ಆ್ಯಪ್ನಗರ

ಗೂಡಂಗಡಿ ತೆರವಿಗೆ ಶಾಸಕ ಸೂಚನೆ

ಪಟ್ಟಣದ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಆಸು-ಪಾಸಿನಲ್ಲಿ ತೆರೆದಿರುವ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಶಾಸಕ ಬೆಳ್ಳಿಪ್ರಕಾಶ್‌ ಸಂಬಂಧಪಟ್ಟ ಇಲಾಖಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Vijaya Karnataka 12 Jul 2019, 5:00 am
ಕಡೂರು : ಪಟ್ಟಣದ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಆಸು-ಪಾಸಿನಲ್ಲಿ ತೆರೆದಿರುವ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಶಾಸಕ ಬೆಳ್ಳಿಪ್ರಕಾಶ್‌ ಸಂಬಂಧಪಟ್ಟ ಇಲಾಖಾಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
Vijaya Karnataka Web legislators notice on clearance
ಗೂಡಂಗಡಿ ತೆರವಿಗೆ ಶಾಸಕ ಸೂಚನೆ


ತಾ.ಪಂ. ಸಭಾಂಗಣದಲ್ಲಿ ಗುರುವಾರ ತಮ್ಮ ಅಧ್ಯಕ್ಷ ತೆಯಲ್ಲಿ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಪಟ್ಟಣದ ನ್ಯಾಯಾಲಯ ಮುಂಭಾಗ, ಮೆಸ್ಕಾಂ, ಲೋಕೋಪಯೋಗಿ, ಅರಣ್ಯ, ಬಿಇಒ ಕಚೇರಿ, ಎಪಿಎಂಸಿ ವಾಣಿಜ್ಯ ಮಳಿಗೆಗಳು ಹಾಗೂ ಶಾಲಾ-ಕಾಲೇಜುಗಳ ಮುಂದೆ ಅನಧಿಕೃತವಾಗಿ ಗೂಡಂಗಡಿ ಮತ್ತು ಟೀಸ್ಟಾಲ್‌ಗಳು ಹೆಚ್ಚಿದ್ದು, ಇವುಗಳಿಂದ ಪಟ್ಟಣದ ಸ್ವಚ್ಛತೆಗೆ ಧÜಕ್ಕೆಯಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪುರಸಭೆ ಮತ್ತು ಪೊಲೀಸರ ಸಹಕಾರ ಪಡೆದು ಕೂಡಲೇ ತೆರವುಗೊಳಿಸಬೇಕೆಂದು ಸೂಚಿಸಿದರು.

ಪುರಸಭೆ ಮುಖ್ಯಾಧಿಕಾರಿ ಮಂಜಪ್ಪ ಪ್ರತಿಕ್ರಿಯಿಸಿ, ಮುಂದಿನ ಸೋಮವಾರದೊಳಗೆ ತೆರವುಗೊಳಿಸಲಾಗುವುದು ಎಂದು ಸಭೆ ಗಮನಕ್ಕೆ ತಂದರು. ಯಾವ ಇಲಾಖೆ ಕಚೇರಿ ಸುತ್ತ-ಮುತ್ತ ಗೂಡಂಗಡಿಗಳಿವೆ ಎಂದು ಆ ಇಲಾಖೆಯ ಮುಖ್ಯಸ್ಥರು ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತರಬೇಕೆಂದು ಶಾಸಕರು ತಿಳಿಸಿದರು.

ತಹಸೀಲ್ದಾರ್‌ ಕಚೇರಿ ಆವರಣವು ಸದಾ ವಾಹನಗಳ ನಿಲುಗಡೆಯಿಂದ ಕೂಡಿದ್ದು, ಜನಸಾಮಾನ್ಯರು, ರೈತಾಪಿವರ್ಗಕ್ಕೆ ಕಚೇರಿಯೊಳಗೆ ಬರಲು ಕಷ್ಟವಾಗಿದೆ ಎಂದ ಜಿ.ಪಂ. ಸದಸ್ಯ ಶರತ್‌ಕೃಷ್ಣಮೂರ್ತಿ, ಅತೀ ಹೆಚ್ಚಿನ ವಾಹನಗಳು ಉಪ ನೋಂದಣಾಧಿಕಾರಿಗಳ ಕಚೇರಿಗೆ ಸಂಬಂಧಪಟ್ಟವಾದ್ದರಿಂದ ಆ ಇಲಾಖೆಯನ್ನು ತಾಲೂಕು ಕಚೇರಿ ಆವರಣದಿಂದ ಬೇರೆಡೆಗೆ ಸ್ಥಳಾಂತರಿಸಲು ಒತ್ತಾಯಿಸಿದರು.

ಈ ಬಗ್ಗೆ ಚರ್ಚೆ ನಡೆದು ತಾಲೂಕು ಕಚೇರಿ ಪಕ್ಕದಲ್ಲೇ ಇರುವ ಪ್ರವಾಸಿ ಮಂದಿರಕ್ಕೆ ಇತರೆ ಇಲಾಖೆಗಳನ್ನು ತರುವುದರಿಂದ ಹೆಚ್ಚುವರಿ ಜಾಗ ಲಭ್ಯವಾಗಲಿದೆ ಎಂದು ಸಭೆಗೆ ತಿಳಿಸಲಾಯಿತು.

ಕಂದಾಯ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಸಂಧ್ಯಾಸುರಕ್ಷಾ ಕಾರ್ಡ್‌ ಮಾಡಿಸಿಕೊಡಲು ಐದಾರು ಸಾವಿರ ರೂ. ಲಂಚ ಕೇಳುತ್ತಿದ್ದಾರೆ ಜಿ.ಪಂ. ಸದಸ್ಯ ವಿಜಯಕುಮಾರ್‌ ಆರೋಪಿಸಿದರು. ಬಡವರ ಯೋಜನೆಗಳ ಕಾರ್ಯರೂಪಕ್ಕೆ ಅಧಿಕಾರಿಗಳು ಯಾವುದೇ ಆಸೆ-ಆಮಿಷÜವಿಲ್ಲದಂತೆ ಕೆಲಸ ಮಾಡಬೇಕು. ಸಾರ್ವಜನಿಕರು ಕಾನೂನಿಗೆ ವಿರುದ್ಧವಾಗಿ ಸರಕಾರದ ಸವಲತ್ತು ಪಡೆಯುವುದು ಅಪರಾಧ. ಇಂತಹ ಕೃತ್ಯಕ್ಕೆ ಸಹಕರಿಸುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಶಾಸಕರು ಎಚ್ಚರಿಸಿದರು.

ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಪಂಚನಹಳ್ಳಿಯಲ್ಲಿ ಮೇವು ಬ್ಯಾಂಕ್‌ ತೆರೆಯಲು ಜಿ.ಪಂ. ಸದಸ್ಯ ಕೆ.ಆರ್‌. ಮಹೇಶ್‌ಒಡೆಯರ್‌ ಒತ್ತಾಯಿಸಿದರು. ಪಶು ಇಲಾಖೆ ಸಹಾಯಕ ನಿರ್ದೇಶಕ ಕೆಂಚಪ್ಪ ಪ್ರತಿಕ್ರಿಯಿಸಿ, ಮೇವು ಸಂಗ್ರಹಕ್ಕೆ ಪಂಚನಹಳ್ಳಿ ಎಪಿಎಂಸಿ ಜಾಗ ಮಾತ್ರ ಲಭ್ಯವಿದೆ. ಟೆಂಡರ್‌ ಮೂಲಕ ಮೇವನ್ನು ಖರೀದಿಸಿ ನಂತರ ಮೇವು ಬ್ಯಾಂಕ್‌ ತೆರೆಯಲು ಸಿದ್ಧತೆ ಮಾಡಲಾಗುವುದು ಎಂದರು.

ಆಹಾರ ಇಲಾಖೆಯಲ್ಲಿ ಅನಿಲ ಭಾಗ್ಯ ಯೋಜನೆಯಡಿ 6120 ಅರ್ಜಿಗಳು ನೋಂದಣಿಯಾಗಿದ್ದು, ಇವುಗಳಲ್ಲಿ 3600 ಅರ್ಜಿಗಳು ಸರಿಯಾಗಿವೆ. ಇವುಗಳಲ್ಲಿ 1551 ಫಲಾನುಭವಿಗಳಿಗೆ ಸಂಪರ್ಕ ನೀಡಲಾಗಿದೆ. ಉಳಿದವುಗಳಿಗೆ ಡಿಡಿ ಬಂದ ನಂತರ ನೀಡಲಾಗುವುದು ಎಂದು ಇಲಾಖೆ ಅಧಿಕಾರಿ ಪ್ರಸಾದ್‌ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಯುಜಿಡಿ ಕಾಮಗಾರಿ, ನಲ್ಲಿಗಳಿಗೆ ಮೀಟರ್‌ ಅಳವಡಿಕೆ ವಿಷಯ ಸಭೆಯಲ್ಲಿ ಪ್ರಸ್ತಾಪವಾಯಿತು. ಆಧಾರ್‌ ಕಾರ್ಡ್‌ ಪಡೆಯಲು ಮತ್ತು ತಿದ್ದುಪಡಿ ಮಾಡಿಸಲು ಎನ್‌ಜಿಒಗಳ ನೆರವು ಪಡೆಯಬೇಕೆಂದು ಮಹೇಶ್‌ ಒಡೆಯರ್‌ ಮನವಿ ಮಾಡಿದರು.

ತಾ.ಪಂ.ಅಧ್ಯಕ್ಷೆ ಎನ್‌. ಭಾರತಿ ಪ್ರಹ್ಲಾದ್‌, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಬಸವರಾಜ್‌, ಜಿ.ಪಂ. ಸದಸ್ಯೆ ಲೋಲಾಕ್ಷಿಬಾಯಿ, ತಾ.ಪಂ. ಇಒ ಡಾ. ದೇವರಾಜನಾಯ್ಕ, ತಹಸೀಲ್ದಾರ್‌ ಉಮೇಶ್‌, ವೃತ್ತ ನಿರೀಕ್ಷ ಕ ಮಂಜುನಾಥ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ