ಆ್ಯಪ್ನಗರ

ಸಂಸ್ಕಾರದಿಂದ ಬಾಬಾಬುಡನ್‌ಗಿರಿವರೆಗಿನ ನಂಟು

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಗಿರೀಶ್‌ ಕಾರ್ನಾಡ್‌ ಅವರಿಗೆ ಮಲೆನಾಡಿನೊಂದಿಗೆ ಬಿಡಿಸಲಾರದ ನಂಟಿತ್ತು. ಸಿನಿಮಾ, ಸಾಹಿತ್ಯ, ಹೋರಾಟ ಸೇರಿದಂತೆ ಹಲವು ಕಾರಣಕ್ಕೆ ಕಾರ್ನಾಡರು ಮಲೆನಾಡು ಪರಿಸರದ ನಂಟು ಬೆಳೆಸಿಕೊಂಡಿದ್ದರು.

Vijaya Karnataka 11 Jun 2019, 5:00 am
ಚಿಕ್ಕಮಗಳೂರು : ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಗಿರೀಶ್‌ ಕಾರ್ನಾಡ್‌ ಅವರಿಗೆ ಮಲೆನಾಡಿನೊಂದಿಗೆ ಬಿಡಿಸಲಾರದ ನಂಟಿತ್ತು. ಸಿನಿಮಾ, ಸಾಹಿತ್ಯ, ಹೋರಾಟ ಸೇರಿದಂತೆ ಹಲವು ಕಾರಣಕ್ಕೆ ಕಾರ್ನಾಡರು ಮಲೆನಾಡು ಪರಿಸರದ ನಂಟು ಬೆಳೆಸಿಕೊಂಡಿದ್ದರು.
Vijaya Karnataka Web 834534-girish-karnad-top-politicians


ಶೃಂಗೇರಿಯ ವೈಕುಂಠಪುರ ಅಗ್ರಹಾರದಲ್ಲಿ ಸಂಸ್ಕಾರ ಸಿನಿಮಾದ ಚಿತ್ರೀಕರಣ ನಡೆದಿತ್ತು. ಸಂಸ್ಕಾರ ಶೂಟಿಂಗ್‌ ನಡೆಯುವಾಗ ಕಾರ್ನಾಡರು ನಾಟಕ, ಸಾಹಿತ್ಯ ರಚನೆ, ನಟನೆ, ನಿರ್ದೇಶನದಲ್ಲಿ ಸಕ್ರಿಯವಾಗಿದ್ದರು. ಆದರೆ, ಆಗ ಅವರಿಗಿನ್ನೂ ಜ್ಞಾನಪೀಠ ಪ್ರಶಸ್ತಿ ಬಂದಿರಲಿಲ್ಲ.

ರಾಷ್ಟ್ರಕವಿ ಕುವೆಂಪು ಅವರ ಕಾನೂರು ಹೆಗ್ಗಡಿತಿ ಚಿತ್ರೀಕರಣದಲ್ಲಿ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ ಪರಿಸರದಲ್ಲಿ ಪಾಲ್ಗೊಂಡಿದ್ದ ಸಂದರ್ಭ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗಿತ್ತು. ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಸಾಹಿತ್ಯ ಆಧರಿಸಿದ ಸಿನಿಮಾಗಳಲ್ಲಿ ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕಾರ್ನಾಡರೇ ಮನೋಜ್ಞ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿದ್ದು ವಿಶೇಷ.

ಕಾರ್ನಾಡರು ಬರೀ ಸಾಹಿತ್ಯ, ನಟನೆ, ನಿರ್ದೇಶಕ್ಕೆ ಸೀಮಿತವಾಗಿರಲಿಲ್ಲ. ಸಮಾಜದ ಪ್ರಸಕ್ತ ಎಲ್ಲ ತಲ್ಲಣಗಳಿಗೆ ಪ್ರತಿಸ್ಪಂದಿಸುವ ಗುಣ ಅವರಲ್ಲಿತ್ತು. ಚಿಕ್ಕಮಗಳೂರು ತಾಲೂಕಿನ ಬಾಬಾಬುಡನ್‌ಗಿರಿ ವಿವಾದ 2002-2003ರಲ್ಲಿ ಉತ್ತುಂಗ ಸ್ಥಿತಿಗೆ ತಲುಪಿತ್ತು.

ಸಂಘ ಪರಿವಾರದ ಚಟುವಟಿಕೆಗಳ ವಿರುದ್ಧ ಗಿರೀಶ್‌ ಕಾರ್ನಾಡ್‌ ಕೂಡ ಧ್ವನಿ ಎತ್ತಿದ್ದರು. 2003ರಲ್ಲಿ ಸಂಘ ಪರಿವಾರ ಆಚರಿಸುವ ದತ್ತಜಯಂತಿ ದಿನವೇ ಸೌಹಾರ್ದ ನಡಿಗೆ ಮೂಲಕ ಮುಖಾಮುಖಿಯಾಗಲು ಗಿರೀಶ್‌ ಕಾರ್ನಾಡ್‌, ಜಿ.ಕೆ.ಗೋವಿಂದರಾವ್‌, ಗೌರಿಲಂಕೇಶ್‌, ಕೆ.ಎಲ್‌.ಅಶೋಕ್‌, ರಾಜೇಂದ್ರ ಚೆನ್ನಿ ಸೇರಿದಂತೆ ನಾಡಿನ ಪ್ರಗತಿಪರ ಮನಸ್ಸುಗಳು ನಿರ್ಧರಿಸಿದ್ದವು.

ಬೆಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದ ಗಿರೀಶ್‌ ಕಾರ್ನಾಡರು 2003ರ ಅಕ್ಟೋಬರ್‌ನಲ್ಲಿ ಚಿಕ್ಕಮಗಳೂರು ತಾಲೂಕಿನ ಬಾಬಾಬುಡನ್‌ಗಿರಿಗೆ ಬಂದು ಅಲ್ಲಿನ ಪರಿಸ್ಥಿತಿ ಅವಲೋಕಿಸಿ ನಂತರ ಸುದ್ದಿಗೋಷ್ಠಿಯನ್ನೂ ನಡೆಸಿದ್ದರು.

2003 ಡಿಸೆಂಬರ್‌ನಲ್ಲಿ ಸಂಘ ಪರಿವಾರ ಆಯೋಜಿಸಿದ್ದ ಶೋಭಾಯಾತ್ರೆ ದಿನವೇ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ನೇತೃತ್ವದಲ್ಲಿ ಸೌಹಾರ್ದ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಡಾ.ಗಿರೀಶ್‌ ಕಾರ್ನಾಡ್‌ ಅವರನ್ನು ಹಾಸನ ಎಸ್ಪಿ ಮನವೊಲಿಸಿ ಅಲ್ಲಿಂದಲೇ ವಾಪಸ್‌ ಕಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ