ಆ್ಯಪ್ನಗರ

ರೈತರ ಬಗ್ಗೆ ಮೋದಿ ಕುಚೋದ್ಯ: ದೇವೇಗೌಡ

ಲೋಕಸಭೆ ಅಧಿವೇಶನದಲ್ಲಿ ಪ್ರತಿ ಪಕ್ಷ ದ ನಾಯಕರು ರೈತರ ಬಗ್ಗೆ ಪ್ರಶ್ನೆ ಕೇಳಿದರೆ ಅದಕ್ಕೆ ಉತರಿಸುವ ಸೌಜನ್ಯವು ಪ್ರಧಾನಿಗಿಲ್ಲ. ಅಂತಹವರು ರೈತರ ಬಗ್ಗೆ ಮಾತನಾಡುತ್ತಿರುವುದು ಕುಚೋದ್ಯದ ಸಂಗತಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

Vijaya Karnataka 12 Apr 2019, 5:00 am
ಕಡೂರು : ಲೋಕಸಭೆ ಅಧಿವೇಶನದಲ್ಲಿ ಪ್ರತಿ ಪಕ್ಷ ದ ನಾಯಕರು ರೈತರ ಬಗ್ಗೆ ಪ್ರಶ್ನೆ ಕೇಳಿದರೆ ಅದಕ್ಕೆ ಉತರಿಸುವ ಸೌಜನ್ಯವು ಪ್ರಧಾನಿಗಿಲ್ಲ. ಅಂತಹವರು ರೈತರ ಬಗ್ಗೆ ಮಾತನಾಡುತ್ತಿರುವುದು ಕುಚೋದ್ಯದ ಸಂಗತಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.
Vijaya Karnataka Web CKM-11KDR2


ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟದ ಹಾಸನ ಲೋಕಸಭೆ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಪರ ಗುರುವಾರ ನಡೆದ ಬಹಿರಂಗ ಚುನಾವಣೆ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮ ರಾಜಕೀಯ ಜೀವನದುದ್ದಕ್ಕೂ ರೈತರ ಪರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕಡೂರು ವಿಧಾನಸಭೆ ಕ್ಷೇತ್ರದ ಎಮ್ಮೆದೊಡ್ಡಿ ಭಾಗದ ರೈತರ ಸಮಸ್ಯೆ ಕುರಿತಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸಿದ ಹೋರಾಟವು ತಮಗೆ ನೆನಪಿದೆ. ಆದರೆ ರೈತರ ಸಮಸ್ಯೆ ಕುರಿತಂತೆ ಲಘುವಾಗಿ ಮಾತನಾಡುವುದು ದುರದೃಷ್ಟಕರ ಎಂದು ಬಣ್ಣಿಸಿದರು.

ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಮಾತನಾಡಿ, ಕಡೂರು ತಾಲೂಕು ಸತತ ಬರದಿಂದ ತತ್ತರಿಸಿ ಹೋಗಿದೆ. ಕ್ಷೇತ್ರಕ್ಕೆ ಪೂರಕವಾದ ಗೊಂದಿ ಅಣೆಕಟ್ಟು ಯೋಜನೆ, ಹೆಬ್ಬೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಮುಂತಾದವು ಕಾರ್ಯರೂಪಕ್ಕೆ ಬರಲು ದೇವೇಗೌಡ, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಒಟ್ಟಾಗಿ ದುಡಿದರೆ ಸಾಧ್ಯವಿದೆ ಎಂದು ಹೇಳಿದರು.

ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಮಾತನಾಡಿ, ತಮಗೆ ಶಕ್ತಿ ತುಂಬಲು ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಪಕ್ಷ ಗಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಆಗಮಿಸಿರುವುದು ಸಂತಸ ತಂದಿದೆ. ಜಾತ್ಯತೀತ ಸಿದ್ಧಾಂತ ಮತ್ತು ತಮ್ಮ ಸಿದ್ಧಾಂತ ಎರಡೂ ಒಂದೇ ಆಗಿರುವುದರಿಂದ ಈ ನಾಯಕರ ಸಂಗಮ ತಮಗೆ ಆನೆಬಲ ತಂದುಕೊಟ್ಟಿದೆ ಎಂದರು.

ಸಾವಿರಾರು ಜನ ಸೇರಿದ್ದ ಸಭೆಯಲ್ಲಿ ಸಿದ್ದರಾಮಯ್ಯ ಅವರ ಭಾಷಣದ ವೇಳೆ ಕಾರ್ಯಕರ್ತರೊಬ್ಬರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿ ಆನಂದ್‌ ಪರವಾಗಿ ಪ್ರಚಾರಕ್ಕೆ ಬರಲಿಲ್ಲ ಎಂದು ಕೂಗಿದರು. ತಕ್ಷಣ ಸಿದ್ದರಾಮಯ್ಯ ಅವರು ವ್ಯಗ್ರರಾಗಿ ಆತನ ಕಪಾಳಕ್ಕೆ ಹೊಡೆಯಿರಿ, ಆನಂದ್‌ಗೆ ಟಿಕೆಟ್‌ ಕೊಟ್ಟವನೇ ನಾನು ಎಂದರು.

ವಿಧಾನಪರಿಷತ್‌ ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಬೋಜೇಗೌಡ, ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕರಾದ ಕೆ.ಬಿ. ಮಲ್ಲಿಕಾರ್ಜುನ್‌, ಜಿ.ಎಚ್‌.ಶ್ರೀನಿವಾಸ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಡಿ.ಎಲ್‌.ವಿಜಯ್‌ಕುಮಾರ್‌, ಕೆ.ಎಸ್‌.ಆನಂದ್‌, ಕೆ.ಎಂ.ಕೆಂಪರಾಜು, ವನಮಾಲ ದೇವರಾಜ್‌, ಶರತ್‌ಕೃಷ್ಣಮೂರ್ತಿ, ಲೋಲಾಕ್ಷಿಬಾಯಿ, ಕೆ.ಎಂ.ವಿನಾಯಕ್‌, ಚಂದ್ರಪ್ಪ, ಬಾಸೂರು ಚಂದ್ರಮೌಳಿ, ಆಸಂದಿ ಕಲ್ಲೇಶ್‌ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ