ಆ್ಯಪ್ನಗರ

ಎಂಜಿಎಂ ಆಸ್ಪತ್ರೆ ರೋಗಗ್ರಸ್ತ ಸ್ಥಿತಿಗೆ ಇಚ್ಛಾಸಕ್ತಿ ಕೊರತೆ ಕಾರಣ

ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮೊದಲ ಬಾರಿಗೆ ತಾಲೂಕು ಪಂಚಾಯಿತಿಯ ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಸಿ.ರತನ್‌ ಅಧ್ಯಕ್ಷ ತೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಗಂಭೀರ ಚರ್ಚೆಗಳಾದವು.

Vijaya Karnataka 21 Jun 2018, 5:00 am
ಮೂಡಿಗೆರೆ : ವಿಧಾನಸಭೆ ಚುನಾವಣೆ ಮುಗಿದ ಬಳಿಕ ಮೊದಲ ಬಾರಿಗೆ ತಾಲೂಕು ಪಂಚಾಯಿತಿಯ ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಸಿ.ರತನ್‌ ಅಧ್ಯಕ್ಷ ತೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಗಂಭೀರ ಚರ್ಚೆಗಳಾದವು.
Vijaya Karnataka Web mgm hospital is due to a lack of passion for sickness
ಎಂಜಿಎಂ ಆಸ್ಪತ್ರೆ ರೋಗಗ್ರಸ್ತ ಸ್ಥಿತಿಗೆ ಇಚ್ಛಾಸಕ್ತಿ ಕೊರತೆ ಕಾರಣ


ಸಭೆಯಲ್ಲಿ ಸದಸ್ಯರು ಪಕ್ಷ ಭೇದ ಮರೆತು ಒಕ್ಕೂರಲಿನಿಂದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಗೋಣಿಬೀಡಿನ ಸಾರ್ವಜನಿಕ ಬೃಹತ್‌ ಕುಡಿಯುವ ನೀರು ಯೋಜನೆಯ ಕಾಮಗಾರಿಗೆ ಜಿಲ್ಲಾ ಪಂಚಾಯಿತಿಯಿಂದ ಬಿಡುಗಡೆಯಾದ 50 ಲಕ್ಷ ರೂ. ಅನುದಾನದಲ್ಲಿ 7 ವರ್ಷ ಕಳೆದರೂ ಕಾಮಗಾರಿ ಮುಗಿಸಿಲ್ಲ. ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನ 12 ಭಾಗದಲ್ಲಿ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಇದು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಕೂವೆ ಗ್ರಾಪಂ ವ್ಯಾಪ್ತಿಯಲ್ಲಿ 24 ಮನೆ ಮತ್ತು ಅಲ್ಲಿನ ಚರ್ಚ್‌ನ ವಿದ್ಯುತ್‌ ತಂತಿ ಮತ್ತು ಮೀಟರ್‌ ಸಂಪೂರ್ಣ ಸುಟ್ಟು ಹೋಗಿದೆ. ಅಧಿಕಾರಿಗಳು ಮನೆಯವರಿಂದಲೇ ಹಣ ವಸೂಲಿ ಮಾಡುವ ಹುನ್ನಾರ ನಡೆಸಿದ್ದಾರೆ. ಹೊಯ್ಸಳ ಕ್ರೀಡಾಂಗಣ ಕಾಮಗಾರಿಗೆ ಕಳೆದ 10 ವರ್ಷಗಳ ಹಿಂದೆ ರಾಜ್ಯ ಸರಕಾರದಿಂದ ಬಿಡುಗಡೆಯಾಗಿದ್ದ 75 ಲಕ್ಷ ರೂ. ಮೊತ್ತ ಅಧಿಕಾರಿಗಳ ನಿರ್ಲಕ್ಷ ್ಯದಿಂದ ಕಾಮಗಾರಿ ನಡೆಯದೆ ವಾಪಸಾಗಿದೆ. ಶುದ್ಧ ಗಂಗಾ ಕುಡಿಯುವ ನೀರನ ಯೋಜನೆಯಡಿ ಭೂ ಸೇನಾ ನಿಗಮದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಜೋಗಣ್ಣನಕೆರೆಯಲ್ಲಿ ವಿದ್ಯುತ್‌ ಕಂಬ ಬಿದ್ದು 3 ವರ್ಷಗಳಾದರೂ ಬದಲಿ ಕಂಬ ಅಳವಡಿಸಿಲ್ಲ. ಜಿ.ಹೊಸಹಳ್ಳಿಯಲ್ಲಿ ಟ್ರಾನ್ಸ್‌ಫಾರ್ಮರ್‌ ಅಳವಡಿಸದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಅಧಿಕಾರಿಗಳು ತಾಲೂಕು ಪಂಚಾಯಿತಿ ಸಭೆಗೆ ಹಾಜರಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಮಳೆಯಿಂದ ಹಾಳಾಗಿದೆ. ಅಧಿಕಾರಿಗಳು ನಡೆಸಿದ ಕಾಮಗಾರಿಗಳು ಕಳಪೆಯಾಗಿವೆ. ಇದರ ವೀಕ್ಷ ಣೆಗಾಗಿ ತಾ.ಪಂ. ಅಧ್ಯಕ್ಷ ರ ನೇತೃತ್ವದಲ್ಲಿ ಎಲ್ಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿಯೋಗದೊಂದಿಗೆ ತಾಲೂಕಿನ ಎಲ್ಲ ಭಾಗಕ್ಕೂ ತೆರಳಿ ಪರಿಶೀಲನೆ ನಡೆಸಬೇಕು. ಕೆಲ ಕಾಮಗಾರಿಗಳಿಗೆ ಅನುದಾನ ಬೇಕಾದಲ್ಲಿ ಸರಕಾರದ ಮುಂದೆ ನಿಯೋಗ ತೆರಳಿ ಕೇಳೋಣ ಎಂದು ಸದಸ್ಯ ರಂಜನ್‌ ಅಜಿತ್‌ಕುಮಾರ್‌ ಹೇಳಿದರು. ಈ ಕುರಿತಂತೆ ನಿರ್ಣಯ ಕೈಗೊಂಡ ಸಭೆ, ಜುಲೈ 5 ಮತ್ತು 7ರಂದು ನಿಯೋಗ ತೆರಳಿ ಪರಿಶೀಲನೆ ನಡೆಸಲು ನಿರ್ಧರಿಸಿತು. ಎಂ.ಜಿ.ಎಂ.ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ತಾ.ಪಂ. ಅಧ್ಯಕ್ಷ ರತನ್‌ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಾತನಾಡಿದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅಶ್ವಥ್‌ ಬಾಬು, ನೂರು ಹಾಸಿಗೆಗಳ ಬೃಹತ್‌ ಎಂಜಿಎಂ ಆಸ್ಪತ್ರೆಯಲ್ಲಿ ಐಸಿಯು ಡಯಾಲಿಸಿಸ್‌ ಸೇರಿದಂತೆ ಎಲ್ಲ ವಿಭಾಗಗಳೂ ಇವೆ. ಅನುದಾನವೂ ಸಾಕಷ್ಟಿದೆ. 13 ಮಂದಿ ವೈದ್ಯರೂ ಇದ್ದಾರೆ. ಒಬ್ಬ ವೈದ್ಯ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಅವರ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಗೆ ವರದಿ ನೀಡಿದ್ದೇನೆ. ಆಸ್ಪತ್ರೆಯಲ್ಲಿ ನಿರೀಕ್ಷೆಯಂತೆ ಕೆಲಸ ನಡೆಯುತ್ತಿಲ್ಲ. ಸಣ್ಣಪುಟ್ಟ ಶೀತ, ಜ್ವರಕ್ಕಷ್ಟೇ ಚಿಕಿತ್ಸೆ ನೀಡಲಾಗುತ್ತಿದೆ. ಹೆರಿಗೆಗೆಂದು ಬರುವವರನ್ನು ಬೇರೆಡೆಗೆ ಕಳುಹಿಸಲಾಗುತ್ತಿದೆ. ಸಣ್ಣಮಟ್ಟದ ಶಸ್ತ್ರಚಿಕಿತ್ಸೆಯನ್ನೂ ಮಾಡುತ್ತಿಲ್ಲ. ವೈದ್ಯರುಗಳಿಗೆ ಮತ್ತು ಸಿಬ್ಬಂದಿಗೆ ಇಚ್ಛಾಸಕ್ತಿಯಿಲ್ಲ. ಆದ್ದರಿಂದ ಕೆಲಸ ಮಾಡಲು ಮನಸ್ಸಿಲ್ಲದವರು ವರ್ಗಾವಣೆ ಮಾಡಿಕೊಂಡು ಹೋಗಿ ಎಂದಿದ್ದೇನೆ. ಆಸ್ಪತ್ರೆಯ ಅವ್ಯವಸ್ಥೆಯನ್ನು ಹಂತ ಹಂತವಾಗಿ ರೋಗಿಗಳ ಸೇವೆಗೆ ಸಜ್ಜುಗೊಳಿಸಲಾಗುವುದು. ತನ್ನ ಮೇಲೆ ಒತ್ತಡ ಬಾರದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.
ಗೋಣಿಬೀಡಿನ ಬೃಹತ್‌ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪೂರ್ಣಗೊಳಿಸಿಲ್ಲ. ಅಲ್ಲಿನ ಜನ ನಮ್ಮನ್ನು ರಸ್ತೆಯಲ್ಲಿ ತಿರುಗಾಡಲು ಬಿಡುತ್ತಿಲ್ಲ. ಅಧಿಕಾರಿಗಳು ಪ್ರತಿ ಸಭೆಯಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಇನ್ನು ಅಧಿಕಾರಿಗಳ ಸಬೂಬು ಕೇಳಲು ನಾವು ಸಿದ್ಧರಿಲ್ಲ. ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಉಪಾಧ್ಯಕ್ಷೆ ಸವಿತಾ ರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್‌ಕುಮಾರ್‌ ಎಂದು ಎಚ್ಚರಿಸಿದರು. ಅಧ್ಯಕ್ಷ ರತನ್‌ ಅವರು ಜಿ.ಪಂ. ಎಇಇ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು 15 ದಿನಗಳಲ್ಲಿ ಕಾಮಗಾರಿ ಮುಗಿಸುವಂತೆ ಗಡುವು ನೀಡಿದರು.
ಐಟಿಡಿಪಿ ಚಿಕ್ಕಮಗಳೂರು ಕಚೇರಿಯಲ್ಲಿ ನೌಕರ ಭೀಮಯ್ಯ ಎಂಬುವವರು ತಾಲೂಕಿನ ಎಲ್ಲ ಐಟಿಡಿಪಿ ಕಾಮಗಾರಿಗಳನ್ನು ನಿಯಂತ್ರಿಸುತ್ತಿದ್ದಾರೆ. ಇದರ ಬಗ್ಗೆ ವರದಿ ನೀಡಲಾಗುವುದು. ಕೂವೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಳೆಯಿಂದ 24 ಮನೆಗಳ ಮತ್ತು ಸ್ಥಳೀಯ ಚರ್ಚ್‌ನ ಮೀಟರ್‌ ಬಾಕ್ಸ್‌ ಸುಟ್ಟುಹೋಗಿದೆ. ಅದನ್ನು ಸಬೂಬು ಹೇಳದೆ ಸರಿಪಡಿಸಿ ಎಂದು ಮೆಸ್ಕಾಂ ಪ್ರಭಾರ ಎಇಇ ಮಂಜುನಾಥ್‌ ಅವರಿಗೆ ಅಧ್ಯಕ್ಷ ರತನ್‌ ಸೂಚಿಸಿದರು. ಕಳಪೆ ಕಾಮಗಾರಿ ಮತ್ತು ಪರ್ಸಂಟೇಜ್‌ ಪಡೆಯುವ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ