ಆ್ಯಪ್ನಗರ

ನಮ್ಮದು ರೈತಪರ ಸರಕಾರ: ಬಂಡೆಪ್ಪ

ನಮ್ಮದು ರೈತರ, ಬಡವರ ಪರವಾದ ಸರಕಾರವಾಗಿದ್ದು ವಿವಿಧ ಯೋಜನೆಗಳ ಮೂಲಕ ರೈತರ ಅಭಿವೃದ್ದಿಗೆ ನಮ್ಮ ಶ್ರಮಿಸುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದರು.

Vijaya Karnataka 12 Oct 2018, 5:00 am
ಬಣಕಲ್‌ : ನಮ್ಮದು ರೈತರ, ಬಡವರ ಪರವಾದ ಸರಕಾರವಾಗಿದ್ದು ವಿವಿಧ ಯೋಜನೆಗಳ ಮೂಲಕ ರೈತರ ಅಭಿವೃದ್ದಿಗೆ ನಮ್ಮ ಶ್ರಮಿಸುತ್ತಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಹೇಳಿದರು.
Vijaya Karnataka Web CKM-11KTG1


ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ, ಗೋದಾಮು, ವಾಣಿಜ್ಯ ಸಂಕೀರ್ಣ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

22 ಲಕ್ಷ ರೈತರು ಸಹಕಾರ ಸಂಘದ ಜತೆಗೆ ಗುರುತಿಸಿಕೊಂಡಿದ್ದಾರೆ. 15 ಲಕ್ಷ ರೈತರಿಗೆ ಸಹಕಾರ ಇಲಾಖೆಯಿಂದ ಸಾಲ ನೀಡಲು ನಿರ್ಧರಿಸಲಾಗಿದೆ. ರಾಜ್ಯಕ್ಕೆ ನಬಾರ್ಡ್‌ನಿಂದ ಕೇವಲ 35ರಿಂದ 40ರಷ್ಟು ಅನುದಾನ ಬರುತ್ತಿದ್ದು, ಶೇ.75ರಷ್ಟು ಅನುದಾನ ನೀಡಬೇಕೆಂದು ಮುಖ್ಯಮಂತ್ರಿಯವರು ಕೇಂದ್ರಕ್ಕೆ ಮನವಿ ಮಾಡಿದ್ದಾರೆ ಎಂದರು.

ರೈತರ ಪ್ರಶ್ನೆ ಬಂದಾಗ ಕೇಂದ್ರ ಸರಕಾರ, ರಾಜ್ಯ ಸರಕಾರ ಎಂಬ ತಾರತಮ್ಯ ಮಾಡದೆ ಎಲ್ಲರೂ ರೈತರ ಏಳಿಗೆಗೆ ಶ್ರಮಿಸಬೇಕಿದೆ. 5300 ಸಹಕಾರ ಸಂಘಗಳನ್ನು ಗಣಕೀಕೃತ ಮಾಡುವ ಅಗತ್ಯವಿದ್ದು ಆ ನಿಟ್ಟಿನಲ್ಲಿ ಕಾರ್ಯ ಪ್ರಾರಂಭಿಸಲಾಗಿದೆ ಎಂದರು.

ನಮ್ಮಲ್ಲಿ ಕಾಡುಹಂದಿ, ನಿಮ್ಮಲ್ಲಿ ಕಾಡಾನೆ ಕಾಟ!


ಮಲೆನಾಡಿನಲ್ಲಿ ಕಾಡಾನೆ ಉಪಟಳ ಮಿತಿಮೀರಿದ್ದು, ಹಾವಳಿ ತಡೆಗೆ ರಾಜ್ಯ ಸರಕಾರ ಗಮನ ಹರಿಸಲಿ ಎಂದು ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್‌ ಅವರ ಗಮನ ಸೆಳೆದಾಗ, 'ನಿಮ್ಮಲ್ಲಿ ಕಾಡಾನೆ ಕಾಟವಿರುವಂತೆ ನಮ್ಮ ಉತ್ತರ ಕರ್ನಾಟಕದ ಹೊಲಗಳಿಗೆ ಕಾಡುಹಂದಿಗಳ ಕಾಟವಿದೆ' ಎಂದು ಸಚಿವರು ಹೇಳಿದರು. ಅದಕ್ಕೆ ಸಭಿಕರೊಬ್ಬರು ಕಾಡುಹಂದಿಯನ್ನು ಮಲೆನಾಡಿಗೆ ಕಳಿಸಿ ಕಾಡಾನೆಯನ್ನು ಉತ್ತರ ಕರ್ನಾಟಕಕ್ಕೆ ಕಳಿಸೋಣ ಎಂದಾಗ ಸಭಿಕರಲ್ಲಿ ನಗೆಯ ಅಲೆ ಎದ್ದಿತ್ತು. ನಂತರ ಶಾಸಕ ಕಾಡಾನೆ ಹಾವಳಿ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಕಾಫಿ, ಅಡಕೆ, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. ಈ ಭಾಗದ ರೈತರು ಸಂಕಷ್ಟದಲ್ಲಿದ್ದು ರಾಜ್ಯ, ಕೇಂದ್ರ ಸರಕಾರಗಳು ಒಟ್ಟಾಗಿ ನೆರವಿಗೆ ಬರಬೇಕಾಗಿದೆ. ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಘೋಷಿಸಲು ಮತ್ತು ವಿವಿಧ ಬೇಡಿಕೆಗಳಿಗಾಗಿ ಕಾಫಿಬೆಳೆಗಾರರೊಂದಿಗೆ ನಿಯೋಗ ಹೋಗಲಾಗಿದ್ದು, ಸರಕಾರಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಬೋಜೆಗೌಡ ಮಾತನಾಡಿ, ಕಾಫಿ ಬೆಳೆಗೆ ಕನಿಷ್ಟ ಬೆಂಬಲ ಬೆಲೆ ಕೊಡುವ ಅಗತ್ಯವಿದೆ. ಖಾಸಗಿ ಕಂಪನಿಗಳ ಬೆಳೆವಿಮೆಯನ್ನು ರೈತರು ಕಡ್ಡಾಯವಾಗಿ ಮಾಡಿಸಬೇಕೆಂದು ನಿಯಮ ರೂಪಿಸಲಾಗಿದ್ದು ಅದರ ಬದಲು ಸರಕಾರಿ ಸಾಮ್ಯದ ವಿಮಾ ಕಂಪನಿಗಳ ಮೂಲಕ ಬೆಳೆವಿಮೆ ಮಾಡಿಸುವ ಕುರಿತು ಸರಕಾರ ಗಮನ ಹರಿಸಬೇಕಿದೆ ಎಂದರು.

ಚಿಕ್ಕಮಗಳೂರು ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಲ್‌. ಧರ್ಮೆಗೌಡ, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್‌ ಸದಸ್ಯ ಎಂ.ಕೆ ಪ್ರಾಣೇಶ್‌, ಮಾಜಿ ಶಾಸಕರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಬಣಕಲ್‌ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ ಗಜೇಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶಾಂತ್‌ ಮಾತನಾಡಿದರು.

ಬಿ.ಎಲ್‌.ಸಂದೀಪ್‌, ಎಂ.ನರೇಂದ್ರ, ಕೆ.ಎನ್‌. ರಾಜಣ್ಣ, ಬಿ.ಎಂ. ಸತೀಶ್‌, ಬಣಕಲ್‌ ಶಾಮಣ್ಣ, ಕೆ.ಸಿ.ರತನ್‌, ಎನ್‌.ಜೆ. ಜೈರಾಮ್‌. ಕೇಶವ, ವೀಣಾ ಉಮೇಶ್‌, ಪ್ರಮೀಳಾ, ಕೃಷ್ಣೆಗೌಡ ಬಿ.ಎಂ, ಬಿ.ವಿ.ಸುರೇಶ್‌, ರವಿಕಲಾ ಪೈ, ಲಕ್ಷ್ಮಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ