ಆ್ಯಪ್ನಗರ

ಮಂಗನ ಕಾಯಿಲೆ ಮುಂಜಾಗ್ರತೆಗೆ ಸೂಚನೆ

ಯಾವುದೇ ತರಹದ ಜ್ವರ ಕಂಡುಬಂದಲ್ಲಿ ಸಾರ್ವಜನಿಕರು ಉದಾಸೀನ ಮಾಡದೆ ಸ್ಥಳೀಯ ಆಸ್ಪತ್ರೆಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಬಿ.ಆರ್‌.ರೂಪ ಸಲಹೆ ನೀಡಿದರು.

Vijaya Karnataka 17 Feb 2019, 5:00 am
ತರೀಕೆರೆ: ಯಾವುದೇ ತರಹದ ಜ್ವರ ಕಂಡುಬಂದಲ್ಲಿ ಸಾರ್ವಜನಿಕರು ಉದಾಸೀನ ಮಾಡದೆ ಸ್ಥಳೀಯ ಆಸ್ಪತ್ರೆಗಳಿಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಬಿ.ಆರ್‌.ರೂಪ ಸಲಹೆ ನೀಡಿದರು.
Vijaya Karnataka Web CKM-16tarikere1


ಅವರು ಶನಿವಾರ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗನ ಕಾಯಿಲೆ ಮುಂಜಾಗ್ರತಾ ಕ್ರಮದ ಕುರಿತು ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ತಾಲೂಕಿನ ಗೋಪಾಲ ಕಾಲೊನಿ, ಕಲ್ಲತ್ತಿಗಿರಿ, ವಿಠಲಾಪುರದಲ್ಲಿ ಮಂಗಗಳು ಮೃತಪಟ್ಟಿದ್ದು, ಆರೋಗ್ಯ, ಅರಣ್ಯ, ಕಂದಾಯ, ಶಿಕ್ಷ ಣ ಮತ್ತಿತರೆ ಇಲಾಖೆಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿವೆ ಎಂದರು.

ಲಕ್ಕವಳ್ಳಿ ಹೋಬಳಿಯ ಗೋಪಾಲ ಕಾಲೊನಿಯಲ್ಲಿ ಮೃತಪಟ್ಟಿದ್ದ ಎರಡು ಮಂಗಗಳ ದೇಹದ ಕೆಲ ಭಾಗಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಪೈಕಿ ಒಂದು ಮಂಗದ ವರದಿಯಲ್ಲಿ ಕೆಎಫ್‌ಡಿ ಪಾಸಿಟಿವ್‌ ಆಗಿದೆ. ಎಲ್ಲ ಇಲಾಖಾಧಿಕಾರಿಗಳ ಸಹಕಾರದೊಂದಿಗೆ ಇನ್ನೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್‌ ಮಾತನಾಡಿ, ಮಂಗಗಳು ಮೃತಪಟ್ಟಿರುವ ಗ್ರಾಮಗಳು ಮತ್ತು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಹಳ್ಳಿಗಳ ಜನರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಕಲ್ಲತ್ತಿಗಿರಿ ಭಾಗದಲ್ಲಿ ಮಂಗನ ಕಾಯಿಲೆಗೆ ಸಂಬಂಧಿಸಿದ ಉಣ್ಣೆ ಪತ್ತೆಯಾಗಿದ್ದು, ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೆಎಫ್‌ಡಿ ನಿಯಂತ್ರಣದ ಲಸಿಕೆ ಸದ್ಯದಲ್ಲಿಯೇ ಬರಲಿದ್ದು, ಪ್ರತೀ ಮನೆಗೆ ಆಯಿಲ್‌ ನೀಡಲಾಗಿದೆ. ಕಾಡಿಗೆ ಹೋಗಿ ಬಂದ ನಂತರ ಬಟ್ಟೆಗಳನ್ನು ಬಿಸಿನೀರಿನಲ್ಲಿ ತೊಳೆಯುವಂತೆ ತಿಳಿವಳಿಕೆ ನೀಡಲಾಗಿದೆ. ಮುನ್ನೆಚ್ಚರಿಕೆಯಾಗಿ ಅರಣ್ಯ ಇಲಾಖೆ ಸಿಬ್ಬಂದಿಗೆ ವ್ಯಾಕ್ಸಿನ್‌ ಹಾಕಲಾಗುವುದು. 6 ರಿಂದ 60 ವರ್ಷದವರೆಗಿನ ವಯೋಮಾನದವರಿಗೆ ಚುಚ್ಚುಮದ್ದು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ಮಧು ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಎಫ್‌ಡಿ ಚಿಕಿತ್ಸೆಗಾಗಿ 10 ಹಾಸಿಗೆಯ ಒಂದು ವಾರ್ಡ್‌ ಮೀಸಲಿಡಲಾಗಿದೆ. ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಕಡ್ಡಾಯವಾಗಿ ಆಸ್ಪತ್ರೆಯಲ್ಲಿರುವಂತೆ ಸೂಚಿಸಲಾಗುವುದು ಎಂದರು.

ತಹಸೀಲ್ದಾರ್‌ ಎನ್‌.ಟಿ.ಧರ್ಮೋಜಿರಾವ್‌, ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌.ಕೆ.ಶಿವರಾಜ್‌, ಉಪ ವಲಯ ಅರಣ್ಯಾಧಿಕಾರಿ ಸಂಗ್ಯಾನಾಯ್ಕ ಮತ್ತಿತರೆ ಇಲಾಖಾಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ