ಆ್ಯಪ್ನಗರ

ಹಬ್ಬಗಳು ಸಂಸ್ಕೃತಿ, ಸಂಪ್ರದಾಯದ ಪ್ರತಿಬಿಂಬ

ನಾಡಿನ ಸಂಸ್ಕೃತಿ, ಸಂಪ್ರದಾಯದ ಪ್ರತಿಬಿಂಬವಾಗಿರುವ ಹಬ್ಬ-ಹರಿದಿನಗಳನ್ನು ಒಂದೇ ಸೂರಿನಡಿ ಪ್ರಸ್ತುತ ಪಡಿಸುವ ಸಾಂಪ್ರಾದಾಯಿಕ, ಸಾಂಸ್ಕೃತಿಕ ಉತ್ಸವ ನಗರದ ಶ್ರೀ ತರಳಬಾಳು ಜಗದ್ಗುರು ಮಹಿಳಾ ಕಾಲೇಜಿನಲ್ಲಿ ಮೈದಾಳಿತ್ತು.

Vijaya Karnataka 14 Dec 2022, 6:07 pm
ಚಿಕ್ಕಮಗಳೂರು: ನಾಡಿನ ಸಂಸ್ಕೃತಿ, ಸಂಪ್ರದಾಯದ ಪ್ರತಿಬಿಂಬವಾಗಿರುವ ಹಬ್ಬ-ಹರಿದಿನಗಳನ್ನು ಒಂದೇ ಸೂರಿನಡಿ ಪ್ರಸ್ತುತ ಪಡಿಸುವ ಸಾಂಪ್ರಾದಾಯಿಕ, ಸಾಂಸ್ಕೃತಿಕ ಉತ್ಸವ ನಗರದ ಶ್ರೀ ತರಳಬಾಳು ಜಗದ್ಗುರು ಮಹಿಳಾ ಕಾಲೇಜಿನಲ್ಲಿ ಮೈದಾಳಿತ್ತು.
Vijaya Karnataka Web ಪೂಜೆ


ಕಾಲೇಜ್‌ ವಾರ್ಷಿಕೋತ್ಸವಕ್ಕೂ ಮುನ್ನ ಆಚರಿಸುವ ಸಾಂಸ್ಕೃತಿಕ ಉತ್ಸವದಲ್ಲಿ ಪದವಿ ವಿವಿಧ ಹಂತದ ವಿದ್ಯಾರ್ಥಿನಿಯರು ತಮ್ಮ ಮನೆಯಲ್ಲಿಯೇ ಹಬ್ಬ ನಡೆದಂತೆ ಸಡಗರ,ಸಂಭ್ರಮದಿಂದ ಖುಷಿ ಹಂಚಿಕೊಂಡರು. ದಿನದ ಮಟ್ಟಗೆ ಆಧುನಿಕ ಉಡುಗೆ,ತೊಡುಗೆ ಮೂಲೆಗೆ ಸರಿಸಿ ಸಾಂಪ್ರದಾಯಿಕ ಸೀರೆ, ಮೈತುಂಬ ಬಂಗಾರ ತೊಟ್ಟು ಕಾಲೇಜಿಗೆ ಬಂದಿದ್ದ ನಾರಿಯರು ಬೆಳಗ್ಗೆಯಿಂದಲೇ ಕಾಲೇಜು ಆವರಣಕ್ಕೆ ರಂಗೋಲಿ ಹಾಕುವುದು, ಕೊಠಡಿ ಬಾಗಿಲಿಗೆ ತಳಿರು ತೋರಣ ಕಟ್ಟುವ ಮೂಲಕ ಕಾಲೇಜ್‌ ಆವರಣದಲ್ಲಿ ಹಬ್ಬದ ಕಳೆ ಸೃಷ್ಟಿ ಮಾಡಿದರು.

ಪೊಂಗಲ್‌, ಸಂಕ್ರಾಂತಿ, ಶ್ರೀನಿವಾಸ ಕಲ್ಯಾಣ ಆಚರಣೆ, ಹಾಗೂ ಗೋದಿ ಸಸಿ ಉತ್ಸವಕ್ಕೆ ತಕ್ಕಂತೆ ದೇವರ ವಿಗ್ರಹ ಪ್ರತಿಷ್ಠಾಪಿಸಿ ನೈವೇದ್ಯ ಅರ್ಪಿಸಿದ್ದರು. ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ಅಸ್ಸಾಂನ ಬಿಹೂ, ಪಂಜಾಬ್‌ನಲ್ಲಿ ನಡೆಯುವ ಲೋರಿ, ಕರ್ನಾಟಕದ ಸಂಕ್ರಾಂತಿ, ಉತ್ತರಕಾಂಡದ ಉತ್ತರಾಯಣ, ತಮಿಳುನಾಡಿನ ಪೊಂಗಲ್‌ ಹೀಗೆ ವಿವಿಧ ರಾಜ್ಯಗಳಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬ ವನ್ನು ಗುರುವಾರ ಎಸ್‌ಟಿಜೆ ಕಾಲೇಜಿನಲ್ಲಿ ನೋಡಬಹುದಿತ್ತು.

ದ್ವಿತೀಯ ಬಿಎ ವಿದ್ಯಾರ್ಥಿನಿಯರು ರಾಜಸ್ತಾನದಲ್ಲಿ ಲಂಬಾಣಿ ಸಮುದಾಯ ಆಚರಿಸುವ ಗೋದಿ ಸಸಿ ಹಬ್ಬ ಮಾಡಿ ಸಡಗರದಿಂದ ಅತಿಥಿಗಳನ್ನು ಆಹ್ವಾನಿಸುತ್ತಿದ್ದರು. ಪ್ರಥಮ ಬಿಎ ವಿದ್ಯಾರ್ಥಿನಿಯರು ಇಂದಿನ ಅಧುನಿಕ ಶಿಕ್ಷಣ ಸರಿಯಿಲ್ಲ, ಹಿಂದಿನ ಗುರುಕುಲ ಶಿಕ್ಷಣವೇ ಶ್ರೇಷ್ಟ ಎಂಬುದನ್ನು ಬಿಂಬಿಸಲು ಗುರುಕುಲ ಸ್ಥಾಪಿಸಿ ಅಲ್ಲಿ ಗುರು-ಶಿಷ್ಯರ ವೇದಾಧ್ಯಯನ ಮುಂದುವರಿದಿತ್ತು. ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯರು ನವದುರ್ಗೆಯರನ್ನು ಪೂಜಿಸಿ ಮಂಗಳೂರು ದಸರಾ ಹಬ್ಬದ ಪರಿಚಯ ಮಾಡಿಸಿದರು. ಅಂತಿಮವಾಗಿ ಕೊನೆ ವರ್ಷದ ಪದವಿ ವಿದ್ಯಾರ್ಥಿನಿಯರು ಕಾಲೇಜ್‌ ಅಂಗಳದಲ್ಲಿ ಕಾಮನ ಪ್ರತಿಕೃತಿ ನಿಲ್ಲಿಸಿ ಸಂಜೆ ಆತನನ್ನು ಸುಡುವ ಮೂಲಕ ಕಾಮನ ಹಬ್ಬವನ್ನು ಆಚರಿಸಿದರು. ಬಂದ ಅತಿಥಿಗಳು, ವಿದ್ಯಾರ್ಥಿನಿಯರು ಹಾಗೂ ಉಪನ್ಯಾಸಕರು,ಸಿಬ್ಬಂದಿ ಮಧ್ಯಾಹ್ನ ಹಬ್ಬದ ಊಟ ಸವಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ