ಆ್ಯಪ್ನಗರ

ಟಿಪ್ಪುಜಯಂತಿಗೆ ವಿರೋಧ, ಬಿಜೆಪಿ ಕಾರ್ಯಕರ್ತರ ಬಂಧನ

ಸರಕಾರದಿಂದ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸಿ ನಿಷೇಧಾಜ್ಞೆ ನಡುವೆಯೂ ಶುಕ್ರವಾರ ಪ್ರತಿಭಟನೆಗೆ ಮುಂದಾದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

Vijaya Karnataka 10 Nov 2018, 5:00 am
ಚಿಕ್ಕಮಗಳೂರು : ಸರಕಾರದಿಂದ ಟಿಪ್ಪು ಜಯಂತಿ ಆಚರಿಸುವುದನ್ನು ವಿರೋಧಿಸಿ ನಿಷೇಧಾಜ್ಞೆ ನಡುವೆಯೂ ಶುಕ್ರವಾರ ಪ್ರತಿಭಟನೆಗೆ ಮುಂದಾದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
Vijaya Karnataka Web CKM-9RUDRAP5A


ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕೃತಿ ಹಿಡಿದು ರಾಜ್ಯ ಸರಕಾರ ಹಾಗೂ ಟಿಪ್ಪು ಸುಲ್ತಾನ್‌ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟಿಸಲು ಬಿಜೆಪಿ ಕಾರ್ಯಕರ್ತರು ಮುಂದಾದರು.

ಕೂಡಲೆ ಡಿವೈಎಸ್‌ಪಿ ಚಂದ್ರಶೇಖರ್‌ ಹಾಗೂ ನಗರ ವೃತ್ತ ನಿರೀಕ್ಷ ಕ ನಿರಂಜನ್‌ ಪ್ರತಿಭಟನಾಕಾರರ ಬಳಿ ತೆರಳಿ 144 ಸೆಕ್ಷ ನ್‌ ಅನ್ವಯ ನಿಷೇಧಾಜ್ಞೆ ಇದೆ. ಈ ಸಂದರ್ಭ ಪ್ರತಿಭಟನೆ ನಡೆಸುವಂತಿಲ್ಲ ಎಂದರು. ಆದರೆ,ಇದಕ್ಕೆ ಒಪ್ಪದೆ ಪ್ರತಿಭಟನೆಗೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಪೊಲೀಸರು ಬಂಧಿಸಲು ಮುಂದಾದ ಕೂಡಲೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರತಿಕೃತಿಯನ್ನು ಬಿಜೆಪಿ ಕಚೇರಿ ಮುಂಭಾಗದ ರಸ್ತೆಯಲ್ಲಿಯೇ ಇಟ್ಟು ಅದನ್ನು ದಹಿಸಿದ ಕಾರ್ಯಕರ್ತರು, ಸಮ್ಮಿಶ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಸರ್ಪಗಾವಲು : ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುವ ವಿಚಾರ ತಿಳಿದಿದ್ದ ಪೊಲೀಸ್‌ ಇಲಾಖೆ ಬಿಜೆಪಿ ಕಚೇರಿ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಿತ್ತು. ಬಿಜೆಪಿ ಕಚೇರಿ ಇರುವ ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದ ಪೊಲೀಸರು ರಸ್ತೆ ದಾಟಿ ಯಾರೂ ಹೊರ ಹೋಗದಂತೆ ವ್ಯವಸ್ಥೆ ಮಾಡಿದ್ದರು. ಪ್ರತಿಭಟನಾಕಾರರಿಗಿಂತಲೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಕುಂಟ,ಕುರುಡು ಸರಕಾರ : ಇದಕ್ಕೂ ಮೊದಲು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಿ.ಆರ್‌.ಪ್ರೇಮ್‌ಕುಮಾರ್‌, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕುಂಟ ಮತ್ತು ಕುರುಡರ ಸರಕಾರ ಎಂದು ಟೀಕಿಸಿದರು. ಸರಕಾರದಲ್ಲಿ ಒಮ್ಮತವಿಲ್ಲ ಎಂಬುದನ್ನು ಟಿಪ್ಪು ಜಯಂತಿಯ ಆಹ್ವಾನ ಪತ್ರಿಕೆಯೇ ತಿಳಿಸುತ್ತದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೆಸರೇ ಇಲ್ಲ. ಬಹುಜನರ ವಿರೋಧದ ನಡುವೆಯೂ ಸರಕಾರದದಿಂದ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಇದೊಂದು ವೋಟ್‌ ಬ್ಯಾಂಕ್‌ ರಾಜಕಾರಣ ಎಂದು ದೂರಿದರು.

ಜಿ.ಪಂ. ಸದಸ್ಯ ಬೆಳವಾಡಿ ರವೀಂದ್ರ, ನಗರಸಭಾ ಉಪಾಧ್ಯಕ್ಷ ಸುಧೀರ್‌, ನಗರ ಬಿಜೆಪಿ ಅಧ್ಯಕ್ಷ ಕೋಟೆ ರಂಗನಾಥ್‌ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ಧಿ ವೇಣುಗೋಪಾಲ್‌, ಜಿ.ಪಂ. ಸದಸ್ಯ ಹಿರಗಯ್ಯ, ತಾ.ಪಂ.ಅಧ್ಯಕ್ಷ ಜಯಣ್ಣ, ಮುಖಂಡರಾದ ಮಧುಕುಮಾರ್‌ ರಾಜ್‌ ಅರಸ್‌, ಕೆ.ಎಸ್‌.ಪುಷ್ಪರಾಜ್‌, ವೀಣಾಶೆಟ್ಟಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ