ಆ್ಯಪ್ನಗರ

ಕುವೆಂಪು ವಿವಿ ಧನದಾಹ: ವಿದ್ಯಾರ್ಥಿಗಳ ಸಂಕಟ

ಕುವೆಂಪು ವಿಶ್ವವಿದ್ಯಾಲಯದ ಧನದಾಹ ಸ್ನಾತಕೋತ್ತರ ಪದವಿ ಕನಸು ಹೊತ್ತಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಸಂಕಟಕ್ಕೆ ದೂಡಿದೆ. ಗ್ರಾಮೀಣ, ಬಡ ಕುಟುಂಬದ ವಿದ್ಯಾರ್ಥಿಗಳ ಸ್ನಾತಕೋತ್ತರ ಶಿಕ್ಷಣದ ಹಕ್ಕನ್ನು ವಿವಿ ಮೊಟಕುಗೊಳಿಸುವ ಪ್ರಯತ್ನಕ್ಕೆ ಕೈಹಾಕಿದೆ.

Vijaya Karnataka 1 Jul 2018, 5:00 am
ಆರಗ ರವಿ ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದ ಧನದಾಹ ಸ್ನಾತಕೋತ್ತರ ಪದವಿ ಕನಸು ಹೊತ್ತಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಸಂಕಟಕ್ಕೆ ದೂಡಿದೆ. ಗ್ರಾಮೀಣ, ಬಡ ಕುಟುಂಬದ ವಿದ್ಯಾರ್ಥಿಗಳ ಸ್ನಾತಕೋತ್ತರ ಶಿಕ್ಷಣದ ಹಕ್ಕನ್ನು ವಿವಿ ಮೊಟಕುಗೊಳಿಸುವ ಪ್ರಯತ್ನಕ್ಕೆ ಕೈಹಾಕಿದೆ.
Vijaya Karnataka Web kuvempu university dhanadaha students woe
ಕುವೆಂಪು ವಿವಿ ಧನದಾಹ: ವಿದ್ಯಾರ್ಥಿಗಳ ಸಂಕಟ


ರಾಷ್ಟ್ರಕವಿ ಕುವೆಂಪು ಹೆಸರಿನ ವಿಶ್ವವಿದ್ಯಾಲಯ ಈಗ ಕವಿಯ ಆಶಯಗಳನ್ನು ಗಾಳಿಗೆ ತೂರಿ ಹಣಕ್ಕೆ ಪ್ರಾಮುಖ್ಯತೆ ಕೊಡಲು ಮುಂದಾಗಿದೆ. ಗ್ರಾಮೀಣ, ಬಡ ಕುಟುಂಬದ ವಿದ್ಯಾರ್ಥಿಗಳಿಗೂ ಸ್ನಾತಕೋತ್ತರ ಶಿಕ್ಷಣ ನೀಡಬೇಕಾದ ವಿವಿಯ ಇತ್ತೀಚಿನ ನಿಲುವುಗಳು ಅಂತಹ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರ ಇಡುವ ಪ್ರಯತ್ನದಂತೆ ಕಂಡುಬರುತ್ತಿವೆ ಎಂಬ ಆರೋಪ ಕೇಳಿಬಂದಿದೆ. ವಿವಿ ತನ್ನ ನಿಲುವು ಬದಲಿಸದಿದ್ದರೆ ಹೋರಾಟ ಅನಿವಾರ‍್ಯ ಎಂಬ ಎಚ್ಚರಿಕೆಯನ್ನೂ ವಿದ್ಯಾರ್ಥಿಗಳು ನೀಡಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು, ಸ್ನಾತಕೋತ್ತರ ಕೇಂದ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಆದರೆ, ಇದೇ ವಿವಿ ವ್ಯಾಪ್ತಿಗೆ ಬರುವ ಸರಕಾರಿ ಕಾಲೇಜುಗಳಲ್ಲಿರುವ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಆದ್ಯತೆ ನೀಡದೆ ಪೇಮೆಂಟ್‌ ಸೀಟುಗಳಿಗೆ ಮಣೆ ಹಾಕಲಾಗಿದೆ. ಮೊದಲು ಪೇಮೆಂಟ್‌ ಸೀಟುಗಳನ್ನು ಭರ್ತಿ ಮಾಡಿಕೊಂಡು ನಂತರ ಸ್ನಾತಕೋತ್ತರ ಕೋರ್ಸ್‌ಗಳಿರುವ ಕಾಲೇಜುಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವುದು ವಿವಿಯ ಧನದಾಹಕ್ಕೆ ನಿದರ್ಶನವಾಗಿದೆ.

ಕೇಂದ್ರಗಳಲ್ಲಿ ದುಬಾರಿ ಶುಲ್ಕ: ವಿಶ್ವವಿದ್ಯಾಲಯಗಳ ಅಧೀನದಲ್ಲಿರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ಶುಲ್ಕ ಜಾಸ್ತಿ ಇದ್ದು, ಇಲ್ಲಿ ಸಂಗ್ರಹವಾಗುವ ಹಣ ನೇರವಾಗಿ ವಿವಿಯ ಖಜಾನೆಗೆ ಸಂದಾಯವಾಗುತ್ತದೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾಯಂ ಹಾಗೂ ನುರಿತ ಪ್ರಾಧ್ಯಾಪಕರ ಕೊರತೆಯೂ ಇದ್ದು, ತಾತ್ಕಾಲಿಕ ಸೇವೆಯ ಪ್ರಾಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಖಾತ್ರಿಯೂ ಇಲ್ಲ.

ವಿಶ್ವ ವಿದ್ಯಾಲಯ ವ್ಯಾಪ್ತಿಯ ಸರಕಾರಿ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳ ಜತೆಗೆ ಅನುಭವಿ ಪ್ರಾಧ್ಯಾಪಕರು ಇದ್ದಾರೆ. ಸರಕಾರಿ ಕಾಲೇಜುಗಳಾದ ಕಾರಣ ಶುಲ್ಕವೂ ಕಡಿಮೆ. ಆದರೆ, ವಿವಿ ಮಾತ್ರ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸರಕಾರಿ ಕಾಲೇಜುಗಳಿಗೆ ಸೇರಲು ಬಯಸುವವರಿಗೆ ಯಾವುದೇ ಮಾಹಿತಿ ನೀಡದೆ ಕತ್ತಲಲ್ಲಿಟ್ಟಿದೆ. ವಿವಿ ಮುದ್ರಿಸಿರುವ ಅರ್ಜಿ ನಮೂನೆಯಲ್ಲಿ ಕೂಡ ಸ್ನಾತಕೋತ್ತರ ಕೋರ್ಸ್‌ಗಳಿರುವ ಸರಕಾರಿ ಕಾಲೇಜುಗಳ ವಿವರವನ್ನು ಮರೆಮಾಚಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ಸಿಕ್ಕದೆ ಸ್ನಾತಕೋತ್ತರ ಕೇಂದ್ರವನ್ನೇ ಅವಲಂಬಿಸುವ ಅನಿವಾರ‍್ಯತೆ ಸೃಷ್ಟಿಸಲಾಗಿದೆ.

2017-18ನೇ ಸಾಲಿನ ಅರ್ಜಿಯಲ್ಲಿ ಶಂಕರಘಟ್ಟದ ಜ್ಞಾನಸಹ್ಯಾದ್ರಿ, ಕಡೂರು, ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಹಾಗೂ ಚಿಕ್ಕಮಗಳೂರಿನ ಸ್ನಾತಕೋತ್ತರ ಕೇಂದ್ರದ ಜತೆಗೆ ಸ್ನಾತಕೋತ್ತರ ಕೋರ್ಸ್‌ಗಳಿರುವ ಕಾಲೇಜುಗಳ ಪಟ್ಟಿ ಮತ್ತು ಆ ಕಾಲೇಜುಗಳ ಕೋಡ್‌ ಸಂಖ್ಯೆಯನ್ನು ಪ್ರಾಸ್ಪಕ್ಟಸ್‌ನಲ್ಲಿ ನೀಡಿದಂತೆ ಗುರುತಿಸಲು ಸೂಚಿಸಲಾಗಿತ್ತು. ಇದರಿಂದ ಸ್ನಾತಕೋತ್ತರ ಕೋರ್ಸ್‌ಗಳಿರುವ ಕಾಲೇಜುಗಳ ಮಾಹಿತಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಕ್ಕುವ ಜತೆಗೆ ಗ್ರಾಮೀಣ, ಬಡ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಕೂಲವಾಗಿತ್ತು.

ಆದರೆ, 2018-19ನೇ ಸಾಲಿನ ಅರ್ಜಿಯಲ್ಲಿ ನಾಲ್ಕು ಸ್ನಾತಕೋತ್ತರ ಕೇಂದ್ರಗಳನ್ನು ಮಾತ್ರ ಮುದ್ರಿಸಿದ್ದು, ಸ್ನಾತಕೋತ್ತರ ಕೋರ್ಸ್‌ಗಳಿರುವ ಸರಕಾರಿ ಮತ್ತು ಖಾಸಗಿ ಕಾಲೇಜುಗಳ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಪ್ರವೇಶ ಪ್ರಕ್ರಿಯೆಯಲ್ಲಿ ಕೂಡ ಮೊದಲು ಮೆರಿಟ್‌ ಸೀಟುಗಳು ನಂತರ ಮೆರಿಟ್‌ ಕಂ ಪೇಮೆಂಟ್‌ ಸೀಟುಗಳು ಹಾಗೂ ಕೊನೆಯದಾಗಿ ಸಂಯೋಜಿತ ಸರಕಾರಿ ಮತ್ತು ಖಾಸಗಿ ಕಾಲೇಜುಗಳ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸ್ನಾತಕೋತ್ತರ ಕೋರ್ಸ್‌ಗಳಿರುವ ಕಾಲೇಜುಗಳಿಗೆ ಪ್ರವೇಶ ನೀಡುವ ಮೊದಲೇ ಪೇಮೆಂಟ್‌ ಸೀಟುಗಳಿಗೆ ಆದ್ಯತೆ ನೀಡಿದ್ದು ವಿವಿಯ ಧನದಾಹಕ್ಕೆ ನಿದರ್ಶನವಾಗಿದೆ ಎಂದು ಹಲವು ವಿದ್ಯಾರ್ಥಿಗಳು ದೂರಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಪಡೆಯಲು ಕುವೆಂಪು ವಿವಿ ಕುಲಪತಿ ಪ್ರೊ.ಜೋಗನ್‌ ಶಂಕರ್‌ ಅವರನ್ನು ಪತ್ರಿಕೆ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಲಿಲ್ಲ.

ಹೋರಾಟ ಅನಿವಾರ‍್ಯ: ಸ್ನಾತಕೋತ್ತರ ಕೋರ್ಸ್‌ಗಳಿರುವ ಕಾಲೇಜುಗಳ ವಿವರವನ್ನು ಕುವೆಂಪು ವಿವಿ ಮರೆಮಾಚಿದೆ. ಮೆರಿಟ್‌ ಆಧಾರದ ಪ್ರವೇಶಾವಕಾಶ ಮುಗಿದ ಮರುದಿನವೇ ಪೇಮೆಂಟ್‌ ಸೀಟುಗಳ ಭರ್ತಿಗೆ ಕಾಯ್ದಿರಿಸಲಾಗಿದೆ. ಇವೆರಡೂ ಮುಗಿದ ನಂತರ ಸರಕಾರಿ ಕಾಲೇಜುಗಳಲ್ಲಿರುವ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಗ್ರಾಮೀಣ, ಆರ್ಥಿಕವಾಗಿ ಹಿಂದುಳಿದವರ ಶೈಕ್ಷಣಿಕ ಹಕ್ಕು ಕಸಿದುಕೊಂಡಂತಾಗಿದೆ. ವಿವಿಯ ಈ ತಾರತಮ್ಯ ಧೋರಣೆಯನ್ನು ಸಂಬಂಧಿಸಿದವರು ಸರಿಪಡಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ಹೋರಾಟ ನಡೆಸುವುದು ಅನಿವಾರ‍್ಯವಾಗುತ್ತದೆ. -ದೀಪಕ್‌ ದೊಡ್ಡಯ್ಯ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆ ಕೇಂದ್ರೀಯ ಸಲಹಾ ಸಮಿತಿ ಸದಸ್ಯ, ಚಿಕ್ಕಮಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ