ಆ್ಯಪ್ನಗರ

ಜನರೇ ನಿಂತು ಮಾಡಿಸಿದರು ಕೆಲಸ

ಕಳಪೆ ಕಾಮಗಾರಿಯನ್ನು ನಿಲ್ಲಿಸಿದ ಗ್ರಾಮಸ್ಥರು ಕಾರ್ಮಿಕರಿಗೆ ಎಲ್ಲಿಯೂ ಈ ರೀತಿಯ ಕಳಪೆ ಕೆಲಸ ಮಾಡದಂತೆ ಪಾಠ ಮಾಡಿ, ಜನರೇ ನಿಂತು ರಸ್ತೆ ಗುಂಡಿಗಳನ್ನು ಮುಚ್ಚಿಸಿ ಡಾಂಬರೀಕರಣ ಮಾಡಿಸಿದ ಘಟನೆ ಮಂಜಿನಕಟ್ಟೆ ಸಮೀಪ ಸೋಮವಾರ ನಡೆಯಿತು.

Vijaya Karnataka 18 Dec 2018, 5:00 am
ಕಳಸ : ಕಳಪೆ ಕಾಮಗಾರಿಯನ್ನು ನಿಲ್ಲಿಸಿದ ಗ್ರಾಮಸ್ಥರು ಕಾರ್ಮಿಕರಿಗೆ ಎಲ್ಲಿಯೂ ಈ ರೀತಿಯ ಕಳಪೆ ಕೆಲಸ ಮಾಡದಂತೆ ಪಾಠ ಮಾಡಿ, ಜನರೇ ನಿಂತು ರಸ್ತೆ ಗುಂಡಿಗಳನ್ನು ಮುಚ್ಚಿಸಿ ಡಾಂಬರೀಕರಣ ಮಾಡಿಸಿದ ಘಟನೆ ಮಂಜಿನಕಟ್ಟೆ ಸಮೀಪ ಸೋಮವಾರ ನಡೆಯಿತು.
Vijaya Karnataka Web CKM-17kls1


ಕಳೆದ ವರ್ಷ ಇದೇ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ಆ ಸಂದರ್ಭದಲ್ಲೂ ಕಳಪೆ ಕಾಮಗಾರಿ ಪ್ರಶ್ನಿಸಿದ್ದ ಗ್ರಾಮಸ್ಥರು ಹಾಕಿರುವ ಡಾಂಬರನ್ನು ಕೀಳಿಸಿ ಹೊಸದಾಗಿ ಡಾಂಬರೀಕರಣ ಮಾಡಿಸಿದ್ದರು. ಆದರೂ ಕೇವಲ ಎರಡೇ ತಿಂಗಳಿನಲ್ಲಿ ಮಂಜಿನಕಟ್ಟೆ ಸಮೀಪ ದೊಡ್ಡ ಹೊಂಡ ನಿರ್ಮಾಣವಾಗಿತ್ತು. ಆ ಸಂದರ್ಭ ಗ್ರಾಮಸ್ಥರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಹೊಂಡ ಮುಚ್ಚಿ ಮಳೆಗಾಲ ಕಳೆದ ಕೂಡಲೇ ಡಾಂಬರು ಹಾಕಿ ಮುಚ್ಚುವ ಭರವಸೆಯನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡಿದ್ದರು.

ಅದರಂತೆ ಕಾಮಗಾರಿ ನಿರ್ವಹಣೆಗೆ ಸೋಮವಾರ ಬೆಳಗ್ಗೆ ಕಾರ್ಮಿಕರು ಬಂದು ಹೊಂಡಕ್ಕೆ ಡಸ್ಟ್‌ ಹಾಕಿ ಮೇಲ್ಭಾಗಕ್ಕೆ ಡಾಂಬರು ಹಾಕಿ ಹೋಗುವ ಹಂತದಲ್ಲಿದ್ದರು. ಕೂಡಲೇ ಗ್ರಾಮಸ್ಥರು ಒಟ್ಟಾಗಿ ಕಾಮಗಾರಿ ಬಗ್ಗೆ ಪ್ರಶ್ನಿಸಿ ಇದನ್ನು ಕಿತ್ತು ಸರಿಯಾದ ಕ್ರಮಬದ್ಧವಾಗಿ ಡಾಂಬರೀಕರಣ ಮಾಡಬೇಕು. ಇಲ್ಲವಾದರೆ ಕೆಲಸ ಮಾಡಲು ಬಿಡುವುದಿಲ್ಲ. ನಿಮ್ಮ ಖುಷಿ ಪ್ರಕಾರ ಕೆಲಸ ಮಾಡುವುದಲ್ಲ. ಮಾಡಿರುವ ಕೆಲಸ ಸ್ವಲ್ಪ ದಿನವಾದರೂ ಬಾಳಿಕೆ ಬರಬೇಕು ಎಂದು ಕಾಮಗಾರಿಗೆ ಬಂದಿರುವ ವಾಹನಗಳನ್ನು ತಡೆಹಿಡಿದರು.

ಆದರೆ ಈ ಸಂದರ್ಭ ಸಂಬಂಧಿಸಿದ ಎಂಜಿನಿಯರಾಗಲೀ, ಗುತ್ತಿಗೆದಾರರಾಗಲೀ ಇರಲಿಲ್ಲ. ನಮಗೆ ಇಷ್ಟೇ ಕಾಮಗಾರಿ ಮಾಡಲು ಸೂಚಿಸಿದ್ದಾರೆ ಎಂದು ಕಾರ್ಮಿಕರು ತಿಳಿಸಿದರು. ಆದರೆ ಪಟ್ಟು ಬಿಡದ ಗ್ರಾಮಸ್ಥರು ಮಾಡಿರುವ ಕೆಲಸವನ್ನು ಸಂಪೂರ್ಣವಾಗಿ ಕೀಳಿಸಿ ಕ್ರಮಬದ್ಧವಾಗಿ ಗುಂಡಿ ಮುಚ್ಚಿಸಿ ಡಾಂಬರು ಹಾಕುವವರೆಗೆ ನಿಂತು ಮಾಡಿಸಿದರು. ಇನ್ಯಾವತ್ತೂ ಎಲ್ಲಿಯೂ ಈ ರೀತಿಯ ಕಳಪೆ ಕೆಲಸ ಮಾಡಬಾರದು. ಇದು ನಿಮಗೆ ಯಾವತ್ತೂ ಪಾಠವಾಗಬೇಕು ಎಂದು ಹೇಳಿ ಕಳುಹಿಸಿದರು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್‌ ಕುಮಾರ್‌, ಸದಸ್ಯರಾದ ರಾಮಮೂರ್ತಿ, ಭಾಸ್ಕರ್‌, ಗ್ರಾಮಸ್ಥರಾದ ಜಯಂತ್‌ ತೆಂಡೂಲ್ಕರ್‌, ಅಂಬರೀಶ್‌ ಭಟ್‌, ಟಿಟ್ಟು ತೋಮಸ್‌, ಯೊಗೀಶ್‌ ಭಟ್‌, ವೀರೇಂದ್ರ, ಜಗದೀಶ್‌ ಭಟ್‌, ಶೇಖರ ಶೆಟ್ಟಿ, ಅಬ್ಬಕ್ಕ, ಮಹೇಶ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ