ಚಿಕ್ಕಮಗಳೂರು: ಸಾಹಿತ್ಯ ಗರ್ಭದಿಂದ ಬರುವ ಸಿನೆಮಾಗಳಿಗೆ ವಿಶೇಷ ಅರ್ಥವಂತಿಕೆ ಇರುತ್ತದೆ ಎಂದು ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕಲಾ ಮಂದಿರದಲ್ಲಿ ಸುಗಮ ಸಂಗೀತ ಗಂಗಾದಿಂದ ಶನಿವಾರ ಆಯೋಜಿಸಿದ್ದ ಎಚ್.ಎಸ್.ವೆಂಕಟೇಶಮೂರ್ತಿ ಕತೆ-ಚಿತ್ರಕಥೆ-ಹಾಡು-ನಿರ್ದೇಶನದ 'ಹಸಿರು ರಿಬ್ಬನ್' ಚಲನಚಿತ್ರದ ಸಿ.ಡಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಿನೆಮಾದ ತಾಯಿ ಕೂಡ ಸಾಹಿತ್ಯವೆ. ಸಾಹಿತ್ಯದ ಹಿಂದೆ ಸಾವಿರ ವರ್ಷದ ಪರಂಪರೆ ಕೆಲಸ ಮಾಡುತ್ತಿದೆ. ಇಂದು ಯಾರೇ ಕಾವ್ಯ ರಚಿಸಿದರೂ ಪಂಪ, ಕುಮಾರವ್ಯಾಸ, ಬಸವಣ್ಣ, ಕುವೆಂಪು, ಬೇಂದ್ರೆ ಎಲ್ಲರೂ ಹಿನ್ನೆಲೆಯಲ್ಲಿರುತ್ತಾರೆ. ಸಾಹಿತ್ಯಕ್ಕೆ ಸುದೀರ್ಘ ಇತಿಹಾಸವಿದೆ. ಆದರೆ, ಸಿನೆಮಾ ಇತ್ತೀಚಿನದು. 30 ವರ್ಷಗಳ ಹಿಂದೆ ಚಿನ್ನಾರಿ ಮುತ್ತಾಕ್ಕಾಗಿ ಕತೆ-ಚಿತ್ರಕಥೆ-ಹಾಡು ಮಾಡಿದ್ದೆ. ಅದಕ್ಕೆ ಅದ್ಭುತ ಯಶಸ್ಸು ಸಿಕ್ಕಿ 25 ವಾರ ನಿರಂತರವಾಗಿ ಚಿತ್ರಮಂದಿರಗಳಲ್ಲಿ ಓಡಿತ್ತು. ಹಸಿರು ರಿಬ್ಬನ್ ಇಂತಹ ಊರುಗಳಲ್ಲಿ 50 ದಿನ ಓಡಿದರೂ ಸಾಕು ಎಂದರು.
ಕವಿ ಬಿ.ಆರ್.ಲಕ್ಷ್ಮಣರಾವ್ ಸಿ.ಡಿ ಲೋಕಾರ್ಪಣೆ ಮಾಡಿ ಮಾತನಾಡಿ, ಜೀವನಪ್ರೀತಿಯ ಮಳೆಯೇ ಈ ಸಿನೆಮಾದ ವಸ್ತು. ನವೋದಯ ಕಾಲದಲ್ಲಿ ಕುವೆಂಪು, ಮಾಸ್ತಿ, ಕಾರಂತ ದೈತ್ಯ ಪ್ರತಿಭೆ. ನವ್ಯೋತ್ತರದಲ್ಲಿ ವೆಂಕಟೇಶಮೂರ್ತಿ ಅಗಾಧ ಪ್ರತಿಭೆ. ಹಿಂದೆ ಚಿನ್ನಾರಿ ಮುತ್ತಲ್ಲಿ ಕೆಲಸ ಮಾಡಿದ್ದು, ಈಗ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ಆರ್.ಎಸ್.ಕುಮಾರ್, ಸಂಗೀತ ನಿರ್ದೇಶಕ ಉಪಾಸನಾ ಮೋಹನ್, ಅಧ್ಯಕ್ಷತೆ ವಹಿಸಿದ್ದ ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿದರು. ಎಐಟಿ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ, ನೃತ್ಯ ನಿರ್ದೇಶಕ ಚಿರಂಜೀವಿ, ನಾಯಕಿಯರಾದ ಸುಪ್ರಿಯಾ, ಚಿತ್ರಾ, ದ್ರವ್ಯಾ, ಕಲಾವಿದ ಸಂಪತ್ ಹಾಜರಿದ್ದರು.
ಸುಗಮ ಸಂಗೀತ ಗಂಗಾ ಉಪಾಧ್ಯಕ್ಷ ಸ.ಗಿರಿಜಾಶಂಕರ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಮತ್ ವಂದಿಸಿದರು. ಸುಮಾಪ್ರಸಾದ್ ನಿರೂಪಿಸಿದರು. ಅರ್ಚನಾರಾವ್, ಲಾಲಿತ್ಯ ಅಣ್ವೇಕರ್, ರೂಪಾಅಶ್ವಿನ್, ರೇಖಾಪ್ರೇಂಕುಮಾರ್, ಮಲ್ಲಿಗೆ ಸುಧೀರ್, ಎಂ.ಎಸ್.ಸುಧೀರ್ ಗೀತಗಾಯನ ನಡೆಸಿಕೊಟ್ಟರು.
ಸದಭಿರುಚಿ ಚಿತ್ರ ಮುಖ್ಯ
'ಚಿತ್ರಮಂದಿರಗಳ ಪ್ರದರ್ಶನಕ್ಕಿಂತ ಮನಸ್ಸಿನಲ್ಲಿ ಉಳಿಯುವ ಚಲನಚಿತ್ರಗಳು ಮುಖ್ಯ. ಸದಭಿರುಚಿ, ಮನುಷ್ಯ ಸಂಬಂಧ ಸೂಚಕ ಉತ್ತಮ ಚಿತ್ರಗಳನ್ನು ಕೊಡುವುದು ನನ್ನ ಆಶಯ. ಲೋಕವನ್ನೆಲ್ಲ ಮೆಚ್ಚಿಸಲು ಹೋದವ ಯಾರನ್ನೂ ಮೆಚ್ಚಿಸಲಾರ. ಆತ್ಮೀಯ ಬಳಗ ಒಪ್ಪಿದರೆ ಸಾಕು. ಒಳ್ಳೆಯ ಚಿತ್ರರಸಿಕರು, ವಿಮರ್ಶಕ ನೋಡುಗರ ಮನದಲ್ಲಿ ಎಷ್ಟು ದಿನ ಉಳಿಯುತ್ತದೆ ಎಂಬುದರ ಮೇಲೆ ಚಿತ್ರದ ಯಶಸ್ಸಿರುತ್ತದೆ. ಚಿತ್ರಮಂದಿರಗಳಲ್ಲಿ ಎಷ್ಟು ದಿನ ಓಡುತ್ತಿದೆ ಎಂಬುದನ್ನು ಆಧರಿಸಿ ಮೌಲ್ಯಮಾಪನ ಮಾಡಲು ಆಗುವುದಿಲ್ಲ'
-ಎಚ್.ಎಸ್.ವೆಂಕಟೇಶಮೂರ್ತಿ, ಸಾಹಿತಿ