾರಿ ಪದವಿಪೂರ್ವ ಕಾಲೇಜು ಆವರಣದ ಆಡಿಟೋರಿಯಂನಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದ್ದು, ರಾತ್ರಿ ಸ್ವಗ್ರಾಮ ಯಳ್ಳಂಬಳಸೆಗೆ ಕೊಂಡೊಯ್ಯಲಾಯಿತು. ಈ ಸಂದರ್ಭ ಅವರ ಅಭಿಮಾನಿಗಳು, ಸ್ನೇಹಿತರು, ಬಿಜೆಪಿ ಮುಖಂಡರು, ವೈದ್ಯ ಕ್ಷೇತ್ರದ ಸಹೋದ್ಯೋಗಿಗಳು ಸೇರಿದಂತೆ ಸಾವಿರಾರು ಜನ ಮನೆಯ ಮುಂದೆ ದುಃಖತಪ್ತರಾಗಿ ನೆರೆದಿದ್ದರು.

ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೇ ಬಂದುಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಸೋಮವಾರ ಬೆಳಗ್ಗೆ ಪಾರ್ಥಿವ ಶರೀರವನ್ನು ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ಅವರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮಕ್ಕಳಾದ ಡಾ.ಪವನ್‌ ಮತ್ತು ಪ್ರದೀಪ್‌ ಅಂತ್ಯಕ್ರಿಯೆ ನೆರವೇರಿಸಿದರು.

ಹುಲಿಕೆರೆ ಮಠದ ಶ್ರೀ ವಿರೂಪಾಕ್ಷ ಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಮಠದ ಶ್ರೀ ವೃಷಭೇಂದ್ರ ಸ್ವಾಮೀಜಿ, ಶಾಸಕರಾದ ಬೆಳ್ಳಿಪ್ರಕಾಶ್‌, ಸಿ.ಟಿ. ರವಿ, ಎಂ.ಪಿ.ಕುಮಾರಸ್ವಾಮಿ, ಡಿ.ಎಸ್‌. ಸುರೇಶ್‌, ನಾಗೇಶ್‌, ಎಂ.ಕೆ.ಪ್ರಾಣೇಶ್‌, ಮಾಜಿ ಶಾಸಕರಾದ ಕೆ.ಬಿ.ಮಲ್ಲಿಕಾರ್ಜುನ್‌, ಎಸ್‌.ಎಲ್‌.ಧರ್ಮೇಗೌಡ, ಮುಖಂಡರಾದ ರೇಖಾಹುಲಿಯಪ್ಪಗೌಡ, ಬೀರೂರು ದೇವರಾಜ್‌, ಎಂ.ಪಿ.ನಾರಾಯಣಸ್ವಾಮಿ, ಎಂ.ಆರ್‌.ಟಿ.ಸುರೇಶ್‌, ಎಸ್‌.ಟಿ.ತಮ್ಮಯ್ಯ ಮುಂತಾದ ಉಪಸ್ಥಿತರಿದ್ದರು. ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಸಹಸ್ರಾರು ಜನ ಪಾಲ್ಗೊಂಡಿದ್ದರು.

ರಂಭಾಪುರಿ ಜಗದ್ಗುರುಗಳಾದ ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದರು, ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರು ಯಳ್ಳಂಬಳಸೆಗೆ ಭಾನುವಾರ ರಾತ್ರಿ ಆಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದು ವೇದಘೋಷ ಪಠಣ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ