ಎಸ್.ಜಲಂಧರ್ ಕೊಪ್ಪ
ಪೋಷಕರು, ಸಾರ್ವಜನಿಕರು, ಸಂಘ ಸಂಸ್ಥೆ, ಇಲಾಖೆ, ಶಿಕ್ಷ ಕ ವೃಂದ ಒಂದಾಗಿ ಶ್ರಮಿಸಿದರೆ ಸರಕಾರಿ ಶಾಲೆ ಎಂದಿಗೂ ಮುಚ್ಚುವುದಿಲ್ಲ್ಲ ಎಂಬುದಕ್ಕೆ ತಾಲೂಕಿನ ನಿಲುವಾಗಿಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನವಾಗಿದೆ.
ಈಗಾಗಲೆ ನಗರ ಪ್ರದೇಶದಲ್ಲಿ ಸರಕಾರಿ ಶಾಲೆಗಳು ಬಾಗಿಲು ಹಾಕುತ್ತಿದ್ದು, ಗ್ರಾಮೀಣ ಪ್ರದೇಶದ ಪೋಷಕರಲ್ಲಿ ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಿದ್ದರಿಂದ ಸರಕಾರಿ ಶಾಲೆ ಮುಚ್ಚುತ್ತಿವೆ.
ಕೆಲವು ವರ್ಷ ಮೊದಲು ಮುಚ್ಚುವ ಭಯದಲ್ಲಿದ್ದ ನಿಲುವಾಗಿಲು ಶಾಲೆ ಇಂದು ತಾಲೂಕಿನ ಅತ್ಯಂತ ಜನಪ್ರಿಯ ಶಾಲೆಯಾಗಿ ರೂಪುಗೊಂಡಿದೆ.
ಇಲ್ಲಿ ಒಂದರಿಂದ ಏಳನೆ ತರಗತಿಯಲ್ಲದೆ ನೂತನವಾಗಿ ಎಲ್ಕೆಜಿ ಮತ್ತು ಯುಕೆಜಿ ತರಗತಿ ತೆರೆಯಲಾಗಿದೆ. ಎರಡು ವರ್ಷ ಹಿಂದೆ 58 ವಿದ್ಯಾರ್ಥಿಗಳಿದ್ದು, ಪ್ರಸ್ತುತ ಒಟ್ಟು 115 ವಿದ್ಯಾರ್ಥಿಗಳಿದ್ದಾರೆ. 5 ಮಂದಿ ಸರಕಾರ ನೇಮಿಸಿದ ಮತ್ತು 3 ಗೌರವ ಶಿಕ್ಷ ಕರು ಕೆಲಸ ಮಾಡುತ್ತಿದ್ದಾರೆ. ಗೌರವ ಶಿಕ್ಷ ಕರಿಗೆ ದಾನಿ ಮತ್ತು ಪೋಷಕರು ವೇತನ ನೀಡುತ್ತಿದ್ದಾರೆ. ಶಾಲೆಯಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಬೋಧನೆ ನಡೆಯುತ್ತಿದೆ. ಸುತ್ತಲಿನ ಗ್ರಾಮದ ಪೋಷಕರು ಮಕ್ಕಳನ್ನು ಖಾಸಗಿ ವಾಹನದಲ್ಲಿ ಕಳುಹಿಸುತ್ತಿದ್ದಾರೆ.
ಶಾಲೆ ಅಭಿವೃದ್ಧಿಗೆ ಬೆಂಗಳೂರಿನ ಶಿಕ್ಷ ಣ ಸ್ನೇಹಿ ಟ್ರಸ್ಟ್, ಹರಿಹರಪುರದ ಪ್ರಬೋಧಿನಿ ಗುರುಕುಲ, ರೋಟರಿ ಸಮುದಾಯ ದಳ, ನಿಲುವಾಗಿಲು ಗ್ರಾ.ಪಂ., ಹೊಳೆಕೊಪ್ಪದ ಬೃಂದಾವನ ಟ್ರಸ್ಟ್ ಕೈಜೋಡಿಸಿದ್ದು, ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ಉಚಿತ ಸಮವಸ್ತ್ರ, ಟೈ, ಶೂ, ಬೆಲ್ಟ್ ಒದಗಿಸಲಾಗಿದೆ. ಥೈಲಾಂಡ್ನಲ್ಲಿರುವ ದಾನಿ ಸತೀಶ್ ಶೆಟ್ಟಿ, ಸೆಲ್ಕೊ ಸೋಲಾರ್ ಸಂಸ್ಥೆ ಸಹಯೋಗದಲ್ಲಿ ಸ್ಮಾರ್ಟ್ ಕ್ಲಾಸ್ ಮತ್ತು ಕಂಪ್ಯೂಟರ್ ತರಗತಿ ಆರಂಭಿಸಲಾಗಿದ್ದು, ನಿರಂತರ ವಿದ್ಯುತ್ಗೆ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ಪ್ಲೇಟ್, ಬ್ಯಾಟರಿ ಅಳವಡಿಸಲಾಗಿದೆ. ಪಟ್ಟಣದ ಅನ್ನಪೂರ್ಣ ಸಂಸ್ಥೆಯ ನವೀನ್, ಕಂಪ್ಯೂಟರ್ ಮತ್ತು ಪ್ರಿಂಟರ್ ನೀಡಿದ್ದು, ದಾನಿ ಹೆಗ್ಗಾರು ತಾರಾನಾಥ್, ಯುಪಿಎಸ್ ನೀಡಿದ್ದಾರೆ.
ಕಸ್ತೂರ್ಬಾ ಹೂದೋಟ:ಶಾಲೆಯ ಸುತ್ತ ಸಾರ್ವಜನಿಕರಿಂದ ಸಂಗ್ರಹಿಸಿದ ತೆಂಗು, ಚಿಕ್ಕು ಸೇರಿದಂತೆ ಹತ್ತಾರು ಬಗೆಯ ಹಣ್ಣು, ಸಾಗುವಾನಿ ಮತ್ತಿತರ ಸಸಿಯನ್ನು ಬೆಳೆಸಲಾಗಿದೆ. ಸಮೀಪದಲ್ಲಿ ಆಟದ ಮೈದಾನವಿದೆ. ಶಾಲೆ ಸುತ್ತಲು ಹಸಿರು ವಾತಾವರಣವಿದ್ದು, ಶಾಲೆಗೆ ಸೇರಿದ್ದ ಭೂದಾನದ ಜಮೀನಿನ ಉತ್ಪತ್ತಿಯನ್ನು 3 ವರ್ಷದಿಂದ ವಸೂಲು ಮಾಡಲಾಗುತ್ತಿದೆ.
ಗೌರಿಗದ್ದೆಯ ವಿನಯ್ ಗುರೂಜಿ, ಶಾಲೆ ಆವರಣದಲ್ಲಿ ಸುಮಾರು ಒಂದೂವರೆ ಲಕ್ಷ ರೂ.ಗಿಂತ ಅಧಿಕ ವೆಚ್ಚದಲ್ಲಿ ಹೂದೋಟ ನಿರ್ಮಿಸಿ, ಮಧ್ಯದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ನಿರ್ಮಿಸಿಕೊಟ್ಟಿದ್ದಾರೆ. ಕಲ್ಲು ಬೆಂಚು ಹಾಕಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ರಂಗಮಂದಿರ:ಶಾಲೆ ಆವರಣದಲ್ಲಿ ಸುಂದರ ಮತ್ತು ಸುಸಜ್ಜಿತ ರಂಗ ಮಂದಿರವಿದೆ. ಶಾಲೆ ವಾರ್ಷಿಕೋತ್ಸವ, ಕ್ರೀಡಾಕೂಟ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿದ್ಯಾರ್ಥಿ ಸುಬ್ರಹ್ಮಣ್ಯ, ಈ ಸಾಲಿನÜ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಮಣ್ಣಿನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾನೆ.
-------
ಮುಖ್ಯ ಶಿಕ್ಷ ಕ ಅಶೋಕ್ ಮತ್ತು ಶಿಕ್ಷ ಕ ವೃಂದದ ಶ್ರಮದಿಂದ ಶಾಲೆ ಉನ್ನತ ಮಟ್ಟ ತಲುಪಿದೆ. ಜತೆಗೆ ಗ್ರಾ.ಪಂ. ಮತ್ತಿತರ ಸಂಘ ಸಂಸ್ಥೆ, ದಾನಿ, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ. ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷ ಣ ಸಿಗುತ್ತಿದೆ. ಸಾಂಸ್ಕೃತಿಕ, ಕ್ರೀಡೆ ಮತ್ತಿತರ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿದೆ.
- ಧರ್ಮಯ್ಯ, ಎಸ್ಡಿಎಂಸಿ ಅಧ್ಯಕ್ಷ, ರಾಜೇಶ್, ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕ, ನಿಲುವಾಗಿಲು.
--------
ಶಾಲೆಯಲ್ಲಿ ಸರಕಾರದಿಂದ ನೀಡಿರುವ ಶೌಚಾಲಯವಿದೆ. ಆದರೆ, ಮಕ್ಕಳು ಹೆಚ್ಚಿದ್ದರಿಂದ ಹೆಣ್ಣುಮಕ್ಕಳ ಶೌಚಾಲಯದ ಅಗತ್ಯವಿದೆ. ಆಟದ ಮೈದಾನವನ್ನು ವಿಸ್ತರಿಸಬೇಕಿದೆ. ಒಬ್ಬಿಬ್ಬರು ಶಿಕ್ಷ ಕರ ಕೊರತೆಯಿದೆ. ಪೀಠೋಪಕರಣ, ಪಾಠೋಪಕರಣಗಳು ಬೇಕು. ಸ್ಮಾರ್ಟ್ ಕ್ಲಾಸ್ ನಡೆಸಲು ಪ್ರತ್ಯೇಕ ಕೊಠಡಿ ಅವಶ್ಯಕತೆಯಿದೆ.
-ಪೋಷಕರು, ನಿಲುವಾಗಿಲು ಶಾಲೆ.
---------
ಶಾಲೆ ಅಭಿವೃದ್ಧಿಗೆ ಪೋಷಕರು, ಎಸ್ಡಿಎಂಸಿ, ಗ್ರಾ.ಪಂ, ಶಿಕ್ಷ ಣ ಇಲಾಖೆ ಮತ್ತಿತರ ಸಂಘ ಸಂಸ್ಥೆಗಳ ಸಹಕಾರವೆ ಕಾರಣ. ಕೆಲವು ಚಿಕ್ಕ ಸವಲತ್ತುಗಳು ಸಿಕ್ಕಿದಲ್ಲಿ ಭವಿಷ್ಯದಲ್ಲಿ ರಾಜ್ಯಕ್ಕೆ ಮಾದರಿ ಶಾಲೆಯಾಗಿ ಮಾರ್ಪಡಿಸಲು ಶಿಕ್ಷ ಕ ವೃಂದ ಬದ್ಧವಾಗಿದೆ.
-ಎ.ಈ.ಅಶೋಕ್, ಮುಖ್ಯ ಶಿಕ್ಷ ಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ನಿಲುವಾಗಿಲು.