ಆ್ಯಪ್ನಗರ

ಮನೆ ನಿರ್ಮಾಣ ತೆರವು: ಆತ್ಮಹತ್ಯೆಗೆ ಯತ್ನ

ಹೋಬಳಿ ವ್ಯಾಪ್ತಿಯ ಬಳ್ಳಾವರ ಗ್ರಾಮದ ಅರಣ್ಯ ಜಾಗದಲ್ಲಿ ಸ್ಥಳೀಯ ಕೆಲವರು ಮನೆ ನಿರ್ಮಿಸಿದ್ದು, ಅರಣ್ಯ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ತೆರಳಿ ತೆರವುಗೊಳಿಸಿದರು. ಈ ಸಂದರ್ಭ ನಿರಾಶ್ರಿತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

Vijaya Karnataka 24 Oct 2018, 5:00 am
ಲಿಂಗದಹಳ್ಳಿ : ಹೋಬಳಿ ವ್ಯಾಪ್ತಿಯ ಬಳ್ಳಾವರ ಗ್ರಾಮದ ಅರಣ್ಯ ಜಾಗದಲ್ಲಿ ಸ್ಥಳೀಯ ಕೆಲವರು ಮನೆ ನಿರ್ಮಿಸಿದ್ದು, ಅರಣ್ಯ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ತೆರಳಿ ತೆರವುಗೊಳಿಸಿದರು. ಈ ಸಂದರ್ಭ ನಿರಾಶ್ರಿತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.
Vijaya Karnataka Web CKM-23sid1


ಮನೆಗಳನ್ನು ನಿರ್ಮಿಸುತ್ತಿದ್ದ ಸ್ಥಳಕ್ಕೆ ತರೀಕೆರೆ ವಲಯ ಅರಣ್ಯಾಧಿಕಾರಿ ಚರಣ್‌ ಕುಮಾರ್‌ ಅವರು ಸಿಬ್ಬಂದಿ ಸಮೇತ ಸ್ಥಳಕ್ಕೆ ತೆರಳಿ ನಿರ್ಮಿಸಿದ್ದ ಮನೆಗಳು ಮತ್ತು ನಿರ್ಮಾಣ ಪರಿಕರಗಳನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ವಲಯ ಅರಣ್ಯಾಧಿಕಾರಿ ಚರಣ್‌ ಕುಮಾರ್‌, ನಂದಿಬಟ್ಟಲು ಕಿರು ಅರಣ್ಯ ಪ್ರದೇಶದ ಬಳ್ಳಾವರ ಸರ್ವೆ ನಂಬರ್‌ 22ರಲ್ಲಿ ಕೆಲವರು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಆದರೂ ಸೋಮವಾರ ರಾತ್ರಿ ಜಾಗದಲ್ಲಿ ಮನೆ ನಿರ್ಮಿಸುತ್ತಿರುವ ಬಗ್ಗೆ ತಿಳಿದು ಬಂದಿರುವುದರಿಂದ ಸ್ಥಳಕ್ಕೆ ತೆರಳಿ ಅವರಿಗೆ ಎಚ್ಚರಿಕೆ ನೀಡಿ ಜಾಗವನ್ನು ತೆರವುಗೊಳಿಸಲಾಯಿತು ಎಂದರು.

ಈ ಕುರಿತು ನಾಗರಾಜಪ್ಪ, ರಮೇಶ್‌, ರವಿ, ಅಬೂಬಕರ್‌, ಮುನ್ನ, ಅಂತೋಣಿ ಲೋಬೊ, ಶ್ರೀನಿವಾಸ್‌ ಇವರುಗಳ ಮೇಲೆ ಕೇಸು ದಾಖಲಿಸಲಾಗಿದೆ. ಆರೋಪಿಗಳಲ್ಲಿ ಒಬ್ಬರಾದ ನಾಗರಾಜಪ್ಪ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಜಾಗ ಯಾರದ್ದು?

ಮನೆ ನಿರ್ಮಾಣಕ್ಕೆ ಬಳಸಿದ್ದ ಜಾಗ ಕಂದಾಯ ಹಾಗೂ ಅರಣ್ಯ ಇಲಾಖೆಗಳಲ್ಲಿ ಯಾರಿಗೆ ಸೇರಿದೆ ಎಂಬುದು ಸ್ಪಷ್ಟವಾಗಿಲ್ಲ. ಎರಡೂ ಇಲಾಖೆಗಳ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಯಾವ ಇಲಾಖೆಯ ವ್ಯಾಪ್ತಿಗೆ ಸೇರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವ ಮೂಲಕ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ