ಅಂತರಗಟ್ಟೆ ದುರ್ಗಾಂಬ ದೇವಿ ಅದ್ಧೂರಿ ರಥೋತ್ಸವ
ಇತಿಹಾಸ ಪ್ರಸಿದ್ಧ ಅಜ್ಜಂಪುರ ಸಮೀಪ ಅಂತರಗಟ್ಟೆ ದುರ್ಗಾಂಬ ದೇವಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬೆಳಗ್ಗೆ 7.20ಕ್ಕೆ ಅದ್ಧೂರಿಯಾಗಿ ನೆರವೇರಿತು.
ಅಜ್ಜಂಪುರ:ಇತಿಹಾಸ ಪ್ರಸಿದ್ಧ ಅಜ್ಜಂಪುರ ಸಮೀಪ ಅಂತರಗಟ್ಟೆ ದುರ್ಗಾಂಬ ದೇವಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬೆಳಗ್ಗೆ 7.20ಕ್ಕೆ ಅದ್ಧೂರಿಯಾಗಿ ನೆರವೇರಿತು.
35 ಅಡಿ ಎತ್ತರದ ಬಟ್ಟೆ ಪತಾಕೆಯೊಂದಿಗೆ ಸಂಪೂರ್ಣವಾಗಿ ಹೂಗಳಿಂದ ಅಲಂಕರಿಸಿದ್ದ ರಥ ಭಕ್ತರನ್ನು ಆಕರ್ಷಿಸಿತು.
ಕಡೂರು ಶಾಸಕ ವೈ.ಎಸ್.ವಿ. ದತ್ತಾ, ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ ದೇವಿಯನ್ನು ಹೆಗಲ ಮೇಲೆ ಹೊತ್ತು ರಥಕ್ಕೆ ಕೂರಿಸಿದರು. ತಹಸೀಲ್ದಾರ್ ಪೂಜೆ ನೆರವೇರಿಸಿದರು. ಅರ್ಚಕರು ಧ್ವಜ ಸ್ಥಂಭಕ್ಕೆ ಪೂಜೆ ಸಲ್ಲಿಸಿ, ರಥಕ್ಕೆ ಕಳಸಾರೋಹಣ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಜಾತಿ, ಮತ, ಭೇದವಿಲ್ಲದೇ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ದೇವಿ ದರ್ಶನ ಪಡೆದರು.
ಉಯ್ಯಾಲೆ ಮಂಟಪದಿಂದ ಬಸ್ ನಿಲ್ದಾಣದವರೆಗೆ ಶುಕ್ರವಾರ ರಾತ್ರಿಯಿಡೀ ನಡೆದ ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು, ಸ್ಥಳೀಯ ವಾದ್ಯವೃಂದ ತಂಡಗಳು ಭಾಗವಹಿಸಿದ್ದವು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಡಿಮದ್ದು, ಬಾಣಬಿರುಸನ್ನು ಪ್ರದರ್ಶಿಸಲಾಯಿತು.
ಮಂಗಳವಾದ್ಯದೊಂದಿಗೆ ಹಣ್ಣು ಕಾಯಿ, ಫಲ-ಪುಷ್ಪಗಳನ್ನು ದೇವಿಗೆ ನೈವೇದ್ಯ ಮಾಡಲಾಯಿತು. ರಥೋತ್ಸವ ವೀಕ್ಷ ಣೆಗೆ ಭಕ್ತರು ಉತ್ಸುಕರಾಗಿ ಭಾಗವಹಿಸಿದ್ದರು. ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾಸನ ಜಿಲ್ಲೆ ಹಾಗೂ ಸುತ್ತ ಮುತ್ತಲ ಗ್ರಾಮಗಳಿಂದ ಸಹಸ್ರಾರು ಎತ್ತಿನಗಾಡಿ, ಟ್ರಾಕ್ಟರ್, ದ್ವಿ ಚಕ್ರ ವಾಹನ ಮೂಲಕ ಸಾವಿರಾರು ಭಕ್ತರು ಆಗಮಿಸಿದ್ದರು.
ಭಕ್ತರು ಜೀವಂತ ಕೋಳಿ, ಬಾಳೆಹಣ್ಣು ಎಸೆಯಬಾರದೆಂದು ಪೊಲೀಸ್ ಇಲಾಖೆ ಮತ್ತು ದೇವಸ್ಥಾನ ಆಡಳಿತ ಮಂಡಳಿ ಧ್ವನಿವರ್ಧಕ ಮೂಲಕ ಎಚ್ಚರಿಸುತ್ತಿದ್ದರೂ ಪೊಲೀಸರನ್ನು ಲೆಕ್ಕಿಸದೆ ಭಕ್ತಾದಿಗಳು ಹರಕೆ ತೀರಿಸುವಲ್ಲಿ ಮುಂದಾಗಿದ್ದರು. ಹಲವು ಮಕ್ಕಳು ಪೋಷಕರಿಂದ ಬೇರ್ಪಟ್ಟು ಅಳುತ್ತಿದ್ದವರನ್ನು ಪೊಲೀಸರು ಸಮಾಧಾನ ಮಾಡಿ ವಾರಸುದಾರರಿಗೆ ತಲುಪಿಸಿದರು.
ಮುಖ್ಯ ರಸ್ತೆಯಲ್ಲಿ ಸಾವಿರಾರು ಬೆಂಡು, ಬತಾಸು, ಮಂಡಕ್ಕಿ, ಖಾರ, ಸಿಹಿ ಅಂಗಡಿ ಹಾಗೂ ದೇವಸ್ಥಾನದ ಆವರಣದಲ್ಲಿ ಹೂವು, ಹಣ್ಣು, ಕಾಯಿ ಮಾರಾಟದ ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿತ್ತು.
ಸುಮಾರು 1000 ಎತ್ತಿನಗಾಡಿ, 500 ಟ್ರಾಕ್ಟರ್ ಮೂಲಕ ಅಂದಾಜು 10 ಸಾವಿರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಒಂದು ವಾರ ನಡೆಯುವ ಜಾತ್ರೆಗೆ ಲಕ್ಷಾಂತರ ಭಕ್ತಾದಿಗಳು ಬಂದು ಹೋಗುತ್ತಿರುತ್ತಾರೆ. ಸೂಕ್ತ ಬಂದೋಬಸ್ತ್ ಮಾಡಲು 250 ಪೊಲೀಸರನ್ನು ನೇಮಿಸಲಾಗಿತ್ತು.
ತರೀಕೆರೆ ಡಿವೈಎಸ್ಪಿ ತಿರುಮಲೇಶ್, ಗ್ರಾಮಾಂತರ ಸಿಪಿಐ ರಾಮಚಂದ್ರನಾಯಕ್, ತರೀಕೆರೆ ಟೌನ್ ಸಿಪಿಐ ಜೆ.ಎನ್.ಎಲ್. ಗೌಳಿ, ಅಜ್ಜಂಪುರ ಪಿಎಸ್ಐ ಕೆ.ಟಿ. ರಮೇಶ್ ನೇತೃತ್ವ ವಹಿಸಿದ್ದರು. ಅಗ್ನಿಶಾಮಕದಳ, ತುರ್ತು ವಾಹನ, ಪಶು ಆಸ್ಪತ್ರೆ ಹಗಲೂ-ರಾತ್ರಿ ಸೇವೆ ಸಲ್ಲಿಸಲು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು.
ಭಾನುವಾರ ಅಶ್ವತ್ಥಾರೋಹಣ, ಸೋಮವಾರ ದೇವಿಯವರ ಅಡ್ಡ ಪಲ್ಲಕ್ಕಿ ಉತ್ಸವ, ಮಂಗಳವಾರ ಅವಭೃತ ಪಂಚಾಭಿಷೇಕ, ಅಚ್ಚಂದ ಸೇವೆ, ಧ್ವಜಾರೋಹಣ ನಡೆಯುವ ಮೂಲಕ ಕಳೆದ ಎಂಟು ದಿನದ ದುರ್ಗಾಂಬ ದೇವಿ ಜಾತ್ರೆಗೆ ತೆರೆ ಬೀಳಲಿದೆ.
ರಥ ಎಳೆಯುವ ಸಂದರ್ಭ ದೇವಿಗೆ ಭಕ್ತರು ಮೆಣಸನ್ನು ಎಸೆಯುತ್ತಾರೆ. ನಂತರ ಬಿದ್ದ ಮೆಣಸನ್ನು ಆಯ್ದು ಮನೇಲಿ ದೇವರ ಸನ್ನಿಧಿಯಲ್ಲಿ ಅದನ್ನಿಟ್ಟರೆ ಮುಂದಿನ ರಥೋತ್ಸವದವರೆಗೂ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ಹಲವು ಮಹಿಳೆಯರು ಮೆಣಸನ್ನು ಆಯುತ್ತಿದ್ದ ದೃಶ್ಯ ಕಂಡುಬಂತು.
ಜಾತ್ರೆಗೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ಅನ್ನದಾಸೋಹ ಸಮಿತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.ದಾನಿಗಳು, ರಾಜಕೀಯ ಮುಖಂಡರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ಕೆಲವೆಡೆ ಕೊರತೆಯುಂಟಾಗಿ ಜನರು ಪರದಾಡುತ್ತಿದ್ದರು. ಎತ್ತಿನ ಗಾಡಿಗಳಲ್ಲಿ ಬರುವವರು ರಾಸಿಗೆ ಮದ್ಯ ಕುಡಿಸಿ ಗಾಡಿ ಓಡಿಸುತ್ತಿರುವುದಾಗಿ ತಿಳಿದು ಬಂದಿತು. ಇದರ ಪರಿಣಾಮ ಹಲವು ಕಡೆ ರಾಸುಗಳು ಅಪಘಾಕ್ಕೀಡಾದರೆ, ಅಜ್ಜಂಪುರ ಸಮೀಪ ಎರಡು ರಾಸುಗಳು ಮೃತಪಟ್ಟವು.
-----------------------
ಬರದಿಂದ ಮುಕ್ತಿ ನೀಡಲು, ಮಳೆಗಾಗಿ ತಾಯಿ ದುರ್ಗೆಯನ್ನು ಬೇಡಿಕೊಂಡೆ. ಮಳೆ-ಬೆಳೆ ಚನ್ನಾಗಿ ಆಗಲಿ. ಅಂತರ್ಜಲ ಹೆಚ್ಚಲಿ. ತಾಲೂಕಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಆಗಬೇಕು. ನನಗೆ ಆಸ್ತಿ-ಅಡವು ಬೇಡಾ. ಜನರು ದತ್ತಾ ಒಳ್ಳೆ ಕೆಲಸ ಮಾಡಿದ್ದಾನೆ ಎಂದರೆ ಸಾಕು. ಮುಂದಿನ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸುತ್ತೇನೆ. ಜನರು ಆಶೀರ್ವದಿಸಬೇಕು.
-ವೈ.ಎಸ್.ವಿ. ದತ್ತಾ, ಶಾಸಕ, ಕಡೂರು.
---------
35 ವರ್ಷದಿಂದ ಅಂತರಗಟ್ಟೆ ದುರ್ಗಾಂಬ ದೇವಿ ಸನ್ನಿಧಿ ಮತ್ತು ಸುತ್ತ-ಮುತ್ತ ಕಾಯಿ ವ್ಯಾಪಾರ ಮಾಡುತ್ತಿದ್ದೇನೆ. ತಾಯಿ ದುರ್ಗೆಯನ್ನು ನಂಬಿದರೆ ಕೈ ಬಿಡಲ್ಲ ಎಂಬುದಕ್ಕೆ ನಾನೇ ಉದಾಹರಣೆ.
-ಕಾಯಿ ವೆಂಕಟೇಶ್, ತರೀಕೆರೆ.