ಆ್ಯಪ್ನಗರ

ಕಳಸ- ಹೊರನಾಡು ಸಂಪರ್ಕ ಬಂದ್‌

ಕಳಸ ತಾಲೂಕಾದ್ಯಂತ ಮಳೆಯ ಅಬ್ಬರ ತೀವ್ರವಾಗಿದ್ದು, ಜನ ಜೀವನ ಅಕ್ಷ ರಶಃ ಅಸ್ತವ್ಯಸ್ತಗೊಂಡಿದೆ.

Vijaya Karnataka 8 Aug 2019, 5:00 am
ಕಳಸ : ಕಳಸ ತಾಲೂಕಾದ್ಯಂತ ಮಳೆಯ ಅಬ್ಬರ ತೀವ್ರವಾಗಿದ್ದು, ಜನ ಜೀವನ ಅಕ್ಷ ರಶಃ ಅಸ್ತವ್ಯಸ್ತಗೊಂಡಿದೆ.
Vijaya Karnataka Web CKM-7KLS1


ಮಂಗಳವಾರ ಮಧ್ಯಾಹ್ನದ ಬಳಿಕ ಸುರಿದ ಭಾರಿ ಮಳೆಯಿಂದ ಕಳಸ-ಹೊರನಾಡು ಮಧ್ಯೆ ಭದ್ರಾನದಿಯ ಹೆಬ್ಬಾಳೆ ಸೇತುವೆ ಮುಳುಗಡೆಗೊಂಡು ಸತತ 24 ಗಂಟೆಗಳ ಕಾಲ ಹೊರನಾಡು ಸಂಪರ್ಕ ಕಡಿತಗೊಂಡಿತು. ಹೊರನಾಡಿಗೆ ಹೋಗುವ ಬದಲಿ ರಸ್ತೆ ಹಳುವಳ್ಳಿ-ಹೊರನಾಡು ರಸ್ತೆ ಕುಸಿತಗೊಂಡಿರುವ ಪರಿಣಾಮ ಹೊರನಾಡಿಗೆ ಯಾವ ಕಡೆಯಿಂದಲೂ ಸಂಚಾರ ಮಾಡಲು ಸಾಧ್ಯವಾಗಲಿಲ್ಲ. ಹಳುವಳ್ಳಿ-ಹೊರನಾಡು ರಸ್ತೆಯ ಬಹುತೇಕ ಕಡೆ ರಸ್ತೆ ಕುಸಿತವಾಗಿದೆ. ಬಸರಿಕಲ್‌ ಬೆಳ್ಳ ಸೇತುವೆ ಸಂಪೂರ್ಣ ಮುಳುಗಡೆಗೊಂಡಿದೆ. ಪರಿಣಾಮ ಜೋಗಿಕುಂಬ್ರಿ, ಶುಂಠಿಕುಂಬ್ರಿ, ಗುಳ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೆಲ್ಲಿಬೀಡು ಸಮೀಪ ಸೇತುವೆ ಮುಳುಗಡೆ ಗೊಂಡ ಪರಿಣಾಮ ಕಳಸ-ಕುದುರೆಮುಖ-ಕಾರ್ಕಳ ರಸ್ತೆ ಕೆಲ ಗಂಟೆಗಳ ಕಾಲ ಸಂಚಾರ ಕಡಿತಗೊಂಡಿತು. ಮಹಲ್‌ಗೋಡು ಸೇತುವೆ ಮೇಲೆ ನೀರು ಬಂದ ಪರಿಣಾಮ ಕಳಸ-ಬಾಳೆಹೊನ್ನೂರು ರಸ್ತೆ ಸಂಚಾರ ಸಹ ಕೆಲ ಕಾಲ ಸ್ಥಗಿತಗೊಂಡಿತು. ಕುದುರೆಮುಖದಿಂದ ವಿನೋಭನಗರಕ್ಕೆಸಂಪರ್ಕಿಸುವ ರಸ್ತೆ ಮಧ್ಯೆ ಸೇತುವೆ ಮುಳುಗಡೆಯಾದ ಪರಿಣಾಮ ವಿನೋಭನಗರಕ್ಕೆ ತೆರಳುವ ಗ್ರಾಮಸ್ಥರು ಮನೆಯಿಂದ ಹೊರಬರಲಾರದ ಪರಿಸ್ಥಿತಿ ನಿರ್ಮಾಣವಾಯಿತು. ಕಳಸ ತಾಲೂಕಿನ ಗ್ರಾಮಾಂತರ ಪ್ರದೇಶಗಳ ಬಹುತೇಕ ರಸ್ತೆ ಸಂಪರ್ಕಗಳು ಕಡಿತಗೊಂಡಿದ್ದವು.

ಹಳುವಳ್ಳಿ ರತ್ನಗಿರಿ ಸೈಟ್‌ ಶೇಷ ಎಂಬುವವರ ಮನೆಯ ಹಿಂಬಂದಿ ದರೆ ಕುಸಿತಗೊಂಡಿದೆ. ಕಳಸ ಕಲ್ಲುಬಾವಿ ಅಕ್ಕಮ್ಮ ಎಂಬುವವರ ಮನೆ ಸಮೀಪ ದರೆ ಕುಸಿತಗೊಂಡು ಅವರ ನಿರ್ಮಾಣ ಹಂತದ ಮನೆ ಅಪಾಯದ ಸ್ಥಿತಿಯಲ್ಲಿದೆ.

ಸುರಿಯುತ್ತಿರುವ ಬಾರಿ ಮಳೆಯ ಪರಿಣಾಮ ಕಳಸ-ಕುದುರೆಮುಖ ರಸ್ತೆಯುದ್ದಕ್ಕೂ ಗುಡ್ಡ ಕುಸಿದು ಬಿದ್ದಿದ್ದು ಸಂಚಾರಕ್ಕೆ ತೀರ ಅಡಚಣೆ ಉಂಟಾಗಿದೆ. ಸಂಸೆಯಲ್ಲಿ ವಿದ್ಯುತ್‌ ಕಂಬಗಳು ಉರುಳಿ ಬಿದ್ದು ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಬಾಳ್‌ಗಲ್‌ ಸಮೀಪ್‌ ಬಸ್‌ ನಿಲ್ದಾಣದ ಚಾವಣಿ ಸಂಪೂರ್ಣ ಹಾರಿ ಹೋಗಿದೆ.

ಭದ್ರಾ ನದಿಯ ನೀರಿನ ಮಟ್ಟ ಅಪಾಯದಲ್ಲಿ ಹರಿಯುತ್ತಿರುವುದರಿಂದ ಹೆಬ್ಬಾಳೆಯಲ್ಲಿನ ಅಂಗಡಿ ಮುಂಗಟ್ಟುಗಳು ಮುಳುಗಿ ಹೋಗಿವೆ. ಹಳ್ಳುವಳ್ಳಿಯ ನಾಗ ದೇವರ ಕಟ್ಟೆಗಳು ಸಂಪೂರ್ಣ ಮುಳುಗಡೆಗೊಂಡಿವೆ. ನದಿ ಪಾತ್ರದ ಹೆಚ್ಚಿನ ಭೂಮಿಗಳು ಜಲಾವೃತಗೊಂಡಿವೆ. ಅಪಾಯದ ಮಟ್ಟದಲ್ಲಿರುವ ಎಲ್ಲ ಪ್ರದೇಶಗಳಲ್ಲಿಯೂ ರಕ್ಷಣೆಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.


ಹೊರನಾಡಿಗೆ ಬಂದ ಭಕ್ತರ ಪರದಾಟ : ಹೊರನಾಡು ದೇವರ ದರ್ಶನಕ್ಕೆ ಬಂದ ಭಕ್ತರು ಇಲ್ಲಿ ರಸ್ತೆ ಸಂಪೂರ್ಣ ರಸ್ತೆ ಕಡಿತ ವಾಗಿರುವ ಹಿನ್ನೆಲೆಯಲ್ಲಿ ಪರದಾಡುವ ಸ್ಥಿತಿ ನಿರ್ಮಾಣಾವಾಯಿತು. ಹೊರನಾಡಿಗೆ ತೆರಳುವ ಬಸ್ಸುಗಳು ಕಳಸದಲ್ಲಿಯೇ ಉಳಿದವು. ಹೊರನಾಡಿನಲ್ಲಿ ಉಳಿದ ಭಕ್ತರಿಗೆ ದೇವಸ್ಥಾನದ ವತಿಯಿಂದ ಸೂಕ್ತ ರೀತಿಯಲ್ಲಿ ವಸತಿ ಊಟೋಪಚಾರ ನೀಡಲಾಯಿತು. ಕಳಸ ಭಾಗಕ್ಕೆ ಬಂದ ಹೆಚ್ಚಿನ ಪ್ರವಾಸಿಗರು ಇಲ್ಲಿಯ ವಸತಿ ನಿಲಯಗಳಲ್ಲಿಯೇ ಉಳಿದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ