ಆ್ಯಪ್ನಗರ

ಚಾರ್ಮಾಡಿಯಲ್ಲಿ ಮತ್ತೆ ಭೂಕುಸಿತ

ಚಾರ್ಮಾಡಿ ಘಾಟ್‌ನಲ್ಲಿ ಬುಧವಾರವೂ ಕೆಲವೆಡೆ ರಸ್ತೆಗೆ ಗುಡ್ಡ ಕುಸಿತವಾಗಿದ್ದು ತೆರವು ಕಾರ್ಯಚರಣೆ ಸವಾಲಾಗಿ ಪರಿಣಮಿಸಿದೆ.

Vijaya Karnataka 14 Jun 2018, 7:35 am
ಕೊಟ್ಟಿಗೆಹಾರ (ಚಿಕ್ಕಮಗಳೂರು) : ಚಾರ್ಮಾಡಿ ಘಾಟ್‌ನಲ್ಲಿ ಬುಧವಾರವೂ ಕೆಲವೆಡೆ ರಸ್ತೆಗೆ ಗುಡ್ಡ ಕುಸಿತವಾಗಿದ್ದು ತೆರವು ಕಾರ್ಯಚರಣೆ ಸವಾಲಾಗಿ ಪರಿಣಮಿಸಿದೆ.
Vijaya Karnataka Web f2128c3d-4d2e-48c7-ac6a-25a2d0adc256


ಸೋಮವಾರ ಸಂಜೆ ಚಾರ್ಮಾಡಿ ಘಾಟ್‌ ಎರಡನೇ ತಿರುವಿನಲ್ಲಿ ಭೂಕುಸಿತವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸತತ ಕಾರ್ಯಾಚರಣೆಯಿಂದಾಗಿ ಮಣ್ಣನ್ನು ತೆರವುಗೊಳಿಸಲಾಗಿದ್ದು ಸಾಲುಗಟ್ಟಿ ನಿಂತ ವಾಹನಗಳನ್ನು ಕಳಿಸಿಕೊಡಲಾಗಿತ್ತು. ನಂತರ ಬರುವ ವಾಹನಗಳಿಗೆ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಬುಧವಾರವೂ 4 ಕಡೆಗಳಲ್ಲಿ ಭೂಕುಸಿತವಾಗಿದ್ದು ಕಾರ್ಯಚರಣೆ ನಡೆಸುವುದು ಸವಾಲಾಗಿದೆ.

ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಟೆಂಡೆಂಟ್‌ ಎಂಜಿನಿಯರ್‌ ರಾಘವನ್‌ ನೇತೃತ್ವದ ತಂಡ ಬುಧವಾರ ಭೇಟಿ ನೀಡಿ ಪರಿಶೀಲಿಸಿತು.

ಪತ್ರಿಕೆಯೊಂದಿಗೆ ಮಾತನಾಡಿದ ರಾಘವನ್‌, ಚಾರ್ಮಾಡಿ ಘಾಟ್‌ನಲ್ಲಿ ಕುಸಿದ ಮಣ್ಣು ತೆರವು ಕಾರ್ಯ ಭರದಿಂದ ಸಾಗಿದೆ. ಘಾಟ್‌ ರಸ್ತೆ ಬಂದ್‌ ಆದ ನಂತರವೂ 4 ಕಡೆ ಭೂಕುಸಿತ ಉಂಟಾಗಿದೆ. ಸತತ ಮಳೆ ತೆರವು ಕಾರ್ಯಚರಣೆಗೆ ಅಡ್ಡಿಯಾಗಿದ್ದು, ಮಳೆ ನಿಂತರೆ ಕೆಲಸ ಸರಾಗವಾಗಿ ನಡೆಯಲಿದೆ. ಆದರೆ, ಮಳೆ ನಿಲ್ಲದಿದ್ದರೆ ಸ್ವಲ್ಪ ವಿಳಂಭವಾಗಬಹುದು ಎಂದು ತಿಳಿಸಿದರು.

ಶಿರಾಡಿ ಘಾಟ್‌ ಕಾಮಗಾರಿ ಮುಗಿಯುತ್ತಾ ಬರುತ್ತಿದೆ. ಜುಲೈ 15ರ ಒಳಗೆ ಮುಗಿದರೆ ಅಲ್ಲಿಯ ರಸ್ತೆ ಸಂಚಾರಕ್ಕೆ ಮುಕ್ತ ಗೊಳಿಸಿ ಚಾರ್ಮಾಡಿ ಘಾಟ್‌ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟಿಕರಣಗೊಳಿಸಲು ಕಳೆದ ಮಾರ್ಚ್‌ ತಿಂಗಳಲ್ಲೇ ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಚಾರ್ಮಾಡಿ ರಸ್ತೆ ಕಿರಿದಾದ ಕಡೆಗಳಲ್ಲಿ 8 ಮೀಟರ್‌ವರೆಗೆ ವಿಸ್ತರಿಸಲಾಗುವುದು. ಯಾವುದಕ್ಕೂ ಸರಕಾರದ ಅನುಮೋದನೆಗಾಗಿ ಕಾಯಲಾಗುತ್ತಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಸನ್ನ ಮಾತನಾಡಿ, ಒಟ್ಟು 6 ಜೆಸಿಬಿಗಳು ಮೂರು ಟಿಪ್ಪರ್‌ ಲಾರಿಗಳಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ವಿಭಾಗದ ಅರಣ್ಯ ಸಿಬ್ಬಂದಿ ಸ್ಥಳದಲ್ಲಿದ್ದು ತೆರವು ಕಾರ್ಯಚರಣೆಗೆ ಕೈಜೋಡಿಸಿದ್ದಾರೆ ಎಂದರು. ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಅಧಿಕಾರಿ ರಮೇಶ್‌ಬಾಬು, ಕಾರ್ಯಪಾಲಕ ಅಭಿಯಂತರ ಸುಬ್ಬರಾಮ ಹೊಳ್ಳ ಮುಂತಾದವರು ಇದ್ದರು.

ಮಳೆ ಇಳಿಮುಖ
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಭಾಗದಲ್ಲಿ ಬುಧವಾರ ಮಳೆ ಇಳಿಮುಖವಾಗಿದೆ. ಆದರೆ, ಪ್ರಮುಖ ನದಿಗಳು, ಹಳ್ಳಕೊಳ್ಳಗಳಲ್ಲಿ ನೀರು ಉಕ್ಕಿ ಹರಿಯುವುದು ಮುಂದುವರಿದಿದೆ. ಬುಧವಾರ ಬೆಳಗಿನ ಜಾವ ಸತತ ಮಳೆ ಸುರಿಯಿತಾದರೂ ಬೆಳಗ್ಗೆಯಿಂದ ಆಗಾಗ್ಗೆ ಬಿಸಿಲು ಕಾಣಿಸಿಕೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ