ಆ್ಯಪ್ನಗರ

ಕಸ್ತೂರಿ ರಂಗನ್‌ ವರದಿ, ಅಡಕೆ ನಿಷೇಧ ಭೀತಿ

ಕಸ್ತೂರಿರಂಗನ್‌ ವರದಿ ಮತ್ತು ಅಡಕೆ ನಿಷೇಧ ಭೀತಿ ಪಶ್ಚಿಮಘಟ್ಟ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದ್ದು, ರೈತರ ಹಿತರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Vijaya Karnataka 29 Nov 2018, 5:00 am
ಚಿಕ್ಕಮಗಳೂರು : ಕಸ್ತೂರಿರಂಗನ್‌ ವರದಿ ಮತ್ತು ಅಡಕೆ ನಿಷೇಧ ಭೀತಿ ಪಶ್ಚಿಮಘಟ್ಟ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದ್ದು, ರೈತರ ಹಿತರಕ್ಷಣೆಗೆ ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
Vijaya Karnataka Web kasturi rangan report threatened by the ban
ಕಸ್ತೂರಿ ರಂಗನ್‌ ವರದಿ, ಅಡಕೆ ನಿಷೇಧ ಭೀತಿ


ಕಸ್ತೂರಿ ರಂಗನ್‌ ವರದಿ ಹಸಿರು ಪೀಠದಲ್ಲಿದ್ದರೆ, ಅಡಕೆ ನಿಷೇಧ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಕೋರ್ಟ್‌ ಅಂತಿಮವಾಗಿ ಯಾವ ತೀರ್ಪು ನೀಡುತ್ತದೆ ಎಂಬುದು ಗೊತ್ತಿಲ್ಲ. ಪ್ರಧಾನಿಯೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಅನುಭವಿ ವಕೀಲರ ಮೂಲಕ ಕೋರ್ಟ್‌ನಲ್ಲಿ ವಾದ ಮಂಡಿಸಲು ಸೂಚಿಸಿದ್ದಾರೆ. ಈ ವಿಷಯವನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ರೈತರನ್ನು ರಕ್ಷಣೆ ಮಾಡಲು ಬದ್ಧವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಸ್ತೂರಿ ರಂಗನ್‌ ವರದಿಗೆ ಸಂಬಂಧಿಸಿದಂತೆ ಯಾವುದು ಅರಣ್ಯ, ಯಾವುದು ಅರಣ್ಯವಲ್ಲ ಎಂಬ ಬಗ್ಗೆ ಕೇರಳ ಸರಕಾರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದರಿಂದ ಆ ರಾಜ್ಯದ ಬಹುತೇಕ ಗ್ರಾಮಗಳು ವರದಿಯಿಂದ ಹೊರಗುಳಿದವು. ಕರ್ನಾಟಕ ಸರಕಾರ ಈ ರೀತಿ ಸರ್ವೆ ಮಾಡಿಸಿ ವರದಿ ನೀಡದೆ ಅಧಿಕಾರಿಗಳ ಮೂಲಕ ಅಂದಾಜು ವರದಿ ನೀಡಿದ್ದರಿಂದ ಆತಂಕ ಸೃಷ್ಟಿಯಾಗಿದೆ ಎಂದರು.

ಪರಿವರ್ತಿತ ಸಾಲಕ್ಕೆ ಪ್ರಯತ್ನ

ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಬೆಳೆಗಾರರು ಪಡೆದುಕೊಂಡಿರುವ ಅಲ್ಪಾವಧಿ ಸಾಲವನ್ನು 5 ವರ್ಷಗಳ ಪರಿವರ್ತಿತ ಸಾಲವನ್ನಾಗಿ ಮಾಡಲು ಪ್ರಯತ್ನಗಳು ನಡೆದಿವೆ. ಸಂಬಂಧಿಸಿದ ಸಚಿವರೊಂದಿಗೆ ಬೆಳೆಗಾರ ಪ್ರತಿನಿಧಿಗಳನ್ನು ಭೇಟಿ ಮಾಡಿಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾಗಿದೆ. ಸಣ್ಣ ರೈತರಿಗೆ ಸಬ್ಸಿಡಿ ಹಣ ಕೊಡಲು ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ ಕರ್ನಾಟಕ ಸರಕಾರ ಖಾಸಗಿ ವಿಮಾ ಕಂಪನಿಗಳಿಗೆ ಕೊಡುವ ಮೂಲಕ ತಪ್ಪು ಮಾಡಿದೆ. ಖಾಸಗಿ ಕಂಪನಿಗಳ ಮೇಲೆ ಸರಕಾರಕ್ಕೆ ಹಿಡಿತ ಇಲ್ಲವಾಗಿದೆ. ಯಾವ ಕಂಪನಿ, ರೈತರಿಗೆ ಎಷ್ಟು ಹಣ ಕೊಡಬೇಕು ಎಂಬ ಬಗ್ಗೆ ಸಮೀಕ್ಷೆ ಮಾಡಿಸಿ ಆ ಕಂಪನಿಗಳಿಂದ ಹಣ ಕೊಡಿಸುವ ಜವಾಬ್ದಾರಿ ರಾಜ್ಯ ಸರಕಾರದ್ದೇ ಆಗಿದೆ. ಈ ಬಗ್ಗೆ ಅರಿವಿಲ್ಲದೆ ಕಾಂಗ್ರೆಸ್‌ನವರು ಕೇಂದ್ರ ಸರಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

1379 ಕೋಟಿ ಅನುದಾನ

ತಾವು ಸಂಸದರಾದ ನಂತರ ಚಿಕ್ಕಮಗಳೂರು ಜಿಲ್ಲೆಗೆ ಬೇರೆ ಬೇರೆ ಬಾಬ್ತಿನಲ್ಲಿ 1379 ಕೋಟಿ ರೂ. ತಂದಿದ್ದು, 2017-18ನೇ ಸಾಲಿನ ಕಾಮಗಾರಿಗಳು ಪ್ರಗತಿಯಲ್ಲಿವೆ. 2018-19ನೇ ಸಾಲಿನ ಕಾಮಗಾರಿಗಳಿಗೆ ಟೆಂಡರ್‌ ಕರೆಯಬೇಕಿದೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೆ. ಆದರೆ, ಆ ಬಗ್ಗೆ ಏನೂ ಮಾತಾಡದಂತೆ ಪಕ್ಷ ಸೂಚಿಸಿದೆ. ಪಕ್ಷದ ಹೈಕಮಾಂಡ್‌ ಯಾವ ಜವಾಬ್ದಾರಿ ವಹಿಸುತ್ತದೋ ಅದನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಎಚ್‌.ಡಿ.ತಮ್ಮಯ್ಯ, ತಾಲೂಕು ಅಧ್ಯಕ್ಷ ಸೋಮಶೇಖರ್‌, ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್‌, ನಗರಸಭೆ ಸದಸ್ಯೆ ಶ್ಯಾಮಲಾರಾವ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ