ಆ್ಯಪ್ನಗರ

ಮರ ತೆರವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ: ಕೃಷಿಕರ ಆರೋಪ

ಸಮೀಪದ ಸೊಲ್ಲಾಪುರದಲ್ಲಿ ಜಮೀನಿನ ಮೇಲೆ ಬಿದ್ದ ಆಲದ ಮರ ತೆರವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕೃಷಿಕ ಸಿದ್ರಾಮಪ್ಪ ಎಚ್ಚರಿಸಿದ್ದಾರೆ.

Vijaya Karnataka 28 May 2019, 5:00 am
ಅಜ್ಜಂಪುರ: ಸಮೀಪದ ಸೊಲ್ಲಾಪುರದಲ್ಲಿ ಜಮೀನಿನ ಮೇಲೆ ಬಿದ್ದ ಆಲದ ಮರ ತೆರವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕೃಷಿಕ ಸಿದ್ರಾಮಪ್ಪ ಎಚ್ಚರಿಸಿದ್ದಾರೆ.
Vijaya Karnataka Web CKM-27AJP01


ಸೊಲ್ಲಾಪುರ ಸಮೀಪದ ಗಂಗಮ್ಮನ ಕೆರೆ ಹತ್ತಿರ 2 ತಿಂಗಳ ಹಿಂದೆ ಅಕಾಲಿಕ ಗಾಳಿ-ಮಳೆ ಸಂದರ್ಭ ಭಾರಿ ಗಾತ್ರದ ಆಲದ ಮರವೊಂದು ಬುಡ ಸಮೇತ ಬಿದ್ದಿತ್ತು. ಬಿದ್ದ ಮರ ಸಿದ್ರಾಮಪ್ಪ ಅವರಿಗೆ ಸೇರಿದ ಸುಮಾರು ಅರ್ಧ ಎಕರೆಯಷ್ಟು ಜಾಗವನ್ನು ಆಕ್ರಮಿಸಿಕೊಂಡಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಮರ ತೆರವುಗೊಳಿಸಲು ಒಂದೂವರೆ ತಿಂಗಳ ಹಿಂದೆ ಅರ್ಜಿ ಕೊಟ್ಟರೂ ಏನೊಂದು ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಶೇಂಗಾ ಬೆಳೆಯಲು ಜಮೀನನ್ನು ಹಸನು ಮಾಡಿಕೊಳ್ಳಬೇಕು. ದಯವಿಟ್ಟು ತೆರವುಗೊಳಿಸಿ ಎಂದು ಗೋಗರೆದರೂ ಇಲಾಖೆಯವರು ಕ್ರಮ ಕೈಗೊಂಡಿಲ್ಲ. ಪ್ರತಿದಿನ ನಾವು ಕಚೇರಿಗೆ ಅಲೆದೂ ಅಲೆದೂ ಸಾಕಾಗಿದೆ. ರೈತರ ಬಗ್ಗೆ ತಾತ್ಸಾರ ತೋರುತ್ತಿರುವ ಅಧಿಕಾರಿಗಳು ಏನೇನೋ ಕಾರಣ ಹೇಳಿ ನಮ್ಮನ್ನು ಸಾಗು ಹಾಕುತ್ತಿದ್ದಾರೆ. ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳಿಂದ ನಮಗೆ ನಷ್ಟ ಸಂಭವಿಸಲಿದೆ. ಮರ ತೆರವುಗೊಳಿಸದೆ ಇದ್ದಲ್ಲಿ ಆ ಜಾಗದ ನಷ್ಟವನ್ನು ಇಲಾಖೆ ಭರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮಳೆ ಯಾವಾಗ ಬೇಕಾದರೂ ಬರಬಹುದು. ಬಂದರೆ ಎರೆ ಮಣ್ಣಿನಲ್ಲಿರುವ ಬೃಹತ್‌ ಆಲದ ಮರ ತೆರವುಗೊಳಿಸಲು ಕಷ್ಟವಾಗುತ್ತದೆ. ಮಳೆ ಬರುವುದರ ಒಳಗೆ ಮರ ತೆರವುಗೊಳಿಸಬೇಕು. ಇಲ್ಲದಿದ್ದರೆ ಕುಟುಂಬ ಸಮೇತ ಅರಣ್ಯ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಮರಬಿದ್ದ ತಕ್ಷ ಣ ಮಹಜರ್‌ ಮಾಡಿ ಅಳತೆ ಪಟ್ಟಿಯನ್ನು ಆರ್‌ಎಫ್‌ಒಗೆ ಕಳಿಸಿದೆ. ಅದು ಎಸಿಎಫ್‌ ಮತ್ತು ಡಿಸಿಎಫ್‌ ಮೂಲಕ ಆದೇಶ ಆಗಿ ಬರಬೇಕು. ನಮ್ಮ ಹಂತದಲ್ಲಿ ಆಗಿರುವುದನ್ನು ಕ್ರಮ ತೆಗೆದುಕೊಳ್ಳಲಾಗಿದೆ. ಡಿಸಿಎಫ್‌ ಕಡೆಯಿಂದ ಕಡಿತಲೆಗೆ ಆದೇಶ ಬರಬೇಕು. ಮರ ಬೃಹತ್ತಾಗಿರುವುದರಿಂದ, ಅದು ಅರಣ್ಯ ಇಲಾಖೆಗೆ ಸಂಬಂಧಿಸಿರುವುದರಿಂದ ಅದು ಇಲಾಖೆ ಆಸ್ತಿ. ಮರ ರಸ್ತೆ ಪಕ್ಕದಲ್ಲಿ ಸರಕಾರಿ ಜಾಗದಲ್ಲಿರುವುದರಿಂದ ಇಲಾಖೆಯವರೇ ಹರಾಜು ಹಾಕಬೇಕು. ರೈತರ ಕಷ್ಟ ನಮಗೂ ಗೊತ್ತಿದೆ. ಇವೆಲ್ಲಾ ನಿಯಮ ಪ್ರಕಾರ ನಡೆಯಬೇಕು. ಉನ್ನತ ಅಧಿಕಾರಿಗಳ ಆದೇಶದಂತೆ ನಾವು ನಡೆಯಬೇಕು. ಕಚೇರಿಗೆ ಬಂದ ರೈತರಿಗೆ ಸೂಕ್ತ ತಿಳಿವಳಿಕೆ ನೀಡಿ, ಕ್ರಮ ತೆಗೆದುಕೊಂಡಿದ್ದೇವೆ. -ವಲಯ ಅರಣ್ಯ ಅಧಿಕಾರಿ, ಅಜ್ಜಂಪುರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ