ಆ್ಯಪ್ನಗರ

ಎಸ್‌ಟಿಜೆ ಕಾಲೇಜಿನಲ್ಲಿ ಹಬ್ಬದ ರಂಗು

ದೇಶದ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಗರದ ಎಸ್ಟಿಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಗುರುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ನಾಡಿನ ಐತಿಹಾಸಿಕ ಹಬ್ಬಗಳ ಚಿತ್ರಣ ಅನಾವರಣಗೊಂಡಿತ್ತು.

Vijaya Karnataka Web 23 Mar 2018, 5:00 am
ಚಿಕ್ಕಮಗಳೂರು : ದೇಶದ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಗರದ ಎಸ್ಟಿಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಗುರುವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಉತ್ಸವದಲ್ಲಿ ನಾಡಿನ ಐತಿಹಾಸಿಕ ಹಬ್ಬಗಳ ಚಿತ್ರಣ ಅನಾವರಣಗೊಂಡಿತ್ತು.
Vijaya Karnataka Web festive dye at stg college
ಎಸ್‌ಟಿಜೆ ಕಾಲೇಜಿನಲ್ಲಿ ಹಬ್ಬದ ರಂಗು


ಹಬ್ಬ ಎಂದೊಡನೆ ತಳಿರು ತೋರಣ, ದೇವರಿಗೆ ಸಿಹಿ ತಿಂಡಿಗಳ ನೈವೇದ್ಯ, ದೇವರ ಅಲಂಕಾರ, ವಿವಿಧ ಸಾಂಸ್ಕೃತಿಕ ನೃತ್ಯಗಳು, ವಾದ್ಯಗಳ ನಿನಾದ ಇದನ್ನೆಲ್ಲಾ ನೋಡಿ ಹಳ್ಳಿಗಳಲ್ಲಿ ಖುಷಿಪಟ್ಟಿರುತ್ತೇವೆ. ಆದರೆ, ಕಾಲೇಜ್‌ ಆವರಣವನ್ನು ತಳಿರು ತೋರಣದಿಂದ ಶೃಂಗರಿಸಿ, ವಿದ್ಯಾರ್ಥಿನಿಯರು ಹೊಸ ಉಡುಗೆ ಧರಿಸಿ ಕಾಲೇಜ್‌ ಕ್ಯಾಂಪ್‌ಸ್‌ನಲ್ಲಿ ಹಬ್ಬ ಆಚರಿಸಿ ಸಂಭ್ರಮಿಸಿದ್ದು ಮಾತ್ರ ಯಾವ ನೈಜ ಹಬ್ಬಕ್ಕೂ ಕಡಿಮೆ ಇರಲಿಲ್ಲ.

ಪ್ರಥಮ ಬಿಕಾಂ ವಿದ್ಯಾರ್ಥಿನಿಯರು ಓಣಂ ಮತ್ತು ವಿಷು ಆಚರಣೆ ಹಿನ್ನೆಲೆಯಲ್ಲಿ ಕೃಷ್ಣ ಮತ್ತು ರಾಧೆಯ ವಿಗ್ರಹ ಪೂಜಿಸಿದರೆ, ದ್ವಿತೀಯ ಬಿಕಾಂ ಯುವತಿಯರು ಪಂಜಾಬಿನಲ್ಲಿ ಆಚರಿಸುವ ಬೈಸಾಕಿ ಸುಗ್ಗಿಹಬ್ಬದ ಪ್ರಯುಕ್ತ ಕೃತಕ ಗದ್ದೆಯನ್ನು ನಿರ್ಮಿಸಿ ಭೂಮಿ ಪೂಜೆ ನೆರವೇರಿಸಿದರು. ಹಬ್ಬದಲ್ಲಿ ಪಂಜಾಬಿ ರೈತರ ಕುಣಿತವನ್ನು ವಿದ್ಯಾರ್ಥಿಗಳು ನೃತ್ಯದಲ್ಲಿ ತೋರಿಸಿದರು. ತೃತೀಯ ಬಿಕಾಂ ವಿದ್ಯಾರ್ಥಿನಿಯರದು ನವದುರ್ಗಿಯರ ಅವತಾರ. ಅವರು ದುರ್ಗಾಷ್ಟಮಿ ಹಬ್ಬದ ಸಡಗರದಲ್ಲಿದ್ದರು. ಹಬ್ಬಕ್ಕೆ ಬಂದ ಮುತ್ತೈದೆಯರಿಗೆ ಮೊರದಲ್ಲಿ ಬಾಗಿಣ, ರವಿಕೆ ಕಣ, ಮಡಿಲಕ್ಕಿ ನೀಡಿ ಅತಿಥಿ ಸತ್ಕಾರ ಮಾಡುತ್ತಿದ್ದ ದೃಶ್ಯ ವಿಶೇಷವಾಗಿತ್ತು. ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿಯರು ಪುಣ್ಯಕೋಟಿ ಕಥೆ ಆಧರಿಸಿದ ಪ್ರಹಸನ ಪ್ರದರ್ಶಿಸಿದರೆ. ತೃತೀಯ ಬಿಎ ವಿದ್ಯಾರ್ಥಿನಿಯರು ಕಾರ್ತಿಕ ದೀಪೋತ್ಸವ ಮಾಡಿ ಬಾಳೆ ದಿಂಡಿನಿಂದ ನಿರ್ಮಿಸಿದ್ದ ಕಾರ್ತಿಗೆ 301 ಹಣತೆ ಹಚ್ಚುವ ಮೂಲಕ ನೈಜ ಕಾರ್ತಿಕೋತ್ಸವ ಆಚರಿಸಿ ತಿನ್ನಲು ಚರ್ಪು ನೀಡಿದರು. ದ್ವಿತೀಯ ಬಿಎ ವಿದ್ಯಾರ್ಥಿನಿಯರು ನಾಗರ ಪಂಚಮಿ ಆಚರಿಸಿ ಹುತ್ತಕ್ಕೆ ಹಾಲೆರೆದರು.ಬಂದ ಅತಿಥಿಗಳಿಗೆ ಪಾಯಿಸ ಣಬಡಿಸಿದರು. ಒಟ್ಟಾರೆ ಆಧುನಿಕ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ದೇಶಿಯ ಪರಂಪರೆ ಉಳಿಸುವ ಪ್ರಯತ್ನವಾಗಿ ಆಚರಿಸಿದ ಸಾಂಸ್ಕೃತಿಕ ಉತ್ಸವ ಜನಮನ ಸೋರೆಗೊಂಡಿತು. ಸಾಹಿತಿ ಮಂಜುಳಾ ಹುಲ್ಲಹಳ್ಳಿ ಹಬ್ಬಕ್ಕೆ ಆಗಮಿಸಿದ್ದರು. ಪ್ರಾಂಶುಪಾಲೆ ಜೆ.ಕೆ.ಭಾರತಿ, ಬಸವರಾಜ್‌,ಮಜೀಬ್‌, ಲಾವಣ್ಯ, ನಾಗೇಶ್ವರ್‌, ಯಶೋಧ, ಪ್ರಕಾಶ್‌, ವಿನೀತ ಮತ್ತಿತರರು ಹಾಜರಿದ್ದರು.

------------

ನಮ್ಮ ದೇಶಿಯ ಪರಂಪರೆಯನ್ನು ನಮ್ಮ ಮುಂದಿನ ಪೀಳೆಗೆಗೆ ಕೊಂಡೊಯ್ಯುವ ವಿದ್ಯಾರ್ಥಿನಿಯರ ಆಶಯ ಉತ್ತಮವಾಗಿದೆ. ದೇಶದಲ್ಲಿ ನಾನಾ ಹಬ್ಬದ ಆಚರಣೆಗಳಿವೆ. ಕೆಲವು ದೇಶದ ಭಾವೈಕ್ಯತೆಗೆ ಪೂರಕವಾಗಿರುವ ವಿಶೇಷ ಹಬ್ಬಗಳಿವೆ. ಅಂತಹ ಹಬ್ಬಗಳನ್ನು ಇಲ್ಲಿ ಆಚರಿಸಿರುವುದು ವಿಶೇಷ. ದೇಶದ ಪರಂಪರೆ ಉಳಿಸಲು ಇದೊಂದು ವಿಶೇಷ ಪರಿಕಲ್ಪನೆ.

- ಮಂಜುಳಾ ಹುಲ್ಲಹಳ್ಳಿ, ಸಾಹಿತಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ