ಆ್ಯಪ್ನಗರ

ಸಂವಿಧಾನ ಬದಲಾವಣೆಗೆ ಪಟ್ಟಭದ್ರರ ಸಂಚು

ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾವಣೆ ಬಗ್ಗೆ ಧ್ವನಿ ಎತ್ತಿರುವ ಕಾರಣಕ್ಕೆ ದೇಶಾದ್ಯಂತ ಅಂಬೇಡ್ಕರ್‌ ಅವರ 128ನೇ ಜನ್ಮ ದಿನಾಚರಣೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎಂದು ಹಿರಿಯ ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಹೇಳಿದರು.

Vijaya Karnataka 1 May 2019, 9:03 pm
ಚಿಕ್ಕಮಗಳೂರು: ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾವಣೆ ಬಗ್ಗೆ ಧ್ವನಿ ಎತ್ತಿರುವ ಕಾರಣಕ್ಕೆ ದೇಶಾದ್ಯಂತ ಅಂಬೇಡ್ಕರ್‌ ಅವರ 128ನೇ ಜನ್ಮ ದಿನಾಚರಣೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎಂದು ಹಿರಿಯ ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಹೇಳಿದರು.
Vijaya Karnataka Web CKM-1rudrap4


ನಗರದ ಶಂಕರಪುರ ಬಡಾವಣೆಯ ಪೌರಸೇವಾ ನೌಕರರ ಕಾಲೊನಿಯ ರಾಮಮಂದಿರ ರಸ್ತೆಯಲ್ಲಿ ಅಂಬೇಡ್ಕರ್‌ ಯುವಕರ ಬಳಗ, ಸ್ಥಳೀಯ ನಿವಾಸಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಂಬೇಡ್ಕರ್‌ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಆಗಿದ್ದರೂ ಸಮಾಜದಲ್ಲಿ ಅಸ್ಪೃಶ್ಯತೆ ಜೀವಂತವಿದೆ. ಜಾತಿಯ ವಿಷಯಬೀಜವನ್ನು ಇನ್ನೂ ವ್ಯಾಪಕವಾಗಿ ಬಿತ್ತುತ್ತಿರುವುದು ವಿಷಾದದ ಸಂಗತಿ. ಪರಿಶಿಷ್ಟರು ಹಿಂದೂಗಳಲ್ಲೇ ಅಲ್ಪಸಂಖ್ಯಾತರಾಗಿ, ಅಸ್ಪೃಶ್ಯರಾಗಿ ಉಳಿದಿದ್ದಾರೆ. ಶೋಷಿತ ಸಮುದಾಯ ತಮ್ಮ ಹಕ್ಕುಗಳಿಗೆ ಹೋರಾಟ ನಡೆಸುವ ಅಗತ್ಯವಿದೆ ಎಂದರು.

ಹಿಂದೂ ಧರ್ಮದ ಅಸಮಾನತೆ, ಅಸ್ಪೃಶ್ಯತೆ, ಅಂಧಾನುಕರಣೆಯಿಂದ ನೊಂದ ಅಂಬೇಡ್ಕರ್‌, ತಾರತಮ್ಯವಿಲ್ಲದ, ಜಾತಿ ಭೇದವಿಲ್ಲದ, ಸಮ ಸಮಾಜದ ಪರಿಕಲ್ಪನೆ ಇರುವ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಸಂವಿಧಾನವು ಸಮಾಜದ ಎಲ್ಲ ವರ್ಗದ ಶೋಷಿತರಿಗೂ ಅವಕಾಶ ಕಲ್ಪಿಸುವ ಆಶಯ ಹೊಂದಿದ್ದರೂ ದಲಿತರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂಬ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಗೃಹ ರಕ್ಷಕ ದಳದ ಸಮಾದೇಷ್ಠ ಅನಿಲ್‌ಕುಮಾರ್‌ ಮಾತನಾಡಿ, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕಿದ್ದ ದಲಿತ ಸಂಘಟನೆಗಳು ಆಂತರಿಕ ಕಲಹದಿಂದ ಶಕ್ತಿ ಕಳೆದುಕೊಳ್ಳುತ್ತಿವೆ. ದಲಿತರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದರು.

ಸ್ಥಳೀಯ ಮುಖಂಡ ಡಿ.ನಾಗರಾಜ್‌ ಮಾತನಾಡಿ, ಯುವ ಪೀಳಿಗೆ ಮೊಬೈಲ್‌ ಗೀಳಿಗೆ ಬಿದ್ದು ಹೆಚ್ಚು ಸಮಯವನ್ನು ಸಾಮಾಜಿಕ ಜಾಲ ತಾಣದಲ್ಲಿ ಕಳೆಯುತ್ತ ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಕೆ.ಕುಮಾರ್‌ ಮಾತನಾಡಿದರು. ಪತ್ರಕರ್ತ ಪಿ.ರಾಜೇಶ್‌, ಸ್ಥಳೀಯರಾದ ಕಿರಣ್‌, ವೆಂಕಟರಾಮ್‌, ದೇವೇಂದ್ರ, ವೆಂಕಟೇಶ್‌, ಪ್ರವೀಣ, ಕೀರ್ತಿಕುಮಾರ್‌, ಪ್ರತಾಪ್‌, ಓಬಳೇಶ್‌, ಶಿವು, ರವಿ ಹಾಜರಿದ್ದರು. ಕೂದುವಳ್ಳಿ ಮಂಜು ಮತ್ತು ಸಂಗಡಿಗರು ಕ್ರಾಂತಿಗೀತೆ ಹಾಡಿದರು. ಇದಕ್ಕೂ ಮುನ್ನ ಜಿ.ಪಂ. ಆವರಣದಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಸಿಇಒ ಎಸ್‌.ಅಶ್ವತಿ ಮಾಲಾರ್ಪಣೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ