ಆ್ಯಪ್ನಗರ

ಪಾತಾಳ ಸೇರಿದ ಈರುಳ್ಳಿ ಬೆಲೆ, ಬೀದಿಗೆ ಬಿದ್ದ ಬೆಳೆಗಾರರಿಂದ ಮಂಗಳವಾರ ಅಜ್ಜಂಪುರ ಬಂದ್‌

ಅಜ್ಜಂಪುರ ತಾಲೂಕಿನ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ ದರ ಕುಸಿತದಿಂದ ರೈತರು ಅಕ್ಷರಶಃ ಬೀದಿಗೆ ಬಿದ್ದಿದ್ದು, ಸರಕಾರದ ಗಮನ ಸೆಳೆಯಲು ಮಂಗಳವಾರ ಅಜ್ಜಂಪುರ ಬಂದ್‌ಗೆ ಕರೆ ನೀಡಿದ್ದಾರೆ.

Vijaya Karnataka 20 Sep 2021, 9:08 pm

ಹೈಲೈಟ್ಸ್‌:

  • ಪಾತಾಳ ಸೇರಿದ ಈರುಳ್ಳಿ ಬೆಲೆ, ಬೀದಿಗೆ ಬಿದ್ದ ಬೆಳೆಗಾರರು
  • ಮಂಗಳವಾರ ಅಜ್ಜಂಪುರ ಬಂದ್‌ಗೆ ರೈತರ ಕರೆ
  • ಕಳೆದ ವರ್ಷ ಈರುಳ್ಳಿಗೆ ಭಾರಿ ಬೆಲೆ ಬಂದಿದ್ದರಿಂದ ಈ ಬಾರಿ ಹೆಚ್ಚು ಈರುಳ್ಳಿ ಬಿತ್ತನೆ ಮಾಡಿದ್ದ ರೈತರು
  • ವರ್ಷದಿಂದ ವರ್ಷಕ್ಕೆ ಈರುಳ್ಳಿ ಬೆಳೆಯುವ ಖರ್ಚು ಏರುತ್ತಿದ್ದು, ದರ ಮಾತ್ರ ಕುಸಿತಗೊಂಡಿದೆ


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Onion Crop Destroy
ಅಜ್ಜಂಪುರ (ಚಿಕ್ಕಮಗಳೂರು): ತಾಲೂಕಿನ ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ ಬೆಳೆ ದರ ಕುಸಿತದಿಂದ ರೈತರು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಅಜ್ಜಂಪುರ, ಶಿವನಿ, ಹಿರೇನಲ್ಲೂರು, ಗಿರಿಯಾಪುರ ಭಾಗದಲ್ಲಿ ಹೆಚ್ಚು ಈರುಳ್ಳಿ ಬೆಳೆದ ರೈತರು ಕಂಗಾಲಾಗಿದ್ದಾರೆ.
ಬೆಂಗಳೂರಿನ ಪ್ರಮುಖ ಯಶವಂತಪುರ ಮಾರುಕಟ್ಟೆಗೆ ಮಾರಲು ತೆಗೆದುಕೊಂಡು ಹೋದ ರೈತ ಖಾಲಿ ಕೈಲಿ ಬರುತ್ತಿದ್ದಾನೆ. ಜುಲೈ-ಆಗಸ್ಟ್‌ ತಿಂಗಳಲ್ಲಿ ಅತಿಯಾದ ಮಳೆ ಪರಿಣಾಮ ಈರುಳ್ಳಿಗೆ ಮಜ್ಜಿಗೆ, ತಳ, ಕೊಳೆ, ನುಲೆ ರೋಗ ತಗುಲಿ ಅವು ಗೆಡ್ಡೆಯನ್ನು ಹಿಗ್ಗದಂತೆ ಮತ್ತು ನೆಲದಲ್ಲೇ ಕೊಳೆಯುವಂತೆ ಮಾಡಿದೆ.

ಕಳೆದ ವರ್ಷ ಈರುಳ್ಳಿಗೆ ಭಾರಿ ಬೆಲೆ ಬಂದಿದ್ದರಿಂದ ರೈತರು ಈ ಬಾರಿ ಹೆಚ್ಚು ಈರುಳ್ಳಿ ಬಿತ್ತನೆ ಮಾಡಿದ್ದರು. ವರ್ಷದಿಂದ ವರ್ಷಕ್ಕೆ ಈರುಳ್ಳಿ ಬೆಳೆಯುವ ಖರ್ಚು ಏರುತ್ತಿದ್ದು, ದರ ಮಾತ್ರ ಕುಸಿತಗೊಂಡಿದೆ.

ಕಣ್ಣೀರ ತರಿಸುವ ‘ಈರುಳ್ಳಿ’ಗೀಗ ಕೊಳೆ ರೋಗ; 12 ಸಾವಿರ ಹೆಕ್ಟೇರ್‌ ಪ್ರದೇಶದ ಬೆಳೆನಾಶ
1 ಎಕರೆಯಲ್ಲಿ ಈರುಳ್ಳಿ ಬೆಳೆಯಲು 40 ಸಾವಿರ ರೂ. ಖರ್ಚು ಬರುತ್ತದೆ. ರೈತರಿಗೆ ದುಪ್ಪಟ್ಟು ಬೆಲೆ ಸಿಕ್ಕರೆ ಮಾತ್ರ ಆತನ ಮುಖದಲ್ಲಿ ನಗು ಮೂಡುತ್ತದೆ. ಕೆಜಿಗೆ ಒಂದು ರೂ. ಕೇಳುವ ವರ್ತಕ, ದಲ್ಲಾಳಿಗಳಿಂದ ರೈತರು ಭ್ರಮನಿರಸನಗೊಂಡಿದ್ದಾರೆ.

ಹೊಲದಲ್ಲಿರುವ ಈರುಳ್ಳಿ ಬೆಳೆ ಹೊರತೆಗೆಯಲು ಸಾವಿರಾರು ರೂ. ಖರ್ಚು ಬರುತ್ತದೆ. ಹಾಗೆಯೇ ಬಿಟ್ಟರೇ ಮುಂದಿನ ಬೆಳೆಗೆ ಜಮೀನು ಹಸನಾಗುವುದಿಲ್ಲ. ಇದರಿಂದ ಹಿಂಗಾರು ಬೆಳೆಗಳಾದ ಕಡಲೆ, ಬಿಳಿ ಜೋಳ ಬೆಳೆಯಲು ತೊಂದರೆಯಾಗುತ್ತದೆ. ರೈತರು ಒಮ್ಮೊಮ್ಮೆ ಲಾಟರಿ ಬೆಳೆ ಈರುಳ್ಳಿ ಬೆಳೆದು ಲಕ್ಷಾಂತರ ರೂ. ಲಾಭ ಪಡೆದುಕೊಂಡರೆ ಇನ್ನೊಮ್ಮೆ ನಯಾಪೈಸೆ ನಿರೀಕ್ಷಿಸದೆ ತಿಪ್ಪೆಗೆ ಬಿಸಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೈ ಹಿಡಿಯದ ಆಲೂ

ಈ ಬಾರಿ ಶಿವನಿ, ಬಗ್ಗವಳ್ಳಿ ಭಾಗದ ರೈತರು ಹೆಚ್ಚು ಆಲೂಗೆಡ್ಡೆ ಬೆಳೆದಿದ್ದಾರೆ. ಶಿವನಿಯಲ್ಲಿ 250 ಲೋಡ್‌ ಬೀಜ, ಬಗ್ಗವಳ್ಳಿಯಲ್ಲಿ 100 ಲೋಡ್‌ ಆಲೂಗೆಡ್ಡೆ ಬೀಜ ಬಿತ್ತಿದ್ದಾರೆ. ಜಾವೂರು ತಿಮ್ಮಾಪುರ ಗ್ರಾಮದಲ್ಲಿ ರೈತ ಸುರೇಶ್‌ 1 ಎಕರೆಯಲ್ಲಿ 7 ಲೋಡ್‌ ಆಲೂಗೆಡ್ಡೆ ಬೆಳೆದಿದ್ದು, ಇದಕ್ಕೂ ದರ ಕುಸಿತದ ಬಿಸಿ ಎದುರಾಗಿದೆ.


ಮಂಗಳವಾರ ಬಂದ್‌, ಸಹಕರಿಸಲು ಮನವಿ

ಈರುಳ್ಳಿ ಮತ್ತು ಆಲೂಗೆಡ್ಡೆ ಬೆಳೆಗಳಿಗೆ ಬೆಂಬಲ ಬೆಲೆ ಅಥವಾ ಆರ್ಥಿಕ ಭದ್ರತೆ ನೀಡುವುದರ ಜತೆಗೆ ರಫ್ತು ಮಾಡುವಂತೆ ಆಗ್ರಹಿಸಿ ಸೆ.21ರಂದು ಅಜ್ಜಂಪುರ ಬಂದ್‌ಗೆ ಕರೆ ನೀಡಲಾಗಿದೆ.

ಈರುಳ್ಳಿ ಮತ್ತು ಆಲೂಗೆಡ್ಡೆಯನ್ನು ಯಥೇಚ್ಛ ಬೆಳೆದಿದ್ದಾರೆ. ಆದರೆ, ದರ ಕುಸಿತ ರೈತರನ್ನು ಕಂಗಾಲಾಗಿ ಮಾಡಿದೆ. ಕೆಲ ರೈತರು ಎತ್ತಿನಗಾಡಿ, ಟ್ರ್ಯಾಕ್ಟರ್‌ನಲ್ಲಿ ರಸ್ತೆ ಬದಿ, ಹಳ್ಳ ಕೊಳ್ಳಗಳಿಗೆ ಸುರಿಯುತ್ತಿದ್ದಾರೆ. ರೈತರು ವಿವಿಧ ಸಂಘ ಸಂಸ್ಥೆ, ಬ್ಯಾಂಕು, ಮನೆಯಲ್ಲಿದ್ದ ಅಷ್ಟಿಷ್ಟು ಒಡವೆ ಬಂಗಾರ ಅಡವಿಟ್ಟು ಸಾಲ ಮಾಡಿ ಈರುಳ್ಳಿ-ಆಲೂಗೆಡ್ಡೆ ಬೆಳೆದು ಅತಂತ್ರರಾಗಿದ್ದಾರೆ. ನೂರೆಂಟು ಸಮಸ್ಯೆಗಳಿದ್ದರೂ ರೈತರು ಅದನ್ನು ಲೆಕ್ಕಕ್ಕೆ ಪರಿಗಣಿಸದೆ ಸಾಲ ಮಾಡಿದ್ದಾನೆ. ಸರಕಾರದ ಗಮನ ಸೆಳೆಯಲು ಅಜ್ಜಂಪುರ ಬಂದ್‌ ಮಾಡುತ್ತಿದ್ದೇವೆ. ದಯವಿಟ್ಟು ಸಹಕರಿಸಿ ಎಂದು ಚನ್ನಾಪುರದ ಕೃಷಿಕ ಸಿ.ಎಸ್‌. ಸಿದ್ದೇಗೌಡ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ