ಆ್ಯಪ್ನಗರ

ಮಳೆಗೆ ಮನೆಯೊಂದಿಗೆ ಕೊಚ್ಚಿ ಹೋಗಿದೆ ಬದುಕು

ಅತಿವೃಷ್ಟಿಯಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿದ್ದ ನಿರಾಶ್ರಿತರು ತಮ್ಮ ಮನೆಗಳತ್ತ ಮುಖ ಮಾಡಿದ್ದು, ಮನೆಗಳ ಅವಶೇಷಗಳ ಮುಂದೆ ದಿಕ್ಕು ತೋಚದೇ ಕುಳಿತು ರೋದಿಸುತ್ತಿರುವ ದೃಶ್ಯ ಮನಕಲುಕುವಂತಿತ್ತು.

Vijaya Karnataka 14 Aug 2019, 5:00 am
ಕೊಟ್ಟಿಗೆಹಾರ : ಅತಿವೃಷ್ಟಿಯಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಕಾಳಜಿ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ನೆಲೆ ಕಂಡುಕೊಂಡಿದ್ದ ನಿರಾಶ್ರಿತರು ತಮ್ಮ ಮನೆಗಳತ್ತ ಮುಖ ಮಾಡಿದ್ದು, ಮನೆಗಳ ಅವಶೇಷಗಳ ಮುಂದೆ ದಿಕ್ಕು ತೋಚದೇ ಕುಳಿತು ರೋದಿಸುತ್ತಿರುವ ದೃಶ್ಯ ಮನಕಲುಕುವಂತಿತ್ತು.
Vijaya Karnataka Web IMG-20190813-WA0025


ಮಲೆಮನೆ, ದುರ್ಗದಹಳ್ಳಿ, ಮದುಗುಂಡಿ, ಆಲೇಕಾನ್‌, ಚನ್ನಡ್ಲು ಗ್ರಾಮದಲ್ಲಿ ಗುಡ್ಡ ಜರಿದು ಹಲವಾರು ಮನೆಗಳು ನೆಲಸಮವಾಗಿವೆ. ಮತ್ತೆ ಕೆಲ ಗ್ರಾಮಗಳಲ್ಲಿ ಪ್ರವಾಹದಿಂದ ಮನೆಗಳು ಕೊಚ್ಚಿ ಹೋಗಿ ನೆಲೆ ಕಳೆದುಕೊಂಡ ನಿರಾಶ್ರಿತರು ಕಾಳಜಿ ಕೇಂದ್ರ ಮತ್ತು ಸಂಬಂಧಿಕರ ಮನೆಗಳಲ್ಲಿ ಬೀಡು ಬಿಟ್ಟಿದ್ದರು.

ಬಾಳೂರು ದರ್ಬಾರ್‌ ಪೇಟೆಯ ಪ್ರೇಮ್‌ನಾಥ್‌ ಎಂಬುವವರ ಮನೆ ಸಂಪೂರ್ಣ ನೆಲಸಮವಾಗಿದ್ದು ಪ್ರವಾಹಕ್ಕೆ ಮಿಕ್ಸಿ, ಕಿಟಕಿ, ಬಾಗಿಲು ಮುಂತಾದ ವಸ್ತುಗಳು ಕೊಚ್ಚಿ ಹೋಗಿ ಮನೆ ಮುಂದಿನ ಗದ್ದೆಯಲ್ಲಿ ನಿಂತಿದೆ. ಉಟ್ಟಬಟ್ಟೆಯಲ್ಲೆ ಮನೆ ಬಿಟ್ಟಿದ್ದ ಪ್ರೇಮ್‌ ನಾಥ್‌ ಅವರ ಕುಟುಂಬ ಮಂಗಳವಾರ ಕುಸಿದ ಮನೆಯ ಬಳಿ ಬಂದಿದ್ದು ಮನೆಯನ್ನು ಸರಿಪಡಿಸಲು ಆಗದ ಮತ್ತು ಬೇರೆಡೆ ಕಟ್ಟಲು ಆಗದ ಅಸಹಾಯಕತೆಯಲ್ಲಿದ್ದರು. ಇದೇ ಪರಿಸ್ಥಿತಿ ಬಹುತೇಕ ಗ್ರಾಮಗಳ ನಿರಾಶ್ರಿತರದಾಗಿದ್ದು ಭವಿಷ್ಯದ ಬಗ್ಗೆ ಯಾವ ನಿರ್ಧಾರಕ್ಕೂ ಬರಲು ಸಾಧ್ಯವಾಗದೆ ಅತಂತ್ರ ಪರಿಸ್ಥಿತಿಯಲ್ಲಿ ಬದುಕುವಂತಾಗಿದೆ.

ಬಣಕಲ್‌, ಕೊಟ್ಟಿಗೆಹಾರ, ದುರ್ಗದಹಳ್ಳಿ, ಮಲೆಮನೆಯ ಕಾಳಜಿ ಕೇಂದ್ರದಲ್ಲಿರುವ ನಿರಾಶ್ರಿತರು ತಮ್ಮ ಮನೆಗಳತ್ತÜ ಹೋಗಿ ನೋಡಿಕೊಂಡು ಅಸಹಾಯಕರಾಗಿ ದಿಕ್ಕು ತೋಚದೇ ಮತ್ತೆ ಕಾಳಜಿ ಕೇಂದ್ರಕ್ಕೆ ಬರುತ್ತಿದ್ದಾರೆ.

ಅನ್ನದ ಬಟ್ಟಲ ತುಂಬ ಮರಳು ರಾಶಿ : ಮಲೆಮನೆ, ಬಾಳೂರು ದರ್ಬಾರ್‌ ಪೇಟೆ, ದುರ್ಗದಹಳ್ಳಿ ಮುಂತಾದ ಗ್ರಾಮಗಳಲ್ಲಿ ಪ್ರವಾಹದಿಂದ ಮರಳು ಭತ್ತದ ಗದ್ದೆಗಳ ಮೇಲೆ ನಿಂತಿದೆ. ಕಾಫಿಗಿಡ, ಅಡಕೆ ಮರಗಳು ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಮಲೆಮನೆಯಲ್ಲಿ ಚಿಕ್ಕ ಹಳ್ಳವೊಂದು ನದಿಯಂತೆ ಹರಿದ ಪರಿಣಾಮ ಹಳ್ಳದ ಇಕ್ಕೆಲದ ಕೃಷಿಭೂಮಿ ಕೊಚ್ಚಿ ಹೋಗಿ ಕಾಫಿ, ಅಡಕೆ ಗಿಡಗಳಿದ್ದ ಕುರುಹು ಇಲ್ಲದಂತಾಗಿದೆ. ಗುಡ್ಡಕುಸಿತದ ಕಾರಣದಿಂದ ಹಳ್ಳದ ಹರಿವಿನ ದಿಕ್ಕೆ ಬದಲಾಗಿದ್ದು ಕೃಷಿಭೂಮಿಯ ಮೇಲೆ ಹಳ್ಳ ಹರಿಯುತ್ತಿದೆ. ರೈತರು ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಕಳೆದುಕೊಂಡಿದ್ದು ಅನ್ನಕ್ಕಾಗಿ ಇನ್ನೊಬ್ಬರ ಬಳಿ ಕೈಚಾಚುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವೇ ಸರಿ.

ಹೆಮ್ಮಕ್ಕಿ ಕಮ್ಕೂಡಿನಲ್ಲಿ ಹುದುಗಿ ಹೋದ ಜಾನುವಾರು : ಹೆಮ್ಮಕ್ಕಿ ಸಮೀಪದ ಕಮ್ಕೂಡಿನ ಚಿನ್ನೆಗೌಡ ಅವರ ಮನೆ ಕುಸಿದು ಹೋಗಿದ್ದು, ಹಟ್ಟಿಯಲ್ಲಿ ಇದ್ದ ಎರಡು ಜಾನುವಾರುಗಳು ಮಣ್ಣಿನಡಿ ಹುದುಗಿ ಹೋಗಿವೆ. ಮನೆಯೊಳಗಿದ್ದ ನಾಯಿ, ಬೆಕ್ಕು ಮುಂತಾದ ಸಾಕುಪ್ರಾಣಿಗಳು ಮಣ್ಣಿನಡಿ ಸಿಲುಕಿ ಮೃತಪಟ್ಟಿವೆ. ಹೆಮ್ಮಕ್ಕಿ ಗ್ರಾಮದಲ್ಲಿ ಕುಸಿದ ಮನೆಯೊಳಗಿದ್ದವರನ್ನು ರಕ್ಷಿಸಲು ಜೀಪಿನಲ್ಲಿ ಹೋದ ಮಲೆನಾಡಿನ ಖ್ಯಾತ ರಾರ‍ಯಲಿಪಟು ವಿರೇಶ್‌ಗೌಡ ಎಂಬುವವರ ಜೀಪು ಮರ ಬಿದ್ದು ಜಖಂಗೊಂಡಿದ್ದು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ.

ಸಂತೋಷ್‌ ಮೃತದೇಹ ಹೊರ ತೆಗೆಯಲು ಕಾರ್ಯಾಚರಣೆ : ಹಿರೇಬೈಲ್‌ ಸಮೀಪದ ಚನ್ನಡ್ಲು ಗ್ರಾಮದ ಸಂತೋಷ್‌ ಎಂಬುವವರು ಗುಡ್ಡಕುಸಿತದಿಂದ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದು, ಆ ಸ್ಥಳಕ್ಕೆ ಹೋಗುವ ರಸ್ತೆಯುದ್ದಕ್ಕೂ ಬೃಹತ್‌ ಗಾತ್ರದ ಗುಡ್ಡ ಕುಸಿದಿರುವುದು ಸವಾಲಾಗಿದೆ. ಎರಡು ಇಟಾಚಿ ಯಂತ್ರಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ದುರ್ಗದಹಳ್ಳಿ ನಾಗಪ್ಪಗೌಡ ಅವರ ಮೃತದೇಹವೂ ಇದುವರೆಗೆ ಪತ್ತೆಯಾಗಿಲ್ಲ.

ಚನ್ನಡ್ಲು, ಹೆಮ್ಮಕ್ಕಿ ಮುಂತಾದ ಗ್ರಾಮಗಳಿಗೆ ವಿಧಾನಪರಿಷತ್‌ ಸದಸ್ಯ ಪ್ರಾಣೇಶ್‌, ತಾ.ಪಂ. ಅಧ್ಯಕ್ಷ ಕೆ.ಸಿ ರತನ್‌, ಕಳಸ ಹೋಬಳಿ ಬಿಜೆಪಿ ಅಧ್ಯಕ್ಷ ಗಿರೀಶ್‌, ಬಿಜೆಪಿ ಮುಖಂಡ ರಘು ಜನ್ನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿರಾಶ್ರಿತರಿಗೆ ಸಾರ್ವಜನಿಕರು ಉಚಿತವಾಗಿ ಊಟ ಉಪಹಾರ ನೀಡುತ್ತಿದ್ದು, ಕೆಳಗೂರು ಟಿ ಎಸ್ಟೇಟ್‌ನಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಣಕಲ್‌, ಕೊಟ್ಟಿಗೆಹಾರ, ದುರ್ಗದಹಳ್ಳಿ, ಬಿದರಹಳ್ಳಿಯ ಕಾಳಜಿ ಕೇಂದ್ರಗಳಿಗೆ ನಿರಂತರವಾಗಿ ದಾನಿಗಳಿಂದ ಅಗತ್ಯ ಸಾಮಗ್ರಿಗಳು ಹರಿದು ಬರುತ್ತಿದೆ. ಸೋಮವಾರ ಬಣಕಲ್‌ನ ಮೊಹದ್ದಿನ್‌ ಜುಮ್ಮಾ ಮಸೀದಿಯಿಂದ ಬಣಕಲ್‌ ಕಾಳಜಿ ಕೇಂದ್ರಕ್ಕೆ ಉಪಹಾರ, ಊಟ ನೀಡುವ ಮೂಲಕ ಬಕ್ರೀದ್‌ ಆಚರಿಸಲಾಯಿತು. ಬಣಕಲ್‌ ಕಾಳಜಿ ಕೇಂದ್ರದಲ್ಲಿದ್ದ ಮಲೆನಾಡಿನ ಕಾಫಿತೋಟಕ್ಕೆ ಕೂಲಿಗೆ ಬಂದಿದ್ದ ಹಾವೇರಿ ಮೂಲದ 80 ಮಂದಿ ನಿರಾಶ್ರಿತರು ಹಿಂದಿರುಗಿದ್ದು, ದುರ್ಗದಹಳ್ಳಿಯ 19 ಕಾರ್ಮಿಕರು ತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ