ಆ್ಯಪ್ನಗರ

ಸಂತ್ರಸ್ತರಿಗೆ ಕೊಟ್ಟ ಆಹಾರ ಬೀದಿಪಾಲು!

ಅತಿವೃಷ್ಟಿ, ಗುಡ್ಡ ಕುಸಿತದಿಂದ ಸಂತ್ರಸ್ತರಾದವರ ನೋವಿಗೆ ಮಿಡಿದ ಹೃದಯಗಳಿಗೆ ಲೆಕ್ಕವೇ ಇಲ್ಲ. ಆದರೆ, ಸಂತ್ರಸ್ತರ ಹಸಿವು ತಣಿಸಲು ರಾಜ್ಯದ ವಿವಿಧ ಕಡೆಗಳಿಂದ ಕಳಿಸಿದ್ದ ಆಹಾರ ಪದಾರ್ಥಗಳು ಬೀದಿಪಾಲಾಗುತ್ತಿವೆ!

Vijaya Karnataka 22 Aug 2019, 5:00 am
ಆರಗ ರವಿ
Vijaya Karnataka Web CKM-21ARAGAP1

ಚಿಕ್ಕಮಗಳೂರು :
ಅತಿವೃಷ್ಟಿ, ಗುಡ್ಡ ಕುಸಿತದಿಂದ ಸಂತ್ರಸ್ತರಾದವರ ನೋವಿಗೆ ಮಿಡಿದ ಹೃದಯಗಳಿಗೆ ಲೆಕ್ಕವೇ ಇಲ್ಲ. ಆದರೆ, ಸಂತ್ರಸ್ತರ ಹಸಿವು ತಣಿಸಲು ರಾಜ್ಯದ ವಿವಿಧ ಕಡೆಗಳಿಂದ ಕಳಿಸಿದ್ದ ಆಹಾರ ಪದಾರ್ಥಗಳು ಬೀದಿಪಾಲಾಗುತ್ತಿವೆ!

ಭಾರಿ ಮಳೆ, ಗುಡ್ಡಕುಸಿತದಿಂದ ಅತಿಹೆಚ್ಚು ಹಾನಿ ಅನುಭವಿಸಿದ ಮೂಡಿಗೆರೆ ತಾಲೂಕಿಗೆ ಅಪಾರ ಪ್ರಮಾಣದಲ್ಲಿ ಚಪಾತಿ, ಜೋಳದರೊಟ್ಟಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ರಾಜ್ಯದ ನಾನಾಕಡೆಗಳಿಂದ ಜನ ಕಳಿಸಿಕೊಟ್ಟಿದ್ದರು. ಒಂದಷ್ಟು ಆಹಾರ ಪದಾರ್ಥಗಳನ್ನು ಜಿಲ್ಲಾಡಳಿತಕ್ಕೆ ತಲುಪಿಸಿದರೆ, ಮತ್ತೊಂದಷ್ಟನ್ನು ನೇರವಾಗಿ ಕಾಳಜಿ ಕೇಂದ್ರಗಳಿಗೇ ತಂದುಕೊಟ್ಟಿದ್ದರು.

ಮಲೆನಾಡಿನ ಸಂತ್ರಸ್ತರಿಗೆ ಆಹಾರದ ಕೊರತೆ ಇಲ್ಲ ಎಂದರೂ ರಾಶಿಗಟ್ಟಲೆ ಆಹಾರ ಪದಾರ್ಥ ಬಂದಿದ್ದರಿಂದ ಅದನ್ನು ತಿನ್ನುವವರೇ ಇಲ್ಲದೆ ಎಲ್ಲೆಂದರಲ್ಲಿ ಎಸೆದಿರುವ ದೃಶ್ಯ ಕಂಡುಬರುತ್ತಿದೆ. ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಊಟ ನೀಡಲಾಗಿದೆ. ಅಲ್ಲದೆ, ಹಲವು ಜನರು ತಮ್ಮ ಮನೆಗಳಲ್ಲೇ ಆಶ್ರಯ ಕೊಟ್ಟು ಊಟವನ್ನೂ ಹಾಕಿದ್ದರಿಂದ ಹೊರಗಿನಿಂದ ಬಂದ ಆಹಾರ ಪದಾರ್ಥ ಬೀದಿ ಪಾಲಾಗಿದೆ.

ಬಿಸ್ಕೇಟ್‌, ಪ್ಯಾಕ್‌ ಮಾಡಿರುವ ಕೇಕ್‌ಗಳು, ಚಿಫ್ಸ್‌, ಖಾರತಿಂಡಿಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಳಿಸಿದ್ದು ಜಿಲ್ಲಾಡಳಿತ ಹರಸಾಹಸ ಮಾಡಿ ಅವುಗಳನ್ನು ಸಂತ್ರಸ್ತರಿಗೆ ತಲುಪಿಸಿದೆ. ಭಾರಿ ಪ್ರಮಾಣದಲ್ಲಿ ಬಂದಿದ್ದ ಅಕ್ಕಿಯನ್ನು ಈಗಾಗಲೇ ಒಂದಷ್ಟು ಸಂತ್ರಸ್ತ ಕುಟುಂಬಗಳಿಗೆ ತಲುಪಿಸಲಾಗಿದೆ. ಇನ್ನೂ ಅಕ್ಕಿ ದಾಸ್ತಾನಿದೆ. ಅದನ್ನು ಎಲ್ಲಿಗೆ ತಲುಪಿಸಬೇಕು ಎಂಬ ಬಗ್ಗೆ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಬೇಕಿದೆ.

ರಾಜ್ಯದ ವಿವಿಧ ಕಡೆಯಿಂದ ಸಂಘ ಸಂಸ್ಥೆಗಳು, ನೌಕರರು, ಸ್ವಯಂ ಸೇವಾ ಸಂಸ್ಥೆಗಳು, ಟೆಕ್ಕಿಗಳು, ಉದ್ಯಮಿಗಳು, ಶಾಲಾ ಕಾಲೇಜುಗಳು, ದೇವಸ್ಥಾನ, ಮಸೀದಿ, ಚರ್ಚ್‌ಗಳ ಕಡೆಯಿಂದ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಕಳಿಸಲಾಗಿದೆ. ಬಹುತೇಕರು ನೇರವಾಗಿ ಸಂತ್ರಸ್ತರಿಗೆ ವಸ್ತುಗಳನ್ನು ತಲುಪಿಸಿದ್ದಾರೆ. ಆದರೆ, ಮನೆ ಕಳೆದುಕೊಂಡವರಿಗೆ ಈ ವಸ್ತುಗಳನ್ನು ಎಲ್ಲಿ ಇಟ್ಟುಕೊಳ್ಳಬೇಕು ಎಂಬುದೇ ಪ್ರಶ್ನೆಯಾಗಿದೆ. ಗ್ಯಾಸ್‌, ಸ್ಟೌ, ಪಾತ್ರೆಗಳೂ ಇಲ್ಲದೆ ಈ ಕುಟುಂಬಗಳು ಹೊಸ ಬದುಕು ಕಟ್ಟಿಕೊಳ್ಳುವುದು ಸವಾಲಾಗಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಪರಾರ‍ಯಯ ವ್ಯವಸ್ಥೆ ಮಾಡಿದ ನಂತರ ದಾನಿಗಳು ನೀಡಿದ ಅಕ್ಕಿ ಮತ್ತಿತರ ವಸ್ತುಗಳನ್ನು ಆ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ