ಆ್ಯಪ್ನಗರ

ಹಳ್ಳದ ನೀರಲ್ಲಿ ಮುದುಡುತ್ತಿದೆ ಮುಗ್ಧ ಮಕ್ಕಳ ಭವಿಷ್ಯ!

ಮಲೆನಾಡಿನ ನೂರಾರು ಹಳ್ಳಿಗಳ ಜನರಿಗೆ ಮಳೆಗಾಲವೆಂದರೆ ದಿಗ್ಬಂಧನ. ಸಣ್ಣ ಸಣ್ಣ ಹಳ್ಳಕೊಳ್ಳಗಳೂ ಮೈದುಂಬಿ ಭೋರ್ಗರೆದು ಅನಾಹುತ ಸೃಷ್ಟಿಸುತ್ತವೆ. ಬೇಸಿಗೆಯಲ್ಲಿ ಹನಿ ನೀರಿಲ್ಲದ ಕೊರಕಲುಗಳಲ್ಲೂ ನೀರು ಉಕ್ಕಿ ಹರಿದು ಒಂದಷ್ಟು ಅವಘಡ ಸೃಷ್ಟಿಸುತ್ತವೆ.

Vijaya Karnataka 26 Jul 2018, 5:00 am
ಆರಗ ರವಿ
Vijaya Karnataka Web CKM-25ARAGAP1


ಚಿಕ್ಕಮಗಳೂರು:
ಮಲೆನಾಡಿನ ನೂರಾರು ಹಳ್ಳಿಗಳ ಜನರಿಗೆ ಮಳೆಗಾಲವೆಂದರೆ ದಿಗ್ಬಂಧನ. ಸಣ್ಣ ಸಣ್ಣ ಹಳ್ಳಕೊಳ್ಳಗಳೂ ಮೈದುಂಬಿ ಭೋರ್ಗರೆದು ಅನಾಹುತ ಸೃಷ್ಟಿಸುತ್ತವೆ. ಬೇಸಿಗೆಯಲ್ಲಿ ಹನಿ ನೀರಿಲ್ಲದ ಕೊರಕಲುಗಳಲ್ಲೂ ನೀರು ಉಕ್ಕಿ ಹರಿದು ಒಂದಷ್ಟು ಅವಘಡ ಸೃಷ್ಟಿಸುತ್ತವೆ.

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಇಂತಹ ಸಣ್ಣಪುಟ್ಟ ಹಳ್ಳಕೊಳ್ಳಗಳಿಗೆ ಕಿರುಸೇತುವೆಯನ್ನೋ, ಮೋರಿಗಳನ್ನೋ ನಿರ್ಮಿಸುವ ಕೆಲಸ ಆಗದ ಕಾರಣ ಪ್ರತಿವರ್ಷ ಜೀವಬಲಿ ಆಗುತ್ತಲೇ ಇವೆ. ಊರಿಂದ ಊರಿಗೆ ಓಡಾಟ ಅನಿವಾರ‍್ಯವಾದ ಕಾರಣ ಗ್ರಾಮಸ್ಥರು ಇಂತಹ ಹಳ್ಳಗಳಿಗೆ ಕಾಲುಸಂಕಗಳನ್ನು ಸ್ವತಃ ನಿರ್ಮಿಸಿಕೊಂಡು ಸರ್ಕಸ್‌ ಮಾಡಿಕೊಂಡೇ ಓಡಾಡುತ್ತಿದ್ದಾರೆ.

ಕಾಲು ಸಂಕಗಳಿಂದ ಕಾಲುಜಾರಿ, ಆಯತಪ್ಪಿ ಬಿದ್ದು ಮೃತಪಟ್ಟವರ ಪಟ್ಟಿ ಸಾಕಷ್ಟು ದೊಡ್ಡದಾಗಿಯೇ ಇದೆ. ಕಿರುಸೇತುವೆ, ಮೋರಿ ನಿರ್ಮಾಣಕ್ಕೆ ಎಷ್ಟೇ ಒತ್ತಾಯ ಮಾಡಿದರೂ ಚುನಾವಣೆ ಸಮಯದಲ್ಲಿ ರಾಜಕಾರಣಿಗಳು ಭರವಸೆ ನೀಡುವುದಕ್ಕೆ ಸೀಮಿತವಾಗುತ್ತಿದೆ. ನೀರಿನ ರಭಸಕ್ಕೆ ತೂಗಾಡುವ ಕಾಲುಸಂಕಗಳಲ್ಲಿ ಓಡಾಡುವ ಸಂಕಷ್ಟ ಮಾತ್ರ ಜನರಿಗೆ ಇಂದಿಗೂ ತಪ್ಪಿಲ್ಲ.

ಹಳ್ಳದಲ್ಲಿ ಹರಸಾಹಸ: ಅಪ್ಪಟ ಮಲೆನಾಡು ತಾಲೂಕುಗಳ ಕುಗ್ರಾಮಗಳ ಸ್ಥಿತಿ ಹೀಗಿದ್ದರೆ ಇತ್ತ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು, ಮುತ್ತೋಡಿ, ಆವತಿ, ಆಣೂರು ಸುತ್ತಮುತ್ತಲಿನ ಗ್ರಾಮಗಳ ಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಮುತ್ತೋಡಿ ಭದ್ರಾ ಅಭಯಾರಣ್ಯ ಆಸುಪಾಸಿನ ಗ್ರಾಮಗಳ ಜನ ಹಳ್ಳದ ನೀರಿನಲ್ಲಿ ಹರಸಾಹಸ ಮಾಡಿಕೊಂಡೇ ಓಡಾಡಬೇಕು.

ಮಲ್ಲಂದೂರು ಸಮೀಪದ ಕೆರೆಹಳ್ಳಿ ಬಳಿ ಹರಿಯುವ ಹಳ್ಳಕ್ಕೆ ಕಿರುಸೇತುವೆ ಇಲ್ಲದ ಕಾರಣ ಕೆರೆಹಳ್ಳಿಯ ಜನ ಹಳ್ಳದ ನೀರಿನಲ್ಲಿ ನಡೆದುಕೊಂಡೇ ಓಡಾಡಬೇಕಿದೆ. ಕೆರೆಹಳ್ಳಿಯಲ್ಲಿ 7-8 ಮನೆಗಳಿದ್ದು, ಪ್ರತಿನಿತ್ಯ ನಾಲ್ಕೈದು ಪುಟ್ಟ ಮಕ್ಕಳು ರಭಸವಾಗಿ ಹರಿಯುವ ಹಳ್ಳದ ನೀರಿನಲ್ಲಿ ನಡೆದುಕೊಂಡೇ ಓಡಾಡುತ್ತಿದ್ದಾರೆ. ಗ್ರಾಮಸ್ಥರೇ ನಿರ್ಮಿಸಿಕೊಂಡಿದ್ದ ಕಾಲುಸಂಕವೂ ನೀರಿನ ರಭಸಕ್ಕೆ ಅಲ್ಲಾಡುತ್ತಿದೆ.

ಕೆರೆಹಳ್ಳಿಯಿಂದ ಕೆಳಮಲ್ಲಂದೂರಿನ ಸರಕಾರಿ ಶಾಲೆಗೆ ಹೋಗಬೇಕಾದರೆ ಈ ಮಕ್ಕಳು ಹಳ್ಳ ದಾಟಬೇಕು. ಇಲ್ಲದಿದ್ದರೆ ತಿಂಗಳುಗಟ್ಟಲೆ ಶಾಲೆಗೆ ಹೋಗದೆ ಮನೆಯಲ್ಲೇ ಇರಬೇಕು. ಸುಮಾರು ಒಂದು ಕಿ.ಮೀ. ದೂರ ನಡೆದು ಶಾಲೆಗೆ ಹೋಗುವ ಈ ಮಕ್ಕಳಿಗೆ ಮಧ್ಯದಲ್ಲಿ ಸಿಗುವ ಹಳ್ಳ ದಾಟುವಾಗ ಭೀತಿ ಕಾಡತೊಡಗುತ್ತದೆ. ಕೂಲಿಗೆ ಹೋಗುವ ಪೋಷಕರು ಮಕ್ಕಳು ಬರುವ ಸಮಯ ಕಾಯ್ದು ಹಳ್ಳ ದಾಟಿಸುವುದಕ್ಕೂ ಆಗುತ್ತಿಲ್ಲ.

ಶಾಲಾ ಬ್ಯಾಗ್‌ನ್ನು ತಲೆಯ ಮೇಲೆ ಹೊತ್ತುಕೊಂಡು, ಒಂದು ಕೈಯಲ್ಲಿ ಚಡ್ಡಿ, ಲಂಗವನ್ನು ಗಟ್ಟಿ ಹಿಡಿದುಕೊಂಡು ಹಳ್ಳ ದಾಟುವಾಗ ಈ ಮಕ್ಕಳು ಸ್ವಲ್ಪ ಆಯ ತಪ್ಪಿದರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಅಪಾಯವಿದೆ. ಈ ಬಾರಿ ಬಿದ್ದ ಭಾರಿ ಮಳೆಗೆ ಹಳ್ಳ ತುಂಬಿ ಹರಿಯುತ್ತಿದ್ದು, ಪ್ರತಿನಿತ್ಯ ಮಕ್ಕಳು ಆತಂಕದಿಂದಲೇ ಶಾಲೆಗೆ ಹೋಗಿ ಬರುತ್ತಿದ್ದಾರೆ. ರಸ್ತೆ ಕೂಡ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ.

ಗ್ರಾಮದಲ್ಲಿ ಯಾರಾದರೂ ಅನಾರೋಗ್ಯಕ್ಕೆ ತುತ್ತಾದರೆ ಸುಮಾರು 1ಕಿ.ಮೀ. ದೂರವರೆಗೆ ಅವರನ್ನು ಹೊತ್ತುಕೊಂಡು ಬಂದು ನಂತರ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತಾಗಿದೆ. ರಸ್ತೆ ದುರಸ್ತಿ ಜತೆಗೆ ಹಳ್ಳಕ್ಕೆ ಕಿರುಸೇತುವೆ ನಿರ್ಮಿಸಲು ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ರಸ್ತೆ, ಸೇತುವೆ ಬೇಕು
ಚಿಕ್ಕಮಗಳೂರು ತಾಲೂಕಿನ ಕೆರೆಹಳ್ಳಿ ಹಳ್ಳ ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಕೆಲವೊಮ್ಮೆ ತಿಂಗಳುಗಟ್ಟಲೆ ಕೂಲಿಗೂ ಹೋಗಲಾಗದೆ ಮನೆಯಲ್ಲೇ ಕೂರುವಂತಾಗುತ್ತದೆ. ಕೆರೆಹಳ್ಳಿಯಿಂದ ಕೆಳಮಲ್ಲಂದೂರಿನ ಸರಕಾರಿ ಶಾಲೆಗೆ 5ಕ್ಕೂ ಹೆಚ್ಚು ಮಕ್ಕಳು ಹೋಗುತ್ತಿದ್ದು, ಹಳ್ಳದ ನೀರಿನಲ್ಲಿ ನಡೆದುಕೊಂಡೇ ಹೋಗಬೇಕಿದೆ. ನಾವೇ ನಿರ್ಮಿಸಿಕೊಂಡ ಕಾಲುಸಂಕವೂ ಅಲ್ಲಾಡುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ರಸ್ತೆ ಮತ್ತು ಸೇತುವೆ ನಿರ್ಮಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು.

- ಕಿರಣ್‌ಶೆಟ್ಟಿ, ಗ್ರಾಮಸ್ಥ, ಕೆರೆಹಳ್ಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ