ಆ್ಯಪ್ನಗರ

ಕೋಡಿ ಬಿದ್ದ ರೈತರ ಜೀವನಾಡಿ

ಪೂರ್ಣ ಬರಿದಾಗಿದ್ದ ತಾಲೂಕಿನ ರೈತರ ಜೀವನಾಡಿ ಮದಗದ ಕೆರೆ ಈ ಬಾರಿ ಜುಲೈ ತಿಂಗಳಲ್ಲೇ ತುಂಬಿ ಕೋಡಿ ಬಿದ್ದಿದೆ.

Vijaya Karnataka 24 Jul 2018, 5:00 am
ಕಡೂರು: ಪೂರ್ಣ ಬರಿದಾಗಿದ್ದ ತಾಲೂಕಿನ ರೈತರ ಜೀವನಾಡಿ ಮದಗದ ಕೆರೆ ಈ ಬಾರಿ ಜುಲೈ ತಿಂಗಳಲ್ಲೇ ತುಂಬಿ ಕೋಡಿ ಬಿದ್ದಿದೆ.
Vijaya Karnataka Web CKM-23KDR2


ಸಾಮಾನ್ಯವಾಗಿ ಈ ಕೆರೆ ಶ್ರಾವಣ ಮಾಸದಲ್ಲಿ ಕೋಡಿ ಬೀಳುವುದು ವಾಡಿಕೆ. ಈ ಬಾರಿ ಮುಂಚಿತವಾಗಿಯೇ ಕೋಡಿ ಬಿದ್ದಿರುವುದು ರೈತರ ಮುಖದಲ್ಲಿ ಹರ್ಷ ತಂದಿದೆ. ಈ ಕೆರೆ ತುಂಬುವ ಹಾಗೂ ಕೋಡಿ ಬೀಳುವ ಬಗ್ಗೆ ಇದ್ದ ಹಲವಾರು ನಂಬಿಕೆಗಳು ತಲೆಕೆಳಗಾಗಿದೆ. ಕಾರಣ ತುಂತುರು ಮಳೆಯಲ್ಲಿ ಈ ಕೆರೆ ತುಂಬುತ್ತದೆ ಹಾಗೂ ಮಂಗಳವಾರ ಅಥವಾ ಶುಕ್ರವಾರ ಕೋಡಿ ಬೀಳುತ್ತದೆ ಎಂಬ ಪ್ರತೀತಿ ಇದೆ. ಆದರೆ ಈ ಬಾರಿ ಭಾನುವಾರ ಕೋಡಿ ಬಿದ್ದಿದೆ.

ಸಣ್ಣ ನೀರಾವರಿ ಇಲಾಖೆ ಉಸ್ತುವಾರಿಯಲ್ಲಿರುವ ಈ ಕೆರೆ ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿದ್ದು ಎಂಬ ಇತಿಹಾಸವಿದೆ. 1888ರ ದಾಖಲೆಗಳ ಪ್ರಕಾರ 6,700 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಕೆರೆ ಹೊಂದಿದೆ. ಕೆರೆಯಿಂದ ಹರಿಯುವ ನೀರು ಮುಂದಿನ 34 ಕೆರೆಗಳಿಗೆ ನೀರುಣಿಸಿ ನಂತರ ವಾಣಿವಿಲಾಸ ಸಾಗರವನ್ನು ತಲುಪುತಿತ್ತು ಎಂದು ಕೆಲ ಹಿರಿ ತಲೆಗಳು ಈಗಲೂ ಸ್ಮರಿಸುತ್ತಾರೆ.

ರಾಜ್ಯದ ಬೃಹತ್‌ ಕೆರೆಗಳಲ್ಲಿ ಮೂರನೇ ಸ್ಥಾನ ಪಡೆದಿರುವ ಮದಗದಕೆರೆ ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆಯಾಗಿ ನೀರಿನ ದುರ್ಬಳಕೆಯೂ ಹೆಚ್ಚಿದೆ. ಮುಂದಿನ ಸರಣಿ ಕೆರೆಗಳಿಗೆ ಈ ನೀರು ಹರಿಯುತ್ತಿಲ್ಲ. ಹತ್ತಿರದ ನಾಲ್ಕೈದು ಕೆರೆಗಳನ್ನು ಬಿಟ್ಟರೆ ಉಳಿದಂತೆ ಯಾವ ಕೆರೆಗಳಿಗೂ ಮದಗದಕೆರೆಯ ನೀರು ತಲುಪದಿರುವುದು ವಿಪರ್ಯಾಸವೇ ಸರಿ.

ಬರ ಪರಿಸ್ಥಿತಿಯಿಂದಾಗಿ ಕೆರೆ ತಂಬುವುದು ಕಷ್ಟವಾದ ಹಿನ್ನೆಲೆಯಲ್ಲಿ ಕೆರೆ ತುಂಬಿಸುವ ಒಂದೆರೆಡು ಯೋಜನೆಗಳು ಮೊಳಕೆಯೊಡೆದು ಅದಕ್ಕೆ ಹಿಂದಿನ ಶಾಸಕರು ಪ್ರಯತ್ನ ನಡೆಸಿದ್ದರು.

ಹೆಬ್ಬೆ ಹಳ್ಳದಿಂದ ಮದಗದಕೆರೆಯನ್ನು ತುಂಬಿಸುವ ಯೋಜನೆ ಮೊದಲು ಮೊಳಕೆಯೊಡೆದರೆ, ನಂತರ ಗೊಂದಿ ಅಣೆಕಟ್ಟು ಯೋಜನೆ ಮೂಲಕ ಕೆರೆ ತುಂಬಿಸುವ ಯೋಜನೆಗೆ ಹಿಂದಿನ ಶಾಸಕರು ಬೀಜ ಬಿತ್ತಿದರೂ ಪ್ರಯತ್ನದಲ್ಲೇ ನಿಂತಿದೆ.

ಮೂಲೆ ಯೋಜನೆ
ಮದಗದಕೆರೆಯನ್ನು ಸುಂದರ ಪ್ರೇಕ್ಷ ಣೀಯ ಸ್ಥಳವನ್ನಾಗಿ ರೂಪಿಸುವ ಯೋಜನೆ ಮೂಲೆ ಸೇರಿದೆ. ಕೆರೆ ಏರಿ ಮೇಲೆ ಜನರು ತಿರುಗಾಡಲು ದಾರಿ, ಕೆರೆಯ ಸುತ್ತ ಬ್ಯಾರಿಕೇಡ್‌, ವ್ಯಾಪಾರ ವಹಿವಾಟಿಗೆ ಅಂಗಡಿ ಮುಂಗಟ್ಟುಗಳು, ಮಕ್ಕಳು ಆಟವಾಡಲು ಆಟಿಕೆಗಳನ್ನೂ ಹೊಂದಿದ ಪಾರ್ಕ್‌ ಮುಂತಾದ ಅಭಿವೃದ್ಧಿ ಯೋಜನೆ ಈಗ್ಗೆ 8 ವರ್ಷದ ಹಿಂದೆಯೇ ಮೊಳಕೆಯೊಡೆದಿದ್ದರೂ ಕೆಲಸ ಮಾತ್ರ ಆಗಿಲ್ಲ.

ಪ್ರವಾಸೋಧ್ಯಮ ಇಲಾಖೆಯಿಂದ ಈ ಸಂಬಂಧ 50 ಲಕ್ಷ ಹಣ ಬಿಡುಗಡೆಯಾಗಿದ್ದರೂ ಅಭಿವೃದ್ಧಿ ಮಾತ್ರ ಕಾಣದಾಗಿದೆ. ಕೆರೆಯನ್ನು ಪ್ರವಾಸೋಧ್ಯಮ ನಿಟ್ಟಿನಲ್ಲಿ ಅಭಿವೃದ್ಧಿ ಮಾಡಲು ಒತ್ತಾಯವೂ ಇದೆ. ಕೆರೆ ನೀರನ್ನು ದುರ್ಬಳಕೆ ಮಾಡಿಕೊಳ್ಳದಂತೆ ತೂಬನ್ನು ಎತ್ತಿ ಪ್ರತಿವರ್ಷ ಪೊಲೀಸ್‌ ಪಹರೆಯಲ್ಲಿ ನೀರು ಹರಿಸುವ ಪದ್ದತಿಯೂ ಇದೆ. ಇದೆಲ್ಲಾ ತಪ್ಪಬೇಕಾದರೆ ಬದ್ಧತೆಯಿಂದ ಜನಪ್ರತಿನಿಧಿಗಳು ಕೆಲಸ ಮಾಡಬೇಕಿದೆ ಎಂಬುದು ರೈತರ ಅನಿಸಿಕೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ