ಆ್ಯಪ್ನಗರ

ಚುನಾವಣೆಗೂ ಬಾಡೂಟಕ್ಕೂ ಬಿಡದ ನಂಟು!

ಚುನಾವಣೆ ಯಾವುದೇ ಇರಲಿ, ಗುಂಡು ತುಂಡು ಇಲ್ಲದಿದ್ದರೆ ಅದು ರಂಗೇರುವುದಿಲ್ಲ. ಚುನಾವಣೆ ಎಂಬುದು ರಾಜಕಾರಣಿಗಳು, ಮತದಾರರ ಪಾಲಿಗೆ ಹಬ್ಬ. ಆದರೆ, ಕುರಿ ಕೋಳಿಗಳಿಗೆ ಮಾತ್ರ ಪ್ರಾಣಸಂಕಟ!

Vijaya Karnataka 23 Mar 2018, 10:11 pm
ಆರಗ ರವಿ
Vijaya Karnataka Web election and non vegetarian
ಚುನಾವಣೆಗೂ ಬಾಡೂಟಕ್ಕೂ ಬಿಡದ ನಂಟು!

ಚಿಕ್ಕಮಗಳೂರು :
ಚುನಾವಣೆ ಯಾವುದೇ ಇರಲಿ, ಗುಂಡು ತುಂಡು ಇಲ್ಲದಿದ್ದರೆ ಅದು ರಂಗೇರುವುದಿಲ್ಲ. ಚುನಾವಣೆ ಎಂಬುದು ರಾಜಕಾರಣಿಗಳು, ಮತದಾರರ ಪಾಲಿಗೆ ಹಬ್ಬ. ಆದರೆ, ಕುರಿ ಕೋಳಿಗಳಿಗೆ ಮಾತ್ರ ಪ್ರಾಣಸಂಕಟ!

ಚುನಾವಣೆಗೆ ನಾಲ್ಕೈದು ತಿಂಗಳಿರುವಾಗಲೇ ಕೆಲವರು ಹಬ್ಬಹರಿದಿನ, ಜಾತ್ರೆಗಳಿಗೆ ಕುರಿಗಳನ್ನು ಕೊಡಿಸುವ, 30-40 ಕುರಿಗಳನ್ನು ಕಡಿಸಿ ಊರೂರಿಗೇ ಊಟ ಹಾಕಿಸಿ ಮತದಾರರನ್ನು ಊಟದ ಋುಣದ ಸೆಂಟಿಮೆಂಟ್‌ಗೆ ಒಳಪಡಿಸುತ್ತಿದ್ದಾರೆ. ಅದರಲ್ಲೂ ಜಾತ್ರೆ, ದೇವರ ಉತ್ಸವಗಳ ಸಮಯದಲ್ಲೇ ವಿಧಾನಸಭೆ ಚುನಾವಣೆ ಬಂದಿರುವುದರಿಂದ ಬಹಳಷ್ಟು ಕಡೆಗಳಲ್ಲಿ ಕುರಿ, ಕೋಳಿಗಳನ್ನು ಜನರಿಗೆ ರಾಜಕಾರಣಿಗಳೇ ಪೂರೈಕೆ ಮಾಡುತ್ತಿದ್ದಾರೆ.

ಚುನಾವಣೆಗಳಲ್ಲಿ ಪಕ್ಷದ ಬಹುತೇಕ ಕಾರ‍್ಯಕರ್ತರು, ಬೆಂಬಲಿಗರಿಗೆ ಸಸ್ಯಾಹಾರ ರುಚಿಸುವುದೇ ಇಲ್ಲ. ಬಾಡೂಟವಿಲ್ಲದಿದ್ದರೆ ಪ್ರಚಾರಕ್ಕೇ ಬರುವುದಿಲ್ಲ ಎಂಬ ಸ್ಥಿತಿ ಇರುವುದರಿಂದ ಅಭ್ಯರ್ಥಿಗಳು ಕನಿಷ್ಠ ಎರಡು ತಿಂಗಳಾದರೂ ಗುಂಡು ತುಂಡಿನ ವ್ಯವಸ್ಥೆ ಮಾಡಲೇಬೇಕು! ಕಾರ‍್ಯಕರ್ತರ ಮೂಗಿಗೆ ಮಸಾಲೆಯ ಘಮ ಬಡಿಯದಿದ್ದರೆ ಚುನಾವಣೆ ಪ್ರಚಾರವೂ ತೋಪೆದ್ದು ಹೋಗುವುದರಿಂದ ಮಾಂಸಾಹಾರಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿಗೆ ಬಾಡೂಟ ನಿಶ್ಚಿತವಾಗಿರುತ್ತದೆ.

ಬಿರಿಯಾನಿಗೆ ಡಿಮ್ಯಾಂಡ್‌


ಬಾಡೂಟದಲ್ಲೂ ಬಿರಿಯಾನಿಗೆ ಅಗ್ರಸ್ಥಾನ. ಚಿಕನ್‌, ಮಟನ್‌ ಬಿರಿಯಾನಿಗೆ ಎಲ್ಲಿಲ್ಲದ ಡಿಮ್ಯಾಂಡ್‌. ಎಗ್‌ ಬಿರಿಯಾನಿ, ಫಿಶ್‌ ಬಿರಿಯಾನಿ, ಕಬಾಬ್‌, ಸುಕ್ಕ, ಚಾಫ್ಸ್‌, ಕಲ್ಮಿ ಕಬಾಬ್‌, ಲಾಲಿಪಪ್‌, ಚಿಕನ್‌ ಪೆಪ್ಪರ್‌ ಡ್ರೈ, ಚಿಕನ್‌ ಚಿಲ್ಲಿ, ಮಟನ್‌ ಡ್ರೈ, ಮೀನೂಟ ಇಂತಹವುಗಳಿಗೆ ನಂತರದ ಸ್ಥಾನ. ಮೀನು, ಹಂದಿ ಮಾಂಸದ ಹೋಟೆಲ್‌ಗಳೂ ಚುನಾವಣೆ ಸಮಯದಲ್ಲಿ ಗಿಜಿಗುಡುತ್ತಿರುತ್ತವೆ.

ಅದರಲ್ಲೂ ನಾಟಿ ಶೈಲಿಯ ಬಾಡೂಟದ ಹೋಟೆಲ್‌ಗಳು ಚುನಾವಣೆ ಮುಗಿಯುವವರೆಗೂ ತುಂಬಿ ತುಳುಕುತ್ತಿರುತ್ತವೆ. ನಗರ ಪ್ರದೇಶದಲ್ಲಿರುವ ಬಿರಿಯಾನಿ ಹೋಟೆಲ್‌ಗಳಲ್ಲಿ ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರು, ಕಾರ‍್ಯಕರ್ತರು, ಬೆಂಬಲಿಗರ ಮುಖಗಳು ಕಾಣಿಸುತ್ತಿವೆ. ಗ್ರಾಮೀಣ ಪ್ರದೇಶಕ್ಕೆ ಪ್ರಚಾರಕ್ಕೆ ಹೋದರೆ ಯಾವುದಾದರೂ ಮನೆಯಲ್ಲಿ ಅಥವಾ ಮಾಂಸಾಹಾರಿ ಅಡುಗೆ ತಯಾರು ಮಾಡುವವರನ್ನು ಹುಡುಕಿ ಅಡುಗೆ ಮಾಡಿಸುವ ಪರಿಪಾಠವೂ ಇದೆ.

ಲೆಕ್ಕಾಚಾರ ಹೇಗೆ?

ಎಲ್ಲ ಪಕ್ಷದ ಅಭ್ಯರ್ಥಿಗಳೂ ಪ್ರಚಾರಕ್ಕೆ ಕಾರ‍್ಯಕರ್ತರ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡಿರುತ್ತಾರೆ. ಒಂದೊಂದು ತಂಡದಲ್ಲಿ ಇರುವ ಮುಖಂಡರು, ಕಾರ‍್ಯಕರ್ತರ ಸಂಖ್ಯೆಗೆ ತಕ್ಕಂತೆ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ, ಪ್ರತಿಯೊಬ್ಬರಿಗೂ ದಿನವೊಂದಕ್ಕೆ ಕೊಡಬೇಕಾದ ಮೊತ್ತ, 'ಎಣ್ಣೆ' ಖರ್ಚು ಎಲ್ಲವನ್ನೂ ಲೆಕ್ಕ ಹಾಕಿ ಆ ತಂಡದ ನೇತೃತ್ವ ವಹಿಸಿರುವವರ ಕೈಯಲ್ಲಿ ಹಣ ಕೊಟ್ಟಿರುತ್ತಾರೆ.

ಬಾಯಿಗೆ ರುಚಿಸುವ ಊಟ ಸಿಕ್ಕದಿದ್ದರೆ, ಸವಲತ್ತಿನಲ್ಲಿ ಕೊರತೆಯಾದರೆ ಇಂದು ಪ್ರಚಾರಕ್ಕೆ ಬಂದವರು ಮರುದಿನ ಬರುವುದಿಲ್ಲ ಎಂಬ ಆತಂಕ ನೇತೃತ್ವ ವಹಿಸಿದವರಿಗೂ ಇರುತ್ತದೆ. ಹೀಗಾಗಿ ಪ್ರಚಾರಕ್ಕೆ ಬರುವವರ ಬಗ್ಗೆ ಮುತುವರ್ಜಿ ವಹಿಸಲೇಬೇಕಾದ ಅನಿವಾರ‍್ಯತೆ ಇರುತ್ತದೆ. ಹೀಗಾಗಿ ಬಾಡೂಟಕ್ಕೆ ಡಿಮ್ಯಾಂಡ್‌ ಸಲ್ಲಿಸಿದರೆ ರಾಜಕಾರಣಿಗಳು ನಿರಾಕರಿಸಲು ಸಾಧ್ಯವೇ ಇಲ್ಲ.

ಸಭೆ, ಸಮಾವೇಶಗಳನ್ನು ಆಯೋಜಿಸಿದರೂ ಬಾಡೂಟಕ್ಕೆ ಮೊದಲ ಆದ್ಯತೆ. ನೀತಿಸಂಹಿತೆ ಜಾರಿಗೆ ಬಂದ ನಂತರವೂ ಮತದಾರರ ಓಲೈಕೆಗೆ ಬಾಡೂಟ ಮಾಡಿಸಿ ಸಿಕ್ಕಿಬೀಳುವುದು ಇದ್ದೇ ಇರುತ್ತದೆ. ಚುನಾವಣಾಧಿಕಾರಿಗಳು ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳುವ ಕಲೆಯನ್ನು ಕರಗತ ಮಾಡಿಕೊಂಡಿರುವ ರಾಜಕಾರಣಿಗಳು ಬಾಡೂಟದ ಹೋಟೆಲ್‌ಗಳಿಗೆ ಟೋಕನ್‌ ಕೊಡುವ, ನೇರವಾಗಿ ಹಣವನ್ನೇ ಕೊಟ್ಟು ಹೋಟೆಲ್‌ಗೆ ಕಳಿಸುವ ಅಥವಾ ಬಾಡೂಟದ ಹೋಟೆಲ್‌ಗಳಿಗೆ ಮುಂಚಿತವಾಗಿಯೇ ಹೇಳಿ ನೂರಾರು ಕಾರ‍್ಯಕರ್ತರಿಗೆ, ಮತದಾರರಿಗೆ ಊಟ ಹಾಕಿಸುವ ಮಾರ್ಗ ಕಂಡುಕೊಂಡಿರುತ್ತಾರೆ.

ಕುರಿ, ಕೋಳಿಗೆ ಬೇಡಿಕೆ

ಚುನಾವಣೆ ಬಂದರೆ ಸಾಕು ಕುರಿ, ಕೋಳಿಗಳಿಗೂ ಬೇಡಿಕೆ ಹೆಚ್ಚುತ್ತದೆ. ಮತದಾರರಿಗೆ ಆಮಿಷವೊಡ್ಡಲು ವಿವಿಧ ವಸ್ತುಗಳು, ಮದ್ಯದ ಬಾಟಲಿಗಳನ್ನು ಕೊಡುವ ಜತೆಗೆ ಮನೆಗೊಂದು ಕೋಳಿಯನ್ನೂ ಕೆಲವು ಕಡೆ ಕೊಡಲಾಗುತ್ತದೆ. ಚುನಾವಣೆ ಮುಗಿದ ನಂತರ ಗೆದ್ದ ಅಭ್ಯರ್ಥಿಗಳು ತಾವು ಹರಕೆ ಹೊತ್ತಿದ್ದ ದೇವಸ್ಥಾನಗಳಲ್ಲಿ ನೂರಾರು ಕುರಿ, ಕೋಳಿ, ಹಂದಿಗಳನ್ನು ಕಡಿದು ಸಾವಿರಾರು ಜನರಿಗೆ ಊಟ ಹಾಕಿಸುವ ಪದ್ಧತಿಯೂ ಇದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ‍್ಯರು 'ಆಮಿಷ ರಹಿತ ಮಾದರಿ ಚುನಾವಣೆ' ನಡೆಸಲು ಪ್ರಯತ್ನಿಸಿದ್ದು ಇತಿಹಾಸ. ಚುನಾವಣೆ ಮುಗಿದ ನಂತರ ಜಿಲ್ಲೆಯಲ್ಲಿ ಅತಿಹೆಚ್ಚು ಚುನಾವಣಾ ಅಕ್ರಮ ಪ್ರಕರಣಗಳು ಚಿಕ್ಕಮಗಳೂರು ಕ್ಷೇತ್ರದಲ್ಲೇ ದಾಖಲಾಗಿದ್ದವು!


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ