ಆ್ಯಪ್ನಗರ

ಜ್ಞಾನ ವಿಜ್ಞಾನ ಅಧ್ಯಯನ ಕೇಂದ್ರ ಲೋಕಾರ್ಪಣೆ

ಆದಿಚುಂಚನಗಿರಿ ಶಾಖಾ ಮಠದಲ್ಲಿ ನಡೆಯುತ್ತಿರುವ ಚುಂಚೋತ್ಸವ 2019ರ ಅಂಗವಾಗಿ ಎರಡನೇ ದಿನ ಸೋಮವಾರ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು.

Vijaya Karnataka 8 Jan 2019, 5:00 am
ಶೃಂಗೇರಿ : ಆದಿಚುಂಚನಗಿರಿ ಶಾಖಾ ಮಠದಲ್ಲಿ ನಡೆಯುತ್ತಿರುವ ಚುಂಚೋತ್ಸವ 2019ರ ಅಂಗವಾಗಿ ಎರಡನೇ ದಿನ ಸೋಮವಾರ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಿತು.
Vijaya Karnataka Web CKM-7Sri2


ಬೆಳಗ್ಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಚುಂಚೋತ್ಸಕ್ಕಾಗಿ ಆಗಮಿಸಿದ ನಾಡಿನ ವಿವಿಧ ಸಾಧು ಸಂತರು ತುಂಗಾ ನದಿಯಲ್ಲಿ ಗಂಗಾ ಪೂಜೆಯನ್ನು ನೆರವೇರಿಸಿದರು. ನಂತರ ಮೆರವಣಿಗೆಯಲ್ಲಿ ಸಾಗಿಬಂದು ಬಿ.ಜಿ.ಎಸ್‌ ಕಾಲೇಜು ಆವರಣದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ 75ನೇ ಜಯಂತಿ ಅಮೃತ ಮಹೋತ್ಸವದ ನೆನಪಿಗಾಗಿ 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಿಜ್ಞಾನ ಮಾದರಿಗಳನ್ನೊಳಗೊಂಡ ಜ್ಞಾನ ವಿಜ್ಞಾನ ಅಧ್ಯಯನ ಕೇಂದ್ರವನ್ನು ಲೋಕಾರ್ಪಣೆ ಮಾಡಿದರು. ಬಳಿಕ ಇದೇ ಕಟ್ಟಡದಲ್ಲಿ ನಿರ್ಮಸಿರುವ ಬಿಜಿಎಸ್‌ ಪ್ರಾರ್ಥನ ಮಂದಿರದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ವಿಗ್ರಹ ಪ್ರಾಣ ಪ್ರತಿಷ್ಠಾಪನೆ, ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು.

ಧಾರ್ಮಿಕ ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳ ಬ್ಯಾಂಡ್‌ಸೆಟ್‌, ವಾದ್ಯಗೋಷ್ಠಿ, ಹಾಗೂ ಕಲಶವನ್ನು ಹೊತ್ತ ಮಹಿಳೆಯರು ಗಂಗಾ ಪೂಜೆಯ ನಂತರ ಮೆರವಣಿಗೆಯ ಮೂಲಕ ಆಗಮಿಸಿದರು. ಡಾ.ಬಾಲಗಂಗಾಧರನಾಥ ಸ್ವಾಮೀಜಿ ವಿಗ್ರಹವನ್ನು ಪಲ್ಲಕಿ ಉತ್ಸವದ ಮೂಲಕ ಕೊಂಡೊಯ್ಯಲಾಯಿತು. ಚುಂಚೋತ್ಸವದ ಅಂಗವಾಗಿ ಶಾಖಾ ಮಠವನ್ನು ವಿಶೇಷವಾಗಿ ಅಲಂಕರಿಸಿದ್ದು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಭಕ್ತರಿಗೆ ವಸತಿ, ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇದಕ್ಕೂ ಮೊದಲು ಕಾಲೇಜಿನ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಪೂಜೆ ಆಯೋಜಿಸಲಾಗಿತ್ತು. ಭಾನುವಾರ ರಾತ್ರಿ ಗಣಪತಿ ಹೋಮ, ವಾಸ್ತು ಹೋಮ ನಡೆದವು. ಪೂಜಾ ಕಾರ್ಯಕ್ರಮದಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಶಾಖಾ ಮಠದ ಸ್ವಾಮೀಜಿಗಳು ಉಪಸ್ಥಿತರಿದ್ದರು. ಬಳಿಕ ಸಾಮೂಹಿಕ ಸತ್ಯ ನಾರಯಣ ಪೂಜೆ ನೆರವೇರಿತು.

ಈ ಸಂಧರ್ಭದಲ್ಲಿ ಆಶೀರ್ವಚನ ನೀಡಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ನಮ್ಮ ಪೂಜ್ಯ ಗುರು ಯುಗ ಯೋಗಿ ಬಡ ಜನರೊದ್ಧಾರಕ ಡಾ. ಶ್ರೀಲಗಂಗಾಧರ ನಾಥ ಸ್ವಾಮೀಜಿಯವರ ಆಶೀರ್ವಾದದಿಂದ ಈ ಕಾರ್ಯವೆಸಗಲು ಸಾಧ್ಯವಾಗಿದೆ. ಅವರ ಮಾರ್ಗದರ್ಶನದಂತೆ ಸೇವೆಯೇ ಪೂಜೆ ಎಂಬ ಸಂಕಲ್ಪದೊಂದಿಗೆ ಮುಂದುವರಿದಿದ್ದೇವೆ. ಪ್ರತಿಯೊಬ್ಬರು ತಮ್ಮ ಜೀವನ ಸಾರ್ಥಕಗೊಳಿಸಲು ಧಾರ್ಮಿಕ ಭಾವನೆಗಳನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಶಾಖಾ ಮಠದ ವಿವಿಧ ಸಾಧು ಸಂತರು ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಪ್ರಾಂಶುಪಾಲ ಕೆ.ಸಿ.ನಾಗೇಶ್‌, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ ಶ್ರೀನಿವಾಸ್‌, ತಾ.ಅಧ್ಯಕ್ಷ ಗೇರ್‌ಬೈಲ್‌ ಶಂಕ್ರಪ್ಪ, ಯುವ ಒಕ್ಕಲಿಗ ಅಧ್ಯಕ್ಷ ರಾಜೇಶ್‌, ಕೆ.ಎಂ ಮಲ್ಲಪ್ಪ ಹೆಗ್ಡೆ, ಕೆ.ವಿ ಧರ್ಮಪ್ಪ ಗೌಡ, ಕಾನೊಳ್ಳಿ ಕೃಷ್ಣಪ್ಪ ಗೌಡ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ