ಆ್ಯಪ್ನಗರ

ಕಡೂರಲ್ಲಿ ಮಳೆ ಸಂಭ್ರಮದ ಜತೆಗೆ ಫಜೀತಿ

ಕಳೆದ ಹಲವು ದಿನದಿಂದ ಸುಡು ಬಿಸಿಲಿಗೆ ತತ್ತರಿಸಿ ಹೋಗಿದ್ದ ಕಡೂರಿನ ಜನರ ಪಾಲಿಗೆ ಸೋಮವಾರ ಮಧ್ಯಾಹ್ನ ಸುರಿದ ರೇವತಿ ಮಳೆ ತಂಪೆರೆಯಿತು. ದಿಢೀರ್‌ ಮಳೆಯ ಕಾರಣದಿಂದ ಪಟ್ಟಣದ ಕೆ.ಎಚ್‌.ಮುದಿಯಪ್ಪ ಬಡಾವಣೆ ದ್ವೀಪದಂತಾಗಿ ಜನರು ತಮ್ಮ ಮನೆಗಳಿಗೆ ತೆರಳಲು ಪರದಾಡಬೇಕಾಯಿತು.

Vijaya Karnataka 2 Apr 2019, 5:00 am
ಕಡೂರು : ಕಳೆದ ಹಲವು ದಿನದಿಂದ ಸುಡು ಬಿಸಿಲಿಗೆ ತತ್ತರಿಸಿ ಹೋಗಿದ್ದ ಕಡೂರಿನ ಜನರ ಪಾಲಿಗೆ ಸೋಮವಾರ ಮಧ್ಯಾಹ್ನ ಸುರಿದ ರೇವತಿ ಮಳೆ ತಂಪೆರೆಯಿತು. ದಿಢೀರ್‌ ಮಳೆಯ ಕಾರಣದಿಂದ ಪಟ್ಟಣದ ಕೆ.ಎಚ್‌.ಮುದಿಯಪ್ಪ ಬಡಾವಣೆ ದ್ವೀಪದಂತಾಗಿ ಜನರು ತಮ್ಮ ಮನೆಗಳಿಗೆ ತೆರಳಲು ಪರದಾಡಬೇಕಾಯಿತು.
Vijaya Karnataka Web kadur rainwater harvesting
ಕಡೂರಲ್ಲಿ ಮಳೆ ಸಂಭ್ರಮದ ಜತೆಗೆ ಫಜೀತಿ


ಮಧ್ಯಾಹ್ನ 3.50ಕ್ಕೆ ಆರಂಭವಾದ ಮಳೆ ಆಲಿಕಲ್ಲಿನಿಂದ ಕೂಡಿ ಬಿರುಸಾಗಿತ್ತು. ಗುಡುಗು ಸಿಡಿಲಿನ ಆರ್ಭಟದೊಂದಿಗೆ 30 ನಿಮಿಷಕ್ಕೂ ಹೆಚ್ಚು ಸಮಯ ಸುರಿಯಿತು. ಬಹಳ ದಿನಗಳ ಬಿಸಿಲಿನ ಬೇಗೆಯಿಂದ ಬೆಂದು ಹೋಗಿದ್ದ ಜನರಿಗೆ ಮಣ್ಣಿನ ವಾಸನೆಯ ಮುದ ಉಣಿಸಿತು. ರಸ್ತೆಗಳಲ್ಲಿ ಚರಂಡಿಯ ನೀರು ಮತ್ತು ಕಸವೆಲ್ಲಾ ಆವರಿಸಿಕೊಂಡು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿಯೂ ನಿರ್ಮಾಣವಾಯಿತು.

ಚಿಕ್ಕಮಗಳೂರು ರಸ್ತೆಯಿಂದ ಪಟ್ಟಣಗೆರೆಗೆ ತೆರಳುವ ರಸ್ತೆಯಲ್ಲಿರುವ ಕೆ.ಎಚ್‌.ಮುದಿಯಪ್ಪ ಬಡಾವಣೆ, ವಿವೇಕಾನಂದ ಬಡಾವಣೆ, ಎಸ್‌.ಎಂ.ಕೃಷ್ಣ ಬಡಾವಣೆ ಹಾಗೂ ಸಾರಿಗೆ ಬಸ್‌ ಡಿಪೊಗೆ ತೆರಳುವ ನೂರಾರು ಜನರು ಮಳೆಯಿಂದಾಗಿ ಸಂಚಾರ ರಸ್ತೆಗಳಿಲ್ಲದೆ ತೊಂದರೆ ಅನುಭವಿಸಿದರು.

ಈ ಮಾರ್ಗದಲ್ಲಿ ರಸ್ತೆ ಕಾಮಗಾರಿಗಾಗಿ ಕಳೆದ 20 ದಿನದಿಂದ ಗುತ್ತಿಗೆದಾರರು 5 ಡಕ್‌ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಆದ್ದರಿಂದ ಈ ಬಡಾವಣೆಗಳಿಗೆ ತೆಳುವ ಜನರು ಹೊಲದಲ್ಲಿ ನಾನಾ ಮಾರ್ಗಗಳ ಮೂಲಕ ಉಬ್ಬು ತಗ್ಗಿನ ಕಾಲುದಾರಿಗಳಲ್ಲಿ ಸಂಚರಿಸುತ್ತಿದ್ದರು. ಏಕಾಏಕಿ ಮಳೆಯಿಂದಾಗಿ ಪರ್ಯಾಯ ಹಾದಿಗಳೆಲ್ಲಾ ಕೆಸರು ಮಯವಾಗಿ ವಾಹನಗಳು ಅಲ್ಲಲ್ಲಿ ಸಿಕ್ಕಿ ಹಾಕಿಕೊಂಡು ಸವಾರರು ಪರದಾಡಿದರು. ಪಾದಚಾರಿಗಳು ತಮ್ಮ ಚಪ್ಪಲಿಗೆ ಮಣ್ಣು ಮೆತ್ತಿಸಿಕೊಂಡು ಎದ್ದು ಬಿದ್ದು ಮನೆ ಸೇರಿದ ಪ್ರಸಂಗ ನಡೆಯಿತು.

ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಡಕ್‌ ನಿರ್ಮಾಣ ಮಾಡುವಾಗ ನಿಯಮದಂತೆ ಅರ್ಧ ಭಾಗ ಡಕ್‌ ನಿರ್ಮಿಸಿಕೊಂಡು ಉಳಿದ ಅರ್ಧ ಭಾಗವನ್ನು ಆ ಕಾಮಗಾರಿ ಮುಗಿದ ಬಳಿಕ ಕೈಗೆತ್ತಿಕೊಳ್ಳಬೇಕಿದೆ. ಆದರೆ ಇಲ್ಲಿ ಪೂರ್ಣ ಎರಡು ಕಿ.ಮೀ. ಉದ್ದದ ರಸ್ತೆಯನ್ನೇ ಕಳೆದ ಒಂದು ತಿಂಗಳಿನಿಂದ ಬಂದ್‌ ಮಾಡಿ ಕಾಮಗಾರಿ ನಡೆಸಲಾಗುತ್ತಿತ್ತು.

ರಸ್ತೆಗೆ ಬಿದ್ದ ಕಸದ ರಾಶಿ

ಪಟ್ಟಣದ ಹೊಸ ಬಸ್‌ ನಿಲ್ದಾಣದ ಎದುರು, ಸಂಗೊಳ್ಳಿ ರಾಯಣ್ಣ ವೃತ್ತದ ಸುತ್ತಮುತ್ತ ಮಳೆಯಿಂದಾಗಿ ಭಾರಿ ಕಸದ ರಾಶಿಯೇ ರಸ್ತೆಗೆ ಅಲ್ಲಲ್ಲಿ ಬಂದು ಬಿದ್ದು ಜನು ಮಳೆ ನಿಂತ ಮೇಲೆ ಸಂಚರಿಸಲು ಪರದಾಡಿದರು. ಬಸ್‌ ನಿಲ್ದಾಣಕ್ಕೆ ಅಲ್ಪ ದೂರದಲ್ಲಿಯೇ ಇರುವ ರೈಲ್ವೆ ಅಂಡರ್‌ಪಾಸ್‌ ರಸ್ತೆಯು ಸಂಪೂರ್ಣವಾಗಿ ಜಲಾವೃತವಾಗಿ ಕಸ ಕಡ್ಡಿಗಳೆಲ್ಲಾ ರಸ್ತೆಗೆ ಬಂದು ವಾಹನಗಳು ಓಡಾಡುವುದು ಕ್ಲಿಷ್ಟಕರವಾಯಿತು. ಕಾರು ಮತ್ತು ಬೈಕ್‌ ಸವಾರರು ಈ ಕೊಚ್ಚೆ ನೀರಿನೊಳಗೆ ದಾಟುತ್ತಾ ಹಿಡಿ ಶಾಪ ಹಾಕಿದರು. ಒಂದೆರೆಡು ಕಾರುಗಳ ಎಂಜಿನ್‌ ಒಳಕ್ಕೆ ನೀರು ನುಗ್ಗಿದ್ದರಿಂದ ಅವು ಕೆಟ್ಟು ನಿಲ್ಲಬೇಕಾಯಿತು. ಪಟ್ಟಣದ ಗಣಪತಿ ಆಂಜನೇಯ ದೇವಾಲಯದ ಬಳಿಯೂ ಇದೇ ಸ್ಥಿತಿ ನಿರ್ಮಾಣವಾಗಿದ್ದರೆ, ಬಹುತೇಕ ರಸ್ತೆಗಳು ಗಬ್ಬೆದ್ದು ಹೋಗಿರುವುದರಿಂದ ಜನರು ಓಡಾಡುವುದೇ ದುಸ್ತರವಾಯಿತು.

ಸಂತೆ ತುಂಬಾ ಗಜಿಬಿಜಿ

ಪಟ್ಟಣದಲ್ಲಿ ಸೋಮವಾರ ವಾರದ ಸಂತೆ. ಎಪಿಎಂಸಿ ಆವರಣದಲ್ಲಿ ನಡೆಯುತ್ತಿದ್ದ ಸಂತೆ ದಿಢೀರ್‌ ಮಳೆಯಿಂದಾಗಿ ಗಜಿಬಿಜಿ ರಂಪಾಟದಂತಾಯಿತು. ವ್ಯಾಪಾರಸ್ಥರು ಹಾಕಿಕೊಂಡಿದ್ದ ಗುಡಾರಗಳು ಗಾಳಿ ಮಳೆಗೆ ಕಿತ್ತು ಹೋದವು. ವ್ಯಾಪಾರ ಮಾಡಲು ಬಂದಿದ್ದ ಜನರು ಮಳೆಯಿಂದ ರಕ್ಷ ಣೆ ಪಡೆಯಲು ಪರದಾಡಿದರು. ಅಪರೂಪಕ್ಕೆಂಬಂತೆ ಬಂದ ರೇವತಿ ಮಳೆ ಕಡೂರು ಜನರ ಪಾಲಿಗೆ ಸಂಭ್ರಮದೊಂದಿಗೆ ದುಸ್ತರವನ್ನೂ ತಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ