ಆ್ಯಪ್ನಗರ

ಕೊರೊನಾಗೆ ಜಗ್ಗದ ಕೃಷಿ ಚಟುವಟಿಕೆ: ರೈತರಿಗೆ ಆಶಾಭಾವ ಮೂಡಿಸಿದ ಮಾನ್ಸೂನ್‌ ಪೂರ್ವ ಮಳೆ

ಕೊರೊನಾ ಭಯದಿಂದ ತಮ್ಮ ಸಹಜ ಕೃಷಿಚಟುವಟಿಕೆಗಳಿಂದ ಬಿಡುವು ಪಡೆದಿದ್ದ ಗ್ರಾಮೀಣ ರೈತರ ಕುಟುಂಬಗಳಲ್ಲಿ ಕಳೆದ ಎರಡು ವಾರಗಳಲ್ಲಿ ಬಂದ ಅಲ್ಪ ಪ್ರಮಾಣದ ಮಳೆ ಹೊಸ ಭರವಸೆ ಹುಟ್ಟಿಸಿದ್ದು, ಕೃಷಿ ಭೂಮಿ ಹದಗೊಳಿಸುವ ಕಾರ್ಯ ಚುರುಕಿನಿಂದ ಸಾಗಿದೆ.

Vijaya Karnataka Web 2 Jun 2020, 10:55 am
ಬೀರೂರು ಹೋಬಳಿ ಬಹುತೇಕ ಮಳೆಯಾಶ್ರಿತ ಕೃಷಿ ಉತ್ಪಾದನೆ ಅವಲಂಬಿಸಿದೆ. ಸತತ ಬರಗಾಲದ ಸುಳಿಗೆ ಸಿಲುಕಿ ಸಾಲದ ಬಲೆಯಲ್ಲಿ ಬದುಕು ಸವೆಸುವ ಈ ಭಾಗದ ರೈತರು ಮುಂಗಾರು ಬಂತೆಂದರೆ ಮತ್ತೊಮ್ಮೆ ತಮ್ಮ ಕೃಷಿ ಹಂಬಲದ ಬದುಕಿಗೆ ಸಿಲುಕಿ ರೈತಸಂಪರ್ಕ ಕೇಂದ್ರ ಮತ್ತು ರಸಗೊಬ್ಬರ ಬಿತ್ತನೆ ಬೀಜಗಳನ್ನು ಸಾಲಸೂಲ ಮಾಡಿಯಾದರೂ ಖರೀದಿಸಿ ತಂದು ಉಳುಮೆ ಮಾಡಿ ಪರೀಕ್ಷೆಗೊಳಪಡಿಸಿಕೊಳ್ಳುವುದು ನಿತ್ಯ ನಿರಂತರ ಬದುಕಿನ ಸಹಜ ಪ್ರಕ್ರಿಯೆಯಾಗಿದೆ. ಈ ಬಾರಿ ಕೊರೊನಾ ರೈತರ ಸಂಕಷ್ಟವನ್ನು ಹೆಚ್ಚಿಸಿದ್ದು ಬೆಳೆ ಚಿಂತೆ ಒಂದೆಡೆಯಾದರೆ, ಮಾರುಕಟ್ಟೆ ಚಿಂತೆ ಸಹ ಹೆಚ್ಚಾಗಿ ಕಾಡಲಾರಂಭಿಸಿದೆ. ಆದಾಗ್ಯೂ ಕೃಷಿ ಚಟುವಟಿಕೆಗಳು ಮಾತ್ರ ಉತ್ಸುಕತೆಯಿಂದಲೇ ಆರಂಭವಾಗಿವೆ.
Vijaya Karnataka Web monsoon season agriculture activities pick up amid coronavirus lockdown in chikmagalur
ಕೊರೊನಾಗೆ ಜಗ್ಗದ ಕೃಷಿ ಚಟುವಟಿಕೆ: ರೈತರಿಗೆ ಆಶಾಭಾವ ಮೂಡಿಸಿದ ಮಾನ್ಸೂನ್‌ ಪೂರ್ವ ಮಳೆ


​ಬಿತ್ತನೆಗೆ ಸಿದ್ಧತೆ

ಪಟ್ಟಣದ ಉಪಮಾರುಕಟ್ಟೆ ಪ್ರದೇಶದಲ್ಲಿರುವ ರೈತಸಂಪರ್ಕ ಕೇಂದ್ರ ರೈತರ ಬೆಳೆಗೆ ಪೂರಕವಾಗಿ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಂಡಿದೆ. ಅಂದಾಜು 7885 ಹೆಕ್ಟೆರ್‌ ಪ್ರದೇಶಕ್ಕೆ ಮುಂಗಾರು ಹಂಗಾಮಿಗೆ ಬೇಕಾಗುವ ಬಿತ್ತನೆ ಬೀಜ ವಿತರಣೆಗೆ ಮುಂದಾಗಿದ್ದು ಈಗಾಗಲೇ 11 ಕ್ವಿಂಟಾಲ್‌ ಮೆಕ್ಕೆಜೋಳ, 3 ಕ್ವಿಂಟಾಲ್‌ ಸೂರ್ಯಕಾಂತಿ, 80 ಕ್ವಿಂಟಾಲ್‌ ಶೇಂಗಾ, 2ಕ್ವಿಂಟಾಲ್‌ ಹೆಸರು, 1ಕ್ವಿಂಟಾಲ್‌ ಉದ್ದು, 30ಕೆಜಿ ತೊಗರಿ ಹಾಗೂ 1.2ಕ್ವಿಂಟಾಲ್‌ ಹಲಸಂದೆಯನ್ನು ವಿತರಿಸಿದೆ. ಸರಕಾರದ ರಿಯಾಯಿತಿ ದರದಲ್ಲಿ ರೈತರು ಈಗಾಗಲೇ ಬೀಜ ಖರೀದಿಸಿದ್ದು ಸಮರ್ಪಕ ಪ್ರಮಾಣದಲ್ಲಿ ರಸಗೊಬ್ಬರ ಪೂರೈಕೆ ಸಹ ಇದ್ದು ಹದಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ.

ಭರದಿಂದ ಸಾಗುತ್ತಿದೆ ಉಳುಮೆ ಕಾರ್ಯ

ಬಹುತೇಕ ಹೊಲಗಳಲ್ಲಿ ಉಳುಮೆ ಕಾರ್ಯ ಭರದಿಂದ ಸಾಗಿದೆ. ತೆಂಗು ಮತ್ತು ಅಡಕೆ ಬೆಳೆಗಾರರ ಜೀವನಾಡಿ ಮದಗದಕೆರೆ ಕೆರೆ ರಿಪೇರಿಯ ಹಿನ್ನೆಲೆಯಲ್ಲಿ ಕೆರೆಯ ನೀರು ಸಂಪೂರ್ಣ ಖಾಲಿ ಮಾಡಲಾಗಿದೆ. ಕೊರೊನಾ ಹೊಡೆತಕ್ಕೆ ಅಡಕೆ ಮತ್ತು ತೆಂಗಿನ ಉತ್ಪನ್ನಗಳು ಸಂಕಷ್ಟ ಎದುರಿಸುತ್ತಿವೆ.

ಸಾಂಪ್ರಾದಾಯಿಕ ಕೃಷಿ ಉಳುಮೆ

ಬೀರೂರು ಹೋಬಳಿಯ ಬಹುತೇಕ ಗ್ರಾಮಗಳ ರೈತರು ಪ್ರತಿಬಾರಿ ತಮ್ಮ ಸಾಂಪ್ರಾದಾಯಿಕ ಕೃಷಿ ಮೂಲಕ ಉಳುಮೆ ಮತ್ತು ಬಿತ್ತನೆ ಕಾರ್ಯ ನಡೆಸಿದ್ದು ರೈತ ಸಂಪರ್ಕಕೇಂದ್ರ ರೈತರ ಕೃಷಿ ಚಟುವಟಿಕೆಗಳಿಗೆ ಸರಕಾರದ ವತಿಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ದೊರಕಿಸಿ ಕೊಡುವಲ್ಲಿ ಶ್ರಮಿಸುತ್ತಿದೆ. ಕೀಟನಾಶಕ ಮತ್ತು ಕೃಷಿ ಪರಿಕರಗಳನ್ನು ವಿತರಿಸಲು ಕ್ರಮವಹಿಸುತ್ತಿದೆ.

ಸೋಮಲಿಂಗಪ್ಪ, ಕೃಷಿ ಅಧಿಕಾರಿ ರೈತಸಂಪರ್ಕ ಕೇಂದ್ರ, ಬೀರೂರು

ಭರವಸೆಯಿಂದ ಉಳುಮೆ

ಪ್ರತಿ ಬಾರಿ ಆರಂಭದ ಮಳೆ ನಮಗೆ ಕೃಷಿ ಚಟುವಟಿಕೆಗೆ ಪ್ರೇರಣೆ ನೀಡುತ್ತಿದ್ದರೂ ನಂತರ ಮುಂಗಾರು ಕೈಕೊಟ್ಟು ಬೆಳೆನಾಶ ಮತ್ತು ಬೆಲೆಯಿಲ್ಲದೇ ಕಂಗಾಲಾಗುವಂತೆ ಮಾಡುತ್ತಿದೆ. ಈ ಬಾರಿ ನಂಬಿರುವ ಕೃಷಿ ನಮ್ಮನ್ನು ರಕ್ಷಿಸುವುದೆಂಬ ಭರವಸೆಯಿಂದ ಉಳುಮೆ ಮಾಡುತ್ತಿದ್ದೇವೆ.

ಬಸವರಾಜಪ್ಪ, ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ