ಆ್ಯಪ್ನಗರ

ಸಾಂಕ್ರಾಮಿಕ ರೋಗದ ಭೀತಿ: ಮೂಡಿಗೆರೆ ಪ.ಪಂ.ನಿಂದ ಕಲುಷಿತ ನೀರು ಪೂರೈಕೆ, ಸಾರ್ವಜನಿಕರಲ್ಲಿ ಆತಂಕ!

ಪಟ್ಟಣ ಪಂಚಾಯಿತಿಯಿಂದ ಪ್ರತಿ 2 ದಿನಕ್ಕೊಮ್ಮೆ ಪೂರೈಕೆ ಮಾಡುವ ಕುಡಿಯುವ ನೀರು ಸಂಪೂರ್ಣ ಕಲುಷಿತಗೊಂಡಿದ್ದು ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತುರ್ತು ಗಮನಹರಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂಬುದು ಪಟ್ಟಣದ ನಿವಾಸಿಗಳ ಆಗ್ರಹ.

Vijaya Karnataka Web 24 Sep 2020, 8:50 am
ಮೂಡಿಗೆರೆ: ಮೂಡಿಗೆರೆ ಪ.ಪಂ.ನಿಂದ ಕಲುಷಿತ ನೀರು ಪೂರೈಕೆಯಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಎದುರಾಗಿದೆ. ಪ.ಪಂ.ಯಿಂದ ದಾರದಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಿತ್ತಲೆಗಂಡಿಯಿಂದ ಹೇಮಾವತಿ ನದಿ ಹಾಗೂ ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯ ಬೀಜವಳ್ಳಿಯ ಸುಂಡೆಕೆರೆ ಹಳ್ಳದಲ್ಲಿರುವ ಬಾವಿ, ಈ ಎರಡೂ ಕಡೆಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪಟ್ಟಣದ ಜೆ.ಎಂ.ರಸ್ತೆ, ಕುವೆಂಪು ನಗರ, ದೊಡ್ಡಿ ಬೀದಿ, ಕೆ.ಎಂ.ರಸ್ತೆ, ಗಂಗನಮಕ್ಕಿ, ವಿದ್ಯಾನಗರ ಬಡಾವಣೆಗಳಿಗೆ ಬೀಜವಳ್ಳಿಯಿಂದ, ಎಂ.ಜಿ.ರಸ್ತೆ, ಛತ್ರಮೈದಾನ, ಮಾರ್ಕೆಟ್‌ ರಸ್ತೆ, ಗೆಂಡೇಹಳ್ಳಿ ರಸ್ತೆ, ಕುರುಕುಮಕ್ಕಿ ಮತ್ತಿತರ ಬಡಾವಣೆಗೆ ಕಿತ್ತಲೆಗಂಡಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಕಿತ್ತಲೆಗಂಡಿಯಿಂದ ನೀರು ಪೂರೈಕೆಯಾಗುವ ಬಡಾವಣೆ ಜನರಿಗೆ ಕಳೆದ 1 ತಿಂಗಳಿಂದ ತುರಿಕೆ, ಕಜ್ಜಿ ಸಹಿತ ಶೀತ, ಜ್ವರ ಕಾಣಿಸಿಕೊಳ್ಳುತ್ತಿದೆ. ಬೀಜವಳ್ಳಿಯಿಂದ ಪೂರೈಸುವ ನೀರು ಕುಡಿಯಲು ಯೋಗ್ಯವಿಲ್ಲದಂತೆ ಸಂಪೂರ್ಣ ಕಲುಷಿತಗೊಂಡಿದೆ. ಈ ನೀರನ್ನು ಬಳಸುವವರಿಗೆ ಸಾಂಕ್ರಾಮಿಕ ರೋಗ ಹರಡುವ ಭಯ ಉಂಟಾಗಿದೆ. ಎರಡೂ ಕಡೆಯ ನೀರು ಬಳಸಲು ಯೋಗ್ಯವಿಲ್ಲ.

ಈ ಬಗ್ಗೆ ಪ.ಪಂ. ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ತುರ್ತು ಗಮನಹರಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂಬುದು ಪಟ್ಟಣದ ನಿವಾಸಿಗಳ ಆಗ್ರಹ.

ನಮಗೆ ಕುಡಿಯಲು ಪ.ಪಂ.ಯಿಂದ ಪೂರೈಕೆ ಮಾಡುವ ನೀರು ಸಂಪೂರ್ಣ ಕಲುಷಿತಗೊಂಡು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಈ ನೀರು ಬಳಸುವುದರಿಂದ ಅಲರ್ಜಿ, ಮೈಯಲ್ಲಿ ತುರಿಕೆ, ಕಜ್ಜಿ, ಶೀತ, ಜ್ವರ, ತಲೆನೋವು ಕಾಣಿಸಿಕೊಳ್ಳುತ್ತಿದೆ. ಕೊರೊನಾ ಸೋಂಕಿನ ವೇಳೆ ಶುದ್ಧ ನೀರು ಪೂರೈಕೆ ಮಾಡಬೇಕಿದ್ದ ಪ.ಪಂ. ಅಧಿಕಾರಿಗಳು ಕಲುಷಿತ ನೀರು ನೀಡಿ ಮಾರಕ ಕಾಯಿಲೆ ಆವರಿಸುವಂತೆ ಮಾಡುತ್ತಿದ್ದಾರೆ.
ಸೋಮಣ್ಣ, ದೊಡ್ಡಿಬೀದಿ ನಿವಾಸಿ

ಪಟ್ಟಣಕ್ಕೆ ಪೂರೈಕೆ ಮಾಡುವ ಕುಡಿಯುವ ನೀರು ಶುದ್ಧವಾಗಿದೆ. ಈ ನೀರನ್ನು ಸ್ಥಳೀಯ ನಿವಾಸಿಗಳು ಬಳಸುವುದರಿಂದ ಯಾವುದೇ ತೊಂದರೆಯಿಲ್ಲ. ನೀರನ್ನು ಶೇಖರಿಸುವ ಟ್ಯಾಂಕ್‌ನ ತಳಭಾಗದಲ್ಲಿ ಮಳೆಗಾಲವಾಗಿದ್ದರಿಂದ ಸ್ವಲ್ಪ ಕೊಳೆ ಇರುತ್ತದೆಯಷ್ಟೆ. ಇದರಿಂದ ನೀರು ಮಲೀನವಾದಂತೆ ಕಾಣುತ್ತದೆ. ಕುಡಿಯುವ ನೀರು ಪೂರೈಕೆಯಲ್ಲಿ ಲೋಪದೋಷ ಉಂಟಾಗದಂತೆ ಮುತುವರ್ಜಿ ವಹಿಸಲಾಗುವುದು.
ಪ್ರಕಾಶ್‌, ಆರೋಗ್ಯ ನಿರೀಕ್ಷಕರು, ಪ.ಪಂ. ಮೂಡಿಗೆರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ