ಆ್ಯಪ್ನಗರ

ತೇಜಸ್ವಿ ಪ್ರತಿಷ್ಟಾನದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಟಾನದದಲ್ಲಿ ಗಾಂಧಿ ವಿಚಾರಧಾರೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.

Vijaya Karnataka 29 May 2019, 5:00 am
ಕೊಟ್ಟಿಗೆಹಾರ : ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಟಾನದದಲ್ಲಿ ಗಾಂಧಿ ವಿಚಾರಧಾರೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.
Vijaya Karnataka Web CKM-28ktg2


ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಟಾನ ಹಾಗೂ ಬೆಂಗಳೂರಿನ ಎಂ.ಚಂದ್ರಶೇಖರ ಪ್ರತಿಷ್ಟಾನದ ವತಿಯಿಂದ ಮೇ 31ರಿಂದ ಮೂರು ದಿನಗಳ ಕಾಲ ವಿಚಾರ ಸಂಕಿರಣ ನಡೆಯಲಿದೆ. ಮೇ 31 ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ.ಚಿ ರಮೇಶ್‌ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿಷ್ಟಾನದ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಅಧ್ಯಕ್ಷ ತೆ ವಹಿಸುವರು. ಅಂದು ಮದ್ಯಾಹ್ನ 2 ಗಂಟೆಗೆ ಮೊದಲ ಗೋಷ್ಠಿ ನಡೆಯಲಿದೆ. ಮಂಡ್ಯದ ಅಗ್ರಿಕಲ್ಚರ್‌ ಇಂಡಿಯಾದ ಪ್ರಧಾನ ಸಂಪಾದಕ ಕುಮಾರ ರೈತ ಅವರು ಗಾಂಧಿ ವಿಚಾರಧಾರೆ ಪರಿಸರ ಮತ್ತು ವಿಜ್ಞಾನ ವಿಷಯದ ಬಗ್ಗೆ ಮಾತನಾಡುವರು. ತುಮಕೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಅವರು ಗಾಂಧಿ ಮತ್ತು ಸಮಕಾಲೀನರ ನಡುವಿನ ತಾತ್ವಿಕ ಸಂಘರ್ಷ ವಿಷಯದ ಕುರಿತು ಮಾತನಾಡಲಿದ್ದಾರೆ. ಹುಬ್ಬಳ್ಳಿಯ ಚಿಂತಕರಾದ ವೈ.ಶ್ರೀ ನಿವಾಸ್‌ ಅವರು ಗಾಂಧಿ ರಾಜಕೀಯ ವಿಚಾರಗಳು ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ಎಂಬ ವಿಷಯವಾಗಿ ಮಾತನಾಡಲಿದ್ದಾರೆ.

ಸಂಜೆ 6 ಗಂಟೆಗೆ ಕವಿಗಳು ಹಾಗೂ ಚಿಂತಕರಾದ ನಾಗತಿಹಳ್ಳಿ ರಮೇಶ್‌ ಅವರ ಅಧ್ಯಕ್ಷ ತೆಯಲ್ಲಿ ಗಾಂಧಿ: ಕನ್ನಡ ಕಾವ್ಯ ಸಂದನೆ ಕಾರ್ಯಕ್ರಮ ನಡೆಯಲಿದೆ.

ಜೂನ್‌ 1ರಂದು ಎರಡನೇ ಗೋಷ್ಟಿ ನಡೆಯಲಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಚ್‌.ಡಿ. ಪ್ರಶಾಂತ್‌ ಅಭಿವೃದ್ಧಿ ಮತ್ತು ಗ್ರಾಮ ಸ್ವರಾಜ್ಯ ಪರಿಕಲ್ಪನೆ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕರಾದ ಡಾ.ಕೆ ಕೇಶವಶರ್ಮ ಅವರು ಸ್ವಾತಂತ್ರ್ಯ, ಸಮಾನತೆ ಮತ್ತು ಗಾಂಧಿ ವಿಚಾರಧಾರೆ ವಿಷಯದ ಕುರಿತು ಮಾತನಾಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಮೂರನೇ ಗೋಷ್ಟಿ ನಡೆಯಲಿದ್ದು ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕರಾದ ಎನ್‌.ಎಸ್‌. ಶಂಕರ್‌ ಪತ್ರಿಕೋದ್ಯಮಿಯಾಗಿ ಗಾಂಧಿ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಹೈದರಾಬಾದ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ವಿ.ಬಿ ತಾರಕೇಶ್ವರ ಅವರು ಹಿಂದ್‌ ಸ್ವರಾಜ್‌ ಮತ್ತು ಆಧುನೀಕತೆಯ ಮುಖಾಮುಖಿ ವಿಷಯದ ಬಗ್ಗೆ ಮಾತನಾಡಲಿದ್ದಾರೆ.ಸಂಜೆ 6 ಗಂಟೆಗೆ ಪ್ರಸ್ತುತ ಸಂದರ್ಭದಲ್ಲಿ ಗಾಂಧಿ ವಿಷಯದ ಬಗ್ಗೆ ಯುವ ಸಂವಾದ ನಡೆಯಲಿದೆ. ಜೂನ್‌ 2 ರಂದು ಹೆಗ್ಗೋಡಿನ ಚಿಂತಕರಾದ ಪ್ರಸನ್ನ ಗ್ರಾಮರಾಜ್ಯವೇ ರಾಮರಾಜ್ಯ ವಿಷಯದ ಬಗ್ಗೆ ಮಾತನಾಡಲಿದ್ದಾರೆ. ಚಿಂತಕರಾದ ಡಾ.ಎಚ್‌.ಎಸ್‌ ಅನುಪಮ, ಗಾಂಧಿ ವಿಚಾರಧಾರೆ ಮಹಿಳಾ ಪ್ರಶ್ನೆಗಳು ಎಂಬ ವಿಷಯವಾಗಿ ಮಾತನಾಡಲಿದ್ದಾರೆ.ಮಧ್ಯಾಹ್ನ 2-30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ನಿತ್ಯಾನಂದ ಬಿ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ. ರಾಜೇಶ್ವರಿ ತೇಜಸ್ವಿ ಮತ್ತು ಪ್ರೋ ಶಿವರಾಜ್‌ ಭಾಗವಹಿಸಲಿದ್ದಾರೆ ಎಂದು ವಿಚಾರ ಸಂಕಿರಣದ ಸಂಚಾಲಕ ಡಾ. ನರಸಿಂಹಮೂರ್ತಿ ಹಳೇಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ